ADVERTISEMENT

ಸಣ್ಣ ನೀರಾವರಿಗೆ 1,500 ಕೋಟಿ ಕೋರಿಕೆ: ಕಾರಜೋಳ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2012, 8:45 IST
Last Updated 19 ಫೆಬ್ರುವರಿ 2012, 8:45 IST

ಹುಬ್ಬಳ್ಳಿ:  ಈ ಬಾರಿಯ ಬಜೆಟ್‌ನಲ್ಲಿ ಸಣ್ಣ ನೀರಾವರಿ ಇಲಾಖೆಗೆ 1500 ಕೋಟಿ ರೂಪಾಯಿ ಮೀಸಲಿಡಲು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ರನ್ನು ಕೋರಿರುವುದಾಗಿ ಸಚಿವ ಗೋವಿಂದ ಕಾರಜೋಳ  ಹೇಳಿದರು.

ಶನಿವಾರ ಸುದ್ದಿಗೋಷ್ಠಿ ಯಲ್ಲಿ ಮಾತ ನಾಡಿ ಕಳೆದ ವರ್ಷ ಕೇಂದ್ರದ ಅನು ದಾನ, ನಬಾರ್ಡ್ ನೆರವು ಸೇರಿದಂತೆ ಇಲಾಖೆಗೆ 800 ಕೋಟಿ ರೂಪಾಯಿ ನೀಡಲಾಗಿತ್ತು.  ರಾಜ್ಯ ಸರ್ಕಾರದಿಂದ ಹೆಚ್ಚಿನ ನೆರವು ನಿರೀಕ್ಷಿಸಲಾಗಿದೆ. ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಿಎಂ ಮನವಿ ಮಾಡಲಾಗಿದೆ ಎಂದರು.

ಮುಂದಿನ 7ರಿಂದ 8 ವರ್ಷಗಳಲ್ಲಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆ ಗಳು ಮರುಭೂಮಿಯಾಗಿ ಪರಿವರ್ತ ನೆಗೊಳ್ಳಲಿವೆ ಎಂಬ ತಜ್ಞರ ವರದಿಯ ಹಿನ್ನೆಲೆ ಯಲ್ಲಿ ಅಂತರ್ಜಲ ಮರು ಪೂರಣಕ್ಕೆ ಆದ್ಯತೆ ನೀಡಲು ಉದ್ದೇಶಿ ಸಲಾಗಿದೆ ಎಂದರು.

ಒತ್ತುವರಿ ತೆರವು: ರಾಜ್ಯದಲ್ಲಿ ನಗರ ಪ್ರದೇಶಗಳಲ್ಲಿ ಕೆರೆಗಳ ಒತ್ತುವರಿ ಹೆಚ್ಚಾಗಿದ್ದು, ತಮ್ಮ ಅವಧಿಯಲ್ಲಿ 2,258 ಕೆರೆಗಳ ಒತ್ತುವರಿ ತೆರವು ಗೊಳಿಸಿ 5,994 ಹೆಕ್ಟೇರ್ ತೆರವು ಗೊಳಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 75 ಕೆರೆ, ರಾಮನಗರ 82, ಚಿತ್ರದುರ್ಗ 66, ಚಿಕ್ಕ ಬಳ್ಳಾಪುರ 125, ಶಿವಮೊಗ್ಗ 123, ತುಮಕೂರು 220, ಹಾಸನ 106, ಹಾವೇರಿ ಜಿಲ್ಲೆಗಳಲ್ಲಿ 88 ಕೆರೆ ಗಳು ಒತ್ತುವರಿಗೆ ಒಳಗಾಗಿದ್ದವು  ಎಂದರು. 

 ನೀರು ಕಾಣದ ಕೆರೆಗಳು: ಬರ ಪರಿಸ್ಥಿತಿಯಿಂದಾಗಿ ರಾಜ್ಯದಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ 3470 ಕೆರೆಗಳಲ್ಲಿ ಈ ವರ್ಷ ಕೇವಲ 28 ಕೆರೆಗಳು ಮಾತ್ರ ತುಂಬಿವೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಬೀದರ್‌ನ 6 ಕೆರೆಗಳು ಮಾತ್ರ ತುಂಬಿವೆ. 1415 ಕೆರೆಗಳಿಗೆ ಒಂದು ಹನಿ ನೀರು ಬಂದಿಲ್ಲ.

ಕೆರೆ ತುಂಬುವ ಯೋಜನೆ: ವಿಜಾಪುರ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿದ್ದ ಕೆರೆ ತುಂಬುವ ಯೋಜನೆಯ ಮೊದಲ ಹಂತದಲ್ಲಿ ಈಗಾಗಲೇ ರೂ.108 ಕೋಟಿ ವೆಚ್ಚದ ಕಾಮಗಾರಿಗಳು ಪೂರ್ಣಗೊಂಡಿದ್ದು, ಎರಡನೇ ಹಂತದಲ್ಲಿ ಅಣಚಿ ಲಿಫ್ಟ್ ಯೋಜನೆಗೆ ರೂ.138 ಕೋಟಿ ಮೊತ್ತದ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಮೂರನೇ ಹಂತದಲ್ಲಿ ಬಸವನ ಬಾಗೇ ವಾಡಿ ಹಾಗೂ ಮುದ್ದೇಬಿಹಾಳ ತಾಲ್ಲೂಕು ಗಳಲ್ಲಿ ಯೋಜನೆ ಅನುಷ್ಠಾ ನಗೊಳ್ಳಲಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ರೂ.130 ಕೋಟಿ ವೆಚ್ಚ: ಧಾರವಾಡ ಜಿಲ್ಲೆಯಲ್ಲಿ ಇಲಾಖೆಯಿಂದ ರೂ.130 ಕೋಟಿ ವೆಚ್ಚದಲ್ಲಿ 211ಕಾಮಗಾರಿಗಳ ಅನುಷ್ಠಾನ ಕೈಗೊಂಡಿದ್ದು, ಅದರಲ್ಲಿ ಈಗಾಗಲೇ 126 ಕಾಮಗಾರಿಗಳು ಪೂರ್ಣ ಗೊಂಡಿವೆ. ಇದರಿಂದ 2080 ಹೆಕ್ಟೇರ್ ನೀರಾವರಿ ಸೌಲಭ್ಯ ಪಡೆಯಲಿದೆ. ಜಿಲ್ಲೆಯಲ್ಲಿ 9 ಕರೆಗಳ ವ್ಯಾಪ್ತಿಯಲ್ಲಿ 7.5 ಹೆಕ್ಟೇರ್ ಕೆರೆ ಒತ್ತುವರಿ ತೆರವುಗೊಳಿಸಲಾಗಿದೆ ಎಂದರು.
 

ಸಚಿವರ ಬೇಸರ
ಸದನದಲ್ಲಿ ಬಿಜೆಪಿ ಸಚಿವರಿಂದ ಬ್ಲ್ಯೂಫಿಲಂ ವೀಕ್ಷಣೆ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ರಾಜ್ಯ ರಾಜಕೀಯದಲ್ಲಿ ಇತ್ತೀಚಿನ ಕೆಲವು ವಿದ್ಯಮಾನಗಳು ಮೌಲ್ಯಾಧಾರಿತ ರಾಜಕಾರಣಕ್ಕೆ ವ್ಯತಿರಿಕ್ತವಾಗಿವೆ ಇದರಿಂದ ಬೇಸರವಾಗಿದೆ ಎಂದರು.

`ಸಾಮಾಜಿಕ ಕಳಕಳಿ ಇರುವವರನ್ನು ಚುನಾವಣೆಯಲ್ಲಿ ಆಯ್ಕೆ ಮಾಡದೇ ಜಾತಿ ಹಾಗೂ ಹಣ ಬಲಕ್ಕೆ ಪ್ರಾಧಾನ್ಯತೆ ಕೊಟ್ಟರೆ ಮೌಲ್ಯಗಳ ರಕ್ಷಣೆ ಸಾಧ್ಯವಿಲ್ಲ. ಇದರಲ್ಲಿ ಮತದಾರರ ತಪ್ಪು ಇದೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT