ಹುಬ್ಬಳ್ಳಿ: ಚಿಕ್ಕಜಾಜೂರು–ಹುಬ್ಬಳ್ಳಿ ಜೋಡಿಮಾರ್ಗದ ಕಾಮಗಾರಿ ನಡೆಯುತ್ತಿದ್ದು, ಹಳಿಯ ತಿರುವುಗಳನ್ನು ಮುಕ್ತಗೊಳಿಸಲು ಅಗತ್ಯವಾಗಿರುವ ಭೂಮಿಯನ್ನು ನೀಡಲು ರೈತರು ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುಂದಗೋಳ ತಾಲ್ಲೂಕಿನ ಕಳಸ ಮತ್ತು ಸಂಕ್ಲಿಪುರದಲ್ಲಿ ರೈತರೊಂದಿಗೆ ಗುರುವಾರ ರೈಲ್ವೆ ಅಧಿಕಾರಿಗಳು ಮಾತುಕತೆ ನಡೆಸಿದರು.
‘ಈ ಮಾರ್ಗದಲ್ಲಿ ಸದ್ಯ ರೈಲು ಗಂಟೆಗೆ 70–90 ಕಿ.ಮೀ. ವೇಗದಲ್ಲಿ ಸಂಚರಿಸುತ್ತಿದೆ. ತಿರುವುಗಳು ಹೆಚ್ಚಾಗಿರುವುದರಿಂದ ವೇಗ ಕಡಿಮೆಯಾಗಿದೆ. ಈ ತಿರುವುಗಳನ್ನು ಮುಕ್ತಗೊಳಿಸಿ, ಮಾರ್ಗ ನೇರವಾಗಿಸಿದರೆ, ಗಂಟೆಗೆ 130 ಕಿ.ಮೀ. ವೇಗದಲ್ಲಿ ರೈಲು ಸಂಚರಿಸಲಿದೆ’ ಎಂದು ಹುಬ್ಬಳ್ಳಿ ವಿಭಾಗೀಯ ರೈಲ್ವೆಯ ಉಪಪ್ರಧಾನ ಎಂಜಿನಿಯರ್ ಹರಿಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ತಿರುವುಗಳನ್ನು ಮುಕ್ತಗೊಳಿಸಲು ಹುಬ್ಬಳ್ಳಿ ಹಾಗೂ ಕುಂದಗೋಳ ತಾಲ್ಲೂಕಿನಲ್ಲಿ 15 ಎಕರೆ ಭೂಮಿ ಬೇಕಾಗುತ್ತದೆ. ಗುರುವಾರ ಕಳಸ ಮತ್ತು ಸಂಕ್ಲಿಪುರದಲ್ಲಿ ಒಂಬತ್ತು ರೈತರೊಂದಿಗೆ ಮಾತುಕತೆ ನಡೆಸಿದ್ದು, ಎಲ್ಲರೂ ಭೂಮಿ ಕೊಡಲು ಒಪ್ಪಿದ್ದಾರೆ. ಒಪ್ಪಿಗೆ ಪತ್ರಕ್ಕೆ ಸಹಿ ಹಾಕುವುದು ಬಾಕಿ ಇದೆ’ ಎಂದು ಅವರು ಹೇಳಿದರು.
‘ಭೂಮಿ ನೀಡಲು ಕೆಲವು ರೈತರಿಗೆ ಒಪ್ಪಿಗೆ ಇರಲಿಲ್ಲ. ಆದರೆ, ದೇಶಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಒಪ್ಪಿಗೆ ನೀಡಿದ್ದಾರೆ. ಮಾರುಕಟ್ಟೆ ದರಕ್ಕಿಂತ 4 ಪಟ್ಟು ಹೆಚ್ಚಿನ ಬೆಲೆಗೆ ಭೂಮಿ ಖರೀದಿಸಲಾಗುವುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.