ADVERTISEMENT

ವರ್ಗಾವಣೆ ಕೌನ್ಸೆಲಿಂಗ್ ಮುಂದುವರಿಸಿ

​ಪ್ರಜಾವಾಣಿ ವಾರ್ತೆ
Published 14 ಜೂನ್ 2011, 6:20 IST
Last Updated 14 ಜೂನ್ 2011, 6:20 IST

ಧಾರವಾಡ: ಪ್ರಾಥಮಿಕ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗನ್ನು ಮುಂದುವರೆಸಬೇಕೆಂದು ಆಗ್ರಹಿಸಿ ಬೇರೆ, ಬೇರೆ  ಊರುಗಳಿಂದ ಆಗಮಿಸಿದ್ದ ಶಿಕ್ಷಕರು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಜೊತೆ ವಾಗ್ವಾದಕ್ಕಿಳಿದ ಪ್ರಸಂಗ ಸೋಮವಾರ ನಡೆಯಿತು.

ಇಲ್ಲಿನ ಡಯಟ್‌ನಲ್ಲಿ ಕಳೆದ ಐದು ದಿನಗಳಿಂದ ಪ್ರಾಥಮಿಕ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ನಡೆಯುತ್ತಿತ್ತು.  ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆ ಅಧಿನಿಯಮದ ಪ್ರಕಾರ ಕೇವಲ ಇಂತಿಷ್ಟು ಶೇಕಡಾವಾರು ವರ್ಗಾವಣೆ  ಮಾಡಲಾಗುತ್ತದೆ. ಅದು ಒಂದೇ ದಿನದಲ್ಲಿ ಪೂರ್ಣವಾದರೆ ಅಂದೇ ಕೌನ್ಸಲಿಂಗ್ ನಿಲ್ಲಿಸಬೇಕೆಂಬ ನಿಯಮವಿದೆ. ಅದರ ಪ್ರಕಾರ ಭಾನುವಾರ ರಾತ್ರಿಯೇ ನಿಗದಿಪಡಿಸಿದ ಶೇಕಡಾವಾರು ವರ್ಗಾವಣೆ ಮುಗಿದಿದ್ದರಿಂದ ಕೌನ್ಸೆಲಿಂಗ್ ನಿಲ್ಲಿಸಲಾಗಿತ್ತು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ಬೇರೆ, ಬೇರೆ ಊರುಗಳಿಂದ ಆಗಮಿಸಿದ್ದ ಶಿಕ್ಷಕರು ಕೌನ್ಸೆಲಿಂಗ್ ಮುಂದುವರಿಸಬೇಕು ಎಂದು ಪಟ್ಟು ಹಿಡಿದರು. ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಶಿಕ್ಷಕರ ನಡುವೆ ವಾಗ್ವಾದ ಸಹ ನಡೆಯಿತು. ಆಯುಕ್ತ ವೆಂಕಟೇಶ ಮಾಚಕನೂರ ಆಗಮಿಸಿ ತಿಳಿಹೇಳಿದಾಗ ಶಿಕ್ಷಕರು ಅಲ್ಲಿಂದ ತೆರಳಿದರು.

`ಖಾಲಿ ಇರುವ ಎಲ್ಲ ಸ್ಥಳಗಳಿಗೆ ವರ್ಗಾವಣೆ ಬಯಸುವ ಶಿಕ್ಷಕರಿಗೆ ವರ್ಗಾವಣೆಗೆ ಅವಕಾಶ ನೀಡಬೇಕು. ಒಂದು ಘಟಕದಿಂದ ಬೇರೆ ಘಟಕಕ್ಕೆ ವರ್ಗಬಯಸುವ ಶಿಕ್ಷಕರ ವರ್ಗಾವಣೆಯಲ್ಲಿ ಕೇವಲ ಶೇ. 1ರಷ್ಟು ಪ್ರಮಾಣದಲ್ಲಿ ಮಾಡಬೇಕೆಂದು ಸೂಚಿಸಿರುವುದರಿಂದ ಬಹಳಷ್ಟು ಶಿಕ್ಷಕರು ವಂಚಿತರಾಗುತ್ತಿದ್ದಾರೆ.
 
ಶಿಕ್ಷಕರು ಮಾನಸಿಕ ನೆಮ್ಮದಿಯಿಂದ ಇದ್ದರೆ ಮಾತ್ರ ಪರಿಣಾಮಕಾರಿ ಬೋಧನೆ ಮಾಡಲು ಸಾಧ್ಯ, ಈ ನಿಟ್ಟಿನಲ್ಲಿ ಖಾಲಿ ಇರುವ ಸ್ಥಳಗಳಿಗೆ ಕೌನ್ಸೆಲಿಂಗ್ ಮುಖಾಂತರ ಮತ್ತೊಂದು ಅವಕಾಶ ಕಲ್ಪಿಸಿಕೊಡಬೇಕು~ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಸವರಾಜ ಗುರಿಕಾರ ಶಿಕ್ಷಣ ಸಚಿವರನ್ನು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.