ಹುಬ್ಬಳ್ಳಿ: ರಾಜ್ಯದ ನಾನಾ ಕಡೆಗಳಿಂದ ಬಂದಿದ್ದ ಲಕ್ಷಾಂತರ ಭಕ್ತರ ಪಾಲ್ಗೊಳ್ಳುವಿಕೆಯೊಂದಿಗೆ ಅವತಾರ ಪುರುಷ ಚಾಂಗದೇವರ ಉರುಸ್ ಶುಕ್ರವಾರ ನವಲಗುಂದ ತಾಲ್ಲೂಕಿನ ಯಮನೂರು ಕ್ಷೇತ್ರದಲ್ಲಿ ಸಂಭ್ರಮದಿಂದ ನೆರವೇರಿತು. ಹಿಂದೂ–ಮುಸ್ಲಿಮರು ಚಾಂಗದೇವ ಅಥವಾ ರಾಜಾ ಬಾಗ ಸವಾರರ ದರ್ಶನ ಪಡೆದು ಕೃತಾರ್ಥರಾದರು.
ಯಮನೂರು ಬಳಿಯ ಬೆಣ್ಣೆಹಳ್ಳದ ನೀರಿನಿಂದ ಚಾಂಗದೇವರು ದೀಪ ಬೆಳಗಿಸಿದ್ದರು ಎಂಬ ನಂಬಿಕೆ ಹಿನ್ನೆಲೆಯಲ್ಲಿ ಈ ನೀರಿಗೆ ಹೆಚ್ಚು ಮಹತ್ವವಿದೆ. ಅಲ್ಲದೆ, ಈ ನೀರಿನಲ್ಲಿ ಸ್ನಾನ ಮಾಡಿದರೆ ಚರ್ಮರೋಗ ನಿವಾರಣೆಯಾಗುತ್ತದೆ ಎಂಬ ಮಾತುಗಳಿರುವುದರಿಂದ ಅದೇ ನೀರಿನಲ್ಲಿ ಸ್ನಾನ ಮಾಡುವ, ಅದನ್ನು ಬಾಟಲಿಗಳಲ್ಲಿ ತುಂಬಿಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು. ಹೀಗೆ ಬೆಣ್ಣೆಹಳ್ಳದ ಮೂಲಕ ದೀಡ್ ನಮಸ್ಕಾರ ಹಾಕುತ್ತಾ ಬರುವ ಭಕ್ತರು ಸರದಿ ಸಾಲಿನಲ್ಲಿ ತೆರಳಿ ಚಾಂಗದೇವರ ದರ್ಶನ ಪಡೆಯುತ್ತಿದ್ದರು. ದೇವರಿಗೆ ಸಕ್ಕರೆ ಊದಿಸುವುದರ ಜೊತೆಗೆ, ಹರಕೆ ಹೊತ್ತಿದ್ದವರು ಬೆಳ್ಳಿಯ ಕುದುರೆ ಮೂರ್ತಿ, ಹಸ್ತ, ಮುಡಿಪು ಕಾಣಿಕೆ ನೀಡುತ್ತಿದ್ದರು.
ಹೈದರಾಬಾದ್ ಕರ್ನಾಟಕ ಭಾಗದಿಂದಷ್ಟೇ ಅಲ್ಲದೆ, ಮಹಾರಾಷ್ಟ್ರ, ಗೋವಾದಿಂದಲೂ ಸಹಸ್ರಾರು ಭಕ್ತರು ಉರುಸ್ನಲ್ಲಿ ಪಾಲ್ಗೊಂಡಿದ್ದರು. ಹೋಳಿ ಹುಣ್ಣಿಮೆಯ ದಿನದಿಂದ ಐದು ದಿನಗಳ ಕಾಲ ಈ ಜಾತ್ರೆ ನಡೆಯುವುದರಿಂದ ವಿವಿಧ ವಾಹನಗಳ ಮೂಲಕ ಬಂದಿದ್ದವರು ಯಮನೂರಿನ ಸುತ್ತ–ಮುತ್ತ ಇದ್ದ ಹೊಲಗಳಲ್ಲಿ ಟೆಂಟ್ ಹಾಕಿಕೊಂಡಿದ್ದರು.
ಈ ಬಾರಿ ಮಳೆ ಇರದೇ ಇದ್ದುದರಿಂದ ಪ್ರತಿ ವರ್ಷಕ್ಕಿಂತ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು. ಕೃಷಿ ಉಪಕರಣಗಳು ಹಾಗೂ ಗೃಹೋಪಯೋಗಿ ವಸ್ತುಗಳ ಖರೀದಿ ಜೋರಾಗಿತ್ತು. ನಗರದ ದಾಜಿಬಾನಪೇಟೆಯಲ್ಲಿರುವ ಶ್ರೀ ಚಾಂಗದೇವ ಮಹಾರಾಜರ ದೇವಸ್ಥಾನದಲ್ಲಿಯೂ ಅವತಾರ ಪುರುಷನಿಗೆ ಪೂಜೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.