ಹುಬ್ಬಳ್ಳಿ: `ನಗರದ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕಾರ್ಯ ಪ್ರಗತಿಯಲ್ಲಿದ್ದು ಪೂರ್ಣ ಪ್ರಮಾಣದ ಭೂಮಿ ಹಸ್ತಾಂತರ ಪ್ರಕ್ರಿಯ ಶೀಘ್ರ ಪೂರ್ಣಗೊಳ್ಳಲಿದೆ. ಇದರ ನಂತರ ಹಂತಹಂತವಾಗಿ ಕಾಮಗಾರಿಯನ್ನು ಆರಂಭಿಸ ಲಾಗುವುದು~ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಕೆ.ಎಂ. ಬಸವರಾಜ ತಿಳಿಸಿದರು.
`ವಿಮಾನ ನಿಲ್ದಾಣ ಮೇಲ್ದರ್ಜೆ ಗೇರಿಸುವ ಪ್ರಕ್ರಿಯೆಗಾಗಿ 615 ಎಕರೆ ಜಾಗದಲ್ಲಿ ಈಗಾಗಲೇ 598 ಎಕರೆಯನ್ನು ಸ್ವಾದೀನಪಡಿಸಿಕೊಳ್ಳ ಲಾಗಿದೆ. ಉಳಿದ ಭೂಮಿಯ ಹಸ್ತಾಂತರಕ್ಕೆ ಸಂಬಂಧಪಟ್ಟು ಜಿಲ್ಲಾಧಿಕಾರಿ ಜೊತೆ ಮಾತನಾಡಿದ್ದು ಒಂದು ತಿಂಗಳೊಳಗೆ ಪ್ರಕ್ರಿಯೆ ಪೂರ್ಣಗೊಳ್ಳುವ ಭರವಸೆ ಇದೆ~ ಎಂದು ಸೋಮವಾರ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು ತಿಳಿಸಿದರು.
`ವಿಮಾನ ನಿಲ್ದಾಣಕ್ಕೆ ಕಂಪೌಂಡ್ ನಿರ್ಮಿಸುವುದಕ್ಕೆ ಸಂಬಂಧಿಸಿ ಪರಿಶೀಲನೆ 90 ಶೇಕಡಾ ನಡೆದಿದೆ. ಅಗ್ನಿ ಶಾಮಕ ಮಂಡಳಿ, ರನ್ವೇ ಅಭಿವೃದ್ಧಿ, ಟವರ್ ಕಟ್ಟಡ, ಟರ್ಮಿನಲ್ ಇತ್ಯಾದಿ ಕಾಮಗಾರಿ ಮೊದಲ ಹಂತದಲ್ಲಿ ನಡೆಯಲಿದೆ~ ಎಂದು ಅವರು ತಿಳಿಸಿದರು.
`ಮೊದಲ ಹಂತದಲ್ಲಿ 13 ಕಿ.ಮೀ ಉದ್ದದ ಕಂಪೌಂಡ್ ಗೋಡೆ ನಿರ್ಮಿಸಲುದ್ದೇಶಿಸಲಾಗಿದೆ. ಇದಕ್ಕಾಗಿ 13 ಕೋಟಿ ರೂಪಾಯಿ ಅಂದಾಜು ವೆಚ್ಚವಾಗಲಿದೆ. ರನ್ವೇಯನ್ನು ಈಗ ಇರುವ 5,400 ಅಡಿಯಿಂದ 7,500 ಅಡಿಗೆ ವಿಸ್ತರಿಸಲಾಗುವುದು~ ಎಂದು ಅವರು ತಿಳಿಸಿದರು.
ಜಾಗವನ್ನು ಸಂಪೂರ್ಣವಾಗಿ ಹಸ್ತಾಂತರ ಮಾಡಿದ ನಂತರ ತಾರಿಹಾಳ ರಸ್ತೆಯನ್ನು ಮುಚ್ಚಿ ಹೊಸ ರಸ್ತೆಯನ್ನು ಆರಂಭಿಸಬೇಕಾಗುತ್ತದೆ ಎಂದು ಹೇಳಿದ ಅವರು, ಸ್ಪೈಸ್ ಜೆಟ್ ಹಾಗೂ ಪಿಜಿಎಸ್ಎಸ್ ಏರ್ಲೈನ್ಸ್ ಹುಬ್ಬಳ್ಳಿಯಿಂದ ವಿಮಾನ ಹಾರಾಟ ಮಾಡಲು ಆಸಕ್ತಿ ತೋರಿದ್ದು 90 ಸೀಟುಗಳ ವಿಮಾನಗಳು ಬಂದ ಕೂಡಲೇ ಇಲ್ಲಿಂದ ಹಾರಾಟ ಆರಂಭಿಸಲು ಮುಂದಾಗಲಿವೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.