ADVERTISEMENT

ಮಹತ್ವದ ಸ್ವರೂಪ ಪಡೆದ ಕೃಷಿ ವಿಜ್ಞಾನ

​ಪ್ರಜಾವಾಣಿ ವಾರ್ತೆ
Published 22 ಮೇ 2012, 5:30 IST
Last Updated 22 ಮೇ 2012, 5:30 IST

ಧಾರವಾಡ: `ಮೂಲವಿಜ್ಞಾನ ಅಧ್ಯಯನದಿಂದ ಸಂಶೋಧನೆಗೆ ಹಾಗೂ ವಿದ್ಯಾರ್ಥಿಗಳಿಗೆ ವಿಷಯ ಪರಿಣಿತಿಯ ಜೊತೆಗೆ ಭವಿಷ್ಯತ್ತಿನ ಅಧ್ಯಯನಕ್ಕೆ ಸಹಕಾರಿಯಾಗಲಿದೆ~ ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಆರ್.ಆರ್.ಹಂಚಿನಾಳ ಹೇಳಿದರು.

ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಕರ್ನಾಟಕ ವಿಶ್ವವಿದ್ಯಾಲಯದ ವಿಶೇಷ ಯೋಜನೆಯಲ್ಲಿ ಶಿಷ್ಯವೇತನ ಪಡೆದ ನೂರು ವಿದ್ಯಾರ್ಥಿಗಳ ಹದಿನೈದು ದಿನಗಳ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವವಿದ್ಯಾಲಯದ ಶಿಷ್ಯವೇತನದ ಯೋಜನೆ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ವಿದ್ಯಾರ್ಥಿಗಳು ಈ ಯೋಜನೆ ಸದುಪಯೋಗಪಡಿಸಿಕೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳ ಭವಿಷ್ಯತ್ತಿನ ಅಧ್ಯಯನಕ್ಕೆ ಸಹಕಾರಿಹಾಗಿಲಿದ್ದು, ಅವರ ಸರ್ವಾಂಗೀಣ ಬೆಳವಣಿಗೆಗೆ ಅವಶ್ಯಕವಾಗಲಿದೆ. ಮೂಲ ವಿಜ್ಞಾನ ಅಧ್ಯಯನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರೆ ಹಂತ ಹಂತವಾಗಿ ಆ ವಿಷಯದಲ್ಲಿ ಪರಿಣತಿ ಹೊಂದಿ ವಿಜ್ಞಾನಿಗಳಾಗಿ ರೂಪಿಸುವಲ್ಲಿ ಸಹಕಾರಿಯಾಗಬಲ್ಲದು ಎಂದರು.

ಇಂದು ನಾವು ವಿಜ್ಞಾನವನ್ನು ನಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿಯೂ ಅನುಸರಿಸುತ್ತಿದ್ದೇವೆ. ವಿಜ್ಞಾನಗಳಲ್ಲಿ ಕೃಷಿ ವಿಜ್ಞಾನ ಇಂದು ಹೆಚ್ಚಿನ ಸ್ವರೂಪ ಪಡೆದುಕೊಂಡು ಅನೇಕ ಅವಕಾಶಗಳನ್ನು ಒದಗಿಸಬಲ್ಲಂಥ ವಿಜ್ಞಾನವಾಗಿದೆ. 

ಮೂಲವಿಜ್ಞಾನ ವಿಷಯಗಳ ಅಧ್ಯಯನದಿಂದ ಪ್ರತಿಭಾವಂತ ವಿದ್ಯಾರ್ಥಿಗಳು ಅಬ್ದುಲ್ ಕಲಾಂರಂತಹ ವಿಜ್ಞಾನಿಗಳಾಗಿ ರೂಪುಗೊಳ್ಳಬೇಕು ಎಂದು ಸಲಹೆ ನೀಡಿದರು.ಕವಿವಿ ಕುಲಪತಿ ಪ್ರೊ.ಎಚ್.ಬಿ.ವಾಲೀಕಾರ ಅಧ್ಯಕ್ಷತೆ ವಹಿಸಿ, ಈ ಯೋಜನೆಯ ಮುಖ್ಯ ಉದ್ದೇಶವೆಂದರೆ ವಿದ್ಯಾರ್ಥಿಗಳಲ್ಲಿ ಮೂಲ ವಿಜ್ಞಾನದ ಆಸಕ್ತಿ ಬೆಳೆಸಿ ಅವರನ್ನು ವಿಜ್ಞಾನಿಗಳನ್ನಾಗಿ ರೂಪಿಸುವಂತಹ ಒಂದು ಮಹತ್ವದ ಯೋಜನೆಯಾಗಿದೆ.

ವಿದ್ಯಾರ್ಥಿಗಳು ತಮ್ಮ ಭವಿಷ್ಯದಲ್ಲಿ ಶಿಕ್ಷಕ ಹಾಗೂ ಸಂಶೋಧಕರಾಗಿ ಬೆಳಯಲು ಈ ಅವಕಾಶ ಉತ್ತಮವಾಗಿದ್ದು, ಈ ಯೋಜನೆಯಲ್ಲಿ ವಿಷಯ ಪರಿಣಿತರಿಂದ ತರಬೇತಿ ನೀಡಲಾಗುವುದು. ಪ್ರತಿಯೊಬ್ಬ ವಿದ್ಯಾರ್ಥಿಯು ಈ ಯೋಜನೆಯಲ್ಲಿ ತಿಂಗಳಿಗೆ ಒಂದುಸಾವಿರ ರೂಪಾಯಿಗಳಂತೆ ಪ್ರತಿ ತಿಂಗಳ ಶಿಷ್ಯವೇತನ ನೀಡಲಾಗುವುದು ಇಂದು ಪದವಿ ಹಂತದ ಮೂರು ವರ್ಷಗಳಲ್ಲಿ ವಿದ್ಯಾರ್ಥಿಗಳು ಈ ಲಾಭ ಪಡೆಯುತ್ತಾರೆ ಎಂದರು.

ಕುಲಸಚಿವ ಪ್ರೊ.ಎಸ್.ಬಿ.ಹಿಂಚಿಗೇರಿ ಮತ್ತು ಸಿಂಡಿಕೇಟ್ ಸದಸ್ಯರು ಮತ್ತು ಪ್ರಾಧ್ಯಾಪಕರು ಇದ್ದರು.
ಯೋಜನೆಯ ಸಂಯೋಜಕ ಪ್ರೊ.ಎಸ್.ಟಿ.ನಂದಿಬೇವೂರು ಸ್ವಾಗತಿಸಿ ಪರಿಚಯಿಸಿದರು. ಸುಧಾ ಅಂಗಡಿ ಪ್ರಾರ್ಥಿಸಿದರು. ಡಾ.ತಾರಾನಾಥ ನಿರೂಪಿಸಿದರು. ಪ್ರೊ.ನಿರಂಜನಮೂರ್ತಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.