ADVERTISEMENT

ಸುಸಜ್ಜಿತ ತಾರಾಲಯ ಸ್ಥಾಪನೆಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2012, 4:05 IST
Last Updated 17 ನವೆಂಬರ್ 2012, 4:05 IST

ಹುಬ್ಬಳ್ಳಿ: `ಮಕ್ಕಳಲ್ಲಿರುವ ಸಂಶೋಧನಾ ಚಟುವಟಿಕೆಗಳಿಗೆ ನೆರವಾಗುವ ಉದ್ದೇಶದಿಂದ ಹುಬ್ಬಳ್ಳಿ-ಧಾರವಾಡ ನಗರದ ಸೂಕ್ತ ಜಾಗದಲ್ಲಿ ಸುಸಜ್ಜಿತವಾದ ತಾರಾಲಯ ನಿರ್ಮಿಸಲು ಯೋಜನೆ ರೂಪಿಸಲಾಗಿದೆ~ ಎಂದು ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಮಹೇಶ ಟೆಂಗಿನಕಾಯಿ ತಿಳಿಸಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಜಿಲ್ಲಾ ವಿಜ್ಞಾನ ಸಮಿತಿ ಮತ್ತು ಬಾಲವಿಕಾಸ ಅಕಾಡೆಮಿ ಆಶ್ರಯಲ್ಲಿ ನಗರದ ವೀರಾಪುರ ಓಣಿಯ ಸರ್ಕಾರಿ ಕನ್ನಡ ಗಂಡುಮಕ್ಕಳ ಶಾಲೆಯಲ್ಲಿ ಶುಕ್ರವಾರ ಜರುಗಿದ 20ನೇ ಜಿಲ್ಲಾ ಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

`ಈ ಉದ್ದೇಶಕ್ಕಾಗಿ ಐದು ಎಕರೆ ಜಾಗ ನೀಡುವಂತೆ ಹುಡಾಕ್ಕೆ ಮನವಿ ಸಲ್ಲಿಸಲಾಗಿದ್ದು, ಪ್ರಾಥಮಿಕ ಹಂತದ ಕೆಲಸ ಆರಂಭಿಸಲಾಗಿದೆ. ಬೆಂಗಳೂರು, ಹೈದರಾಬಾದ್, ಕೋಲ್ಕತ್ತಾ ಮುಂತಾದ ಕಡೆ ತೆರಳಿ ಅಲ್ಲಿನ ತಾರಾಲಯಗಳನ್ನು ವೀಕ್ಷಿಸಿದ ಬಳಿಕ, ರಾಜ್ಯದಲ್ಲೇ ಅತ್ಯುತ್ತಮವಾದ ತಾರಾಲಯ ನಿರ್ಮಿಸಲು ನೀಲನಕ್ಷೆ ತಯಾರಿಸಲಾಗುವುದು~ ಎಂದರು.

`ಓದಿನ ಜೊತೆಗೆ ತಾರ್ಕಿಕವಾಗಿ ಯೋಚಿಸುವಂತಹ ಅನ್ವೇಷಣಾ ಮನೋಭಾವನೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದು ಇಂದಿನ ಅಗತ್ಯವಾಗಿದೆ. ಯಾಂತ್ರಿಕ ಬದುಕಿನ ಮಧ್ಯೆ ವಿದ್ಯಾರ್ಥಿಗಳು ಕೇವಲ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಪುಸ್ತಕ ಹುಳುಗಳಾಗುತ್ತಿದ್ದಾರೆ. ಪರಿಣಾಮ ದೈಹಿಕ, ಮಾನಸಿಕವಾಗಿ ಬಳಲುತ್ತಿದ್ದಾರೆ. ಇದರಿಂದ ಹೊರಬರಲು ಹೊಸ ಚಿಂತನೆ, ಶೋಧನೆಯತ್ತ ಮಕ್ಕಳ ಆಸಕ್ತಿ, ಗಮನವನ್ನು ಕೊಂಡೊಯ್ಯುಬೇಕಾಗಿದೆ~ ಎಂದವರು ಅಭಿಪ್ರಾಯಪಟ್ಟರು.

ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ಮುಳ್ಳೂರು ಮಾತನಾಡಿದರು. ಜಿಲ್ಲಾ ವಿಜ್ಞಾನ ಸಮಿತಿಯ ಅಧ್ಯಕ್ಷ ಬಿ.ಎಸ್. ಸೊಪ್ಪಿನ ಅಧ್ಯಕ್ಷತೆ ವಹಿಸಿದ್ದರು. 

ಪಾಲಿಕೆ ಸದಸ್ಯ ಶಿವಾನಂದ ಮುತ್ತಣ್ಣವರ, ಎಂ.ಎಲ್. ಹಂಚಾಟೆ, ಎಂ.ಎಫ್.ನಾಯ್ಕರ್, ಆರ್.ಎಂ.ಗೋಕಾವಿ, ಎಂ.ಎಫ್.ಕುಂದಗೋಳ, ಡಾ.ಶಿವಾನಂದ ಚೌಗಲಾ, ಡಾ. ಬಿ.ಎಸ್.ಗಿರಿಯಪ್ಪನವರ, ಡಾ. ಯತ್ನಟ್ಟಿ ಮತ್ತಿತರರು ಇದ್ದರು. ಸ್ಪರ್ಧೆಯಲ್ಲಿ ಜಿಲ್ಲೆಯ ನಗರ ಪ್ರದೇಶದ 11 ಮತ್ತು ಗ್ರಾಮೀಣ ಭಾಗದ 18 ಶಾಲೆಗಳ ಒಟ್ಟು 29 ತಂಡಗಳು ಭಾಗವಹಿಸ್ದ್ದಿದವು.

ಜಯಶ್ರೀ ಇಂಡಿ ಸ್ವಾಗತಿಸಿದರು. ಸಮನ್ವಯಕಾರ ಲಿಂಗರಾಜ ರಾಮಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಜಿ. ಭೂಶೆಟ್ಟಿ ನಿರೂಪಿಸಿದರು. ಪಿ.ಎಚ್.ಕಂಬಳಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.