ADVERTISEMENT

ಲೈಸನ್ಸ್ ಇಲ್ಲದ ಉದ್ದಿಮೆಗಳಿಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 7 ಜುಲೈ 2012, 2:30 IST
Last Updated 7 ಜುಲೈ 2012, 2:30 IST

ಹುಬ್ಬಳ್ಳಿ: ಸ್ವಚ್ಛತೆ ಇಲ್ಲದ ಲಾಡ್ಜ್, ಹೋಟೆಲ್, ಲೈಸನ್ಸ್ ಪಡೆಯದ ಅಂಗಡಿ, ಬಾರ್‌ಗಳು, ಕೃತಕವಾಗಿ ಹಣ್ಣು ಮಾಡಲು ರಾಸಾಯನಿಕ ಮಿಶ್ರಣ ಮಾಡಿ ಬಾಳೆಗೊನೆ ಸಂಗ್ರಹಿಸಿಟ್ಟ ಅಂಗಡಿ, ಮುಕ್ತವಾಗಿ ಮಾಂಸ ಮಾರಾಟಕ್ಕಿಟ್ಟ ಅಂಗಡಿ...

ನಗರದ ಜನತಾ ಬಜಾರ್, ದಾಜಿಬಾನ ಪೇಟೆ, ಅಂಚಟಗೇರಿ ಓಣಿಯಲ್ಲಿ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಾನಂದ ಮುತ್ತಣ್ಣವರ ಮತ್ತು ಆರೋಗ್ಯ ಅಧಿಕಾರಿ ಡಾ.ಪಿ.ಎನ್. ಬಿರಾದಾರ ನೇತೃತ್ವದ ತಂಡ  ಗುರುವಾರ ಸಂಜೆ ಪರಿಶೀಲನೆಗೆ ತೆರಳಿದ ವೇಳೆ ಕಂಡ ದೃಶ್ಯವಿದು.

ಲೈಸನ್ಸ್ ಇಲ್ಲದ ಅಂಗಡಿ ಮಾಲೀಕರನ್ನು ತರಾಟೆಗೆ ತೆಗೆದುಕೊಂಡ ಶಿವಾನಂದ ಮುತ್ತಣ್ಣವರ,
ಅಂತಹ ಅಂಗಡಿಗಳಿಗೆ ನೋಟಿಸ್ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪರಿಶೀಲನೆ ವೇಳೆ ಜನತಾ ಬಜಾರ್‌ನಲ್ಲಿರುವ ಸೂಪರ್ ಕ್ಯಾಸೆಟ್ ಸೆಂಟರ್, ಪ್ರಭಾತ್ ಎಲೆಕ್ಟ್ರೋನಿಕ್ಸ್, ರೆಲೇಯಬಲ್ ವೈನ್ಸ್ ಮುಂತಾದವುಗಳಲ್ಲಿ ಲೈಸನ್ಸ್ ಇರಲಿಲ್ಲ. ಕೆ.ಸಿ.ಕೊಠಾರಿ ವೈನ್ಸ್, ಧನ್ಯಶ್ರೀ, ಆನಂದ, ಮಹಾಲಕ್ಷ್ಮಿ ಲಾಡ್ಜ್‌ಗಳಲ್ಲಿ ಸ್ವಚ್ಛತೆ, ವಾಹನ ಪಾರ್ಕಿಂಗ್ ವ್ಯವಸ್ಥೆ ಇರಲಿಲ್ಲ. ಈ ಸಂಸ್ಥೆಗಳಿಗೆ ನೋಟಿಸ್ ನೀಡುವಂತೆ ಅಧಿಕಾರಿಗಳಿಗೆ ಶಿವಾನಂದ ತಿಳಿಸಿದರು.

ದಾಜಿಬಾನ ಪೇಟೆಯಲ್ಲಿ ರಾಚಪ್ಪ ಅಡಿಕಿ ಎಂಬವರ ಮಾಲೀಕತ್ವದ ಬಾಳೆಹಣ್ಣು ಅಂಗಡಿಯಲ್ಲಿ ಕೃತಕವಾಗಿ ಹಣ್ಣಾಗಿಸಲು ರಾಸಾಯನಿಕ ಸಿಂಪಡಿಸಿದ ಬಾಳೆ ಗೊನೆಯನ್ನು ಕಂಡು ಮಾಲೀಕರನ್ನು ಶಿವಾನಂದ ತರಾಟೆಗೆ ತೆಗೆದುಕೊಂಡರು.

ಈ ವೇಳೆ ರೊಚ್ಚಿಗೆದ್ದ ರಾಚಪ್ಪ ಮತ್ತು ಸ್ಥಳೀಯ ಕೆಲವರು, ಬಾಳೆ ಹಣ್ಣುಗಳನ್ನು ರಾಸಾಯನಿಕ ಸಿಂಪಡಿಸಿ ಹಣ್ಣು ಮಾಡಲು ಕೇಂದ್ರ ಸರ್ಕಾರದ ಅನುಮತಿ ಇದೆ ಎಂದು ಹರಿಯಾಣದ ಕೃಷಿ ಸಚಿವಾಲಯ ನೀಡಿದ ಪತ್ರವನ್ನು ನೀಡಿದರು. ಈ ವೇಳೆ ಕೆಲಹೊತ್ತು ಪರಸ್ಪರ ಮಾತಿನ ಚಕಮಕಿಯೂ ನಡೆಯಿತು. 15ಕ್ಕೂ ಹೆಚ್ಚು ಅಂಗಡಿ ಮತ್ತು ಲಾಡ್ಜ್‌ಗಳಿಗೆ ತೆರಳಿ ಪರಿಶೀಲನೆ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.