ADVERTISEMENT

ಮುಸ್ಲಿಮರು ಹಸು ಸಾಕುವುದು ತಪ್ಪು ಎಂದು ಬಿಂಬಿಸುತ್ತಿದೆ ಬಿಜೆಪಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2017, 6:40 IST
Last Updated 17 ಅಕ್ಟೋಬರ್ 2017, 6:40 IST
ಧಾರವಾಡದ ಕಾಲೇಜು ರಸ್ತೆಯಲ್ಲಿರುವ ನೌಕರರ ಭವನದಲ್ಲಿ ಸೋಮವಾರ ನಡೆದ ಕಾಂಗ್ರೆಸ್‌ ಸಮಾವೇಶಕ್ಕೂ ಮೊದಲು ಭಿನ್ನಮತ ಉಪಶಮನಗೊಳಿಸಲು ಕೆ.ಸಿ.ವೇಣುಗೋಪಾಲ್‌ ಮುಖಂಡರ ಸಭೆ ನಡೆಸಿದರು
ಧಾರವಾಡದ ಕಾಲೇಜು ರಸ್ತೆಯಲ್ಲಿರುವ ನೌಕರರ ಭವನದಲ್ಲಿ ಸೋಮವಾರ ನಡೆದ ಕಾಂಗ್ರೆಸ್‌ ಸಮಾವೇಶಕ್ಕೂ ಮೊದಲು ಭಿನ್ನಮತ ಉಪಶಮನಗೊಳಿಸಲು ಕೆ.ಸಿ.ವೇಣುಗೋಪಾಲ್‌ ಮುಖಂಡರ ಸಭೆ ನಡೆಸಿದರು   

ಧಾರವಾಡ: ‘ಮುಸ್ಲಿಮರು ಹಸು ಸಾಕುವುದೇ ಅಪರಾಧ ಎಂಬಂತೆ ಬಿಜೆಪಿ ಬಿಂಬಿಸುತ್ತಿದೆ. ಇಂಥ ಧೋರಣೆಗಳಿಂದ ಸಮಾಜವನ್ನು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ’ ಎಂದು ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಆರೋಪಿಸಿದರು.

‘ಮನೆ ಮನೆಗೆ ಕಾಂಗ್ರೆಸ್‌’ ಪ್ರಚಾರ ಕುರಿತ ಪರಿಶೀಲನಾ ಸಭೆಯಲ್ಲಿ ಸೋಮವಾರ ಪಾಲ್ಗೊಂಡು ಮಾತನಾಡಿದ ಅವರು, ‘ಜಾತ್ಯತೀತ ತತ್ವದಲ್ಲಿ ನಂಬಿಕೆ ಇಟ್ಟಿರುವ ಕಾಂಗ್ರೆಸ್‌ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಪಕ್ಷವಾಗಿದೆ. ಸಮಾಜ ವಿಭಜಿಸುವ ರಾಜಕೀಯವನ್ನು ಎಂದಿಗೂ ಮಾಡಿಲ್ಲ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ದೇಶವನ್ನು ಒಡೆದು ಆಳುವ ಹುನ್ನಾರ ಮಾಡುತ್ತಿದೆ’ ಎಂದು ಟೀಕಿಸಿದರು.

‘ರಾಜ್ಯದಾದ್ಯಂತ ಅಂದಾಜು 53 ಸಾವಿರ ಬೂತ್‌ ಸಮಿತಿ ರಚಿಸಲಾಗಿದೆ. ಅವುಗಳು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕು’ ಎಂದು ಸಲಹೆ ಮಾಡಿದರು.
‘ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಪ್ರಧಾನಿ ಮೋದಿ ಅವರು ಒಳ್ಳೆಯ ದಿನಗಳು ಬರಲಿವೆ ಎಂದು ಹೇಳುತ್ತಿದ್ದರು. ಈಗ ಅವರ ಒಳ್ಳೆಯ ದಿನಗಳು ಮುಗಿಯುತ್ತಾ ಬಂದಿವೆ. 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದ್ದು, ರಾಹುಲ್ ಗಾಂಧಿ ಪ್ರಧಾನಿಯಾಗಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಬೆಳಗಾವಿ ವಿಭಾಗ ಮಟ್ಟದ ಉಸ್ತುವಾರಿ ಮಾಣಿಕಂ ಟಾಗೂರ್‌, ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ, ಶಾಸಕ ಶ್ರೀನಿವಾಸ ಮಾನೆ, ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ನಾಗರಾಜ ಛಬ್ಬಿ, ಕೆಪಿಸಿಸಿ ಉಪಾಧ್ಯಕ್ಷ ಎ.ಎಂ. ಹಿಂಡಸಗೇರಿ, ಎಸ್.ಎಫ್. ಜಕ್ಕಪ್ಪನವರ, ದೀಪಕ ಚಿಂಚೋರೆ, ಪಪ್ಪಿ ರಾಯನಗೌಡರ, ವಿ.ಡಿ. ಕಾಮರಡ್ಡಿ, ಎಚ್.ವಿ. ಮಾಡಳ್ಳಿ, ದಾನಪ್ಪ ಕಬ್ಬೇರ, ಸುಭಾಸ ಶಿಂಧೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.