ADVERTISEMENT

`ರೈತರಿಗೆ ನೀಡಿದ ಭರವಸೆ ಈಡೇರಿಸುವೆ'

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2013, 6:48 IST
Last Updated 25 ಏಪ್ರಿಲ್ 2013, 6:48 IST

ನವಲಗುಂದ: `ಕೆಜೆಪಿ ಅಧಿಕಾರಕ್ಕೆ ಬಂದರೆ ದೇಶದ ಬೆನ್ನೆಲುಬಾಗಿರುವ ಅನ್ನದಾತ ರೈತ ಇನ್ನು ಮುಂದೆ ಯಾರಿಗೂ ಕೈಚಾಚದಂತಹ ಯೋಜನೆಗಳನ್ನು ಜಾರಿಗೆ ತರುತ್ತೇನೆ' ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.

ಅವರು ಬುಧವಾರ ಸಂಜೆ ಇಲ್ಲಿಯ ಮಾಡೆಲ್ ಹೈಸ್ಕೂಲ್ ಮೈದಾನದಲ್ಲಿ ಏರ್ಪಡಿಸಿದ ಕೆಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಜನರನ್ನುದ್ದೇಶಿಸಿ ಮಾತನಾಡಿದರು.

`ಕೆಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಒಂದು ಲಕ್ಷ ರೂ. ವರೆಗಿನ ರೈತರ ಸಾಲ ಮನ್ನಾ ಮಾಡುತ್ತೇನೆಂದು ರಕ್ತದಲ್ಲಿ ಬರೆದುಕೊಡುತ್ತೇನೆ' ಎಂದು ಅವರು ಭರವಸೆ ನೀಡಿದರು.

ರೈತರಿಗೆ ರೂ 500 ಮಾಸಾಶನ, ಬಡ್ಡಿರಹಿತ ಸಾಲ ನೀಡಲು ನಿರ್ಧರಿಸಿದ್ದೇನೆ. ನಾನು ಆರ್ಥಿಕ ತಜ್ಞನಲ್ಲ. ಸೋರಿಕೆ ತಡೆದು ಖಜಾನೆ ತುಂಬಿಸಿ ್ಙ 2 ಲಕ್ಷ ಕೋಟಿ ಬಜೆಟ್ ಮಂಡಿಸಬೇಕೆಂಬ ಉದ್ದೇಶ ಹೊಂದಿದ್ದು, ದೇಶದಲ್ಲಿಯೇ ಕರ್ನಾಟಕ ರಾಜ್ಯವನ್ನು ಶಕ್ತಿಶಾಲಿ ರಾಜ್ಯವನ್ನಾಗಿ ರೂಪಿಸುವ ದೃಢ ಸಂಕಲ್ಪ ಹೊಂದಿದ್ದೇನೆ' ಎಂದರು.

`ಬಂಡಾಯದ ನೆಲವಾದ ನರಗುಂದ- ನವಲಗುಂದ ರೈತರು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದು ನನಗೆ ಆನೆ ಬಲ ಬಂದಂತಾಗಿದೆ. ಎಲ್ಲರೂ ಕೆಜೆಪಿಗೆ ಮತ ನೀಡಿ ಕೈಬಲಪಡಿಸಬೇಕು' ಎಂದು ಮನವಿ ಮಾಡಿಕೊಂಡರು.

ಮುಳುಗುವ ಹಡಗು: ಬಿಜೆಪಿ ಈಗ ಮುಳುಗುತ್ತಿರುವ ಹಡಗಾಗಿದ್ದು, ಅದರ ನಾಯಕ ಜಗದೀಶ ಶೆಟ್ಟರ್ ಆಗಿದ್ದಾರೆ. ಇನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ನಡೆಸಿರುವುದು ಹಾಸ್ಯಾಸ್ಪದವಾಗಿದೆ. ಮೇ.8 ರಂದು ಎಲ್ಲ ಪಕ್ಷದವರಿಗೂ ಯಡಿಯೂರಪ್ಪನ ಶಕ್ತಿ ಏನೆಂಬುದು ತಿಳಿಯಲಿದೆ ಎಂದರು.ರೈತ ಧುರೀಣ ಈಶ್ವರಚಂದ್ರ ಹೊಸಮನಿ ಮಾತನಾಡಿ, ಶಾಸಕ ಮುನೇನಕೊಪ್ಪ ಕಾರ್ಯವೈಖರಿಯನ್ನು ಟೀಕಿಸಿದರು.

ಸೇರ್ಪಡೆ: ಬಿಎಸ್‌ಆರ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಪುರಸಭೆ ಅಧ್ಯಕ್ಷ ಅಶೋಕ ಮಜ್ಜಿಗುಡ್ಡ ಬಿಎಸ್‌ಆರ್ ಕಾಂಗ್ರೆಸ್ ತೊರೆದು ಯಡಿಯೂರಪ್ಪನವರ ಸಮ್ಮುಖದಲ್ಲಿ ಕೆಜೆಪಿಗೆ ಸೇರ್ಪಡೆಗೊಂಡರು.  ನವಲಗುಂದ ಕೆಜೆಪಿ ಅಭ್ಯರ್ಥಿ ಡಾ.ಆರ್.ಬಿ. ಶಿರಿಯಣ್ಣವರ, ನರಗುಂದ ಕೆಜೆಪಿ ಅಭ್ಯರ್ಥಿ ಪರ್ವತಗೌಡ ಪಾಟೀಲ, ಈರಣ್ಣ ಪಟ್ಟೇದ, ಕೆ.ಡಿ.ಆನೇಗುಂದಿ, ಅಶೋಕ ಕಾಟವೆ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.