ADVERTISEMENT

ಹಿಂದಿಗೆ ರಾಷ್ಟ್ರಭಾಷೆಯ ಸ್ಥಾನ ಕಲ್ಪಿಸಿದ ಗಾಂಧೀಜಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2012, 6:00 IST
Last Updated 22 ಅಕ್ಟೋಬರ್ 2012, 6:00 IST

ಧಾರವಾಡ: `ಭಾರತದಲ್ಲಿ ಬಹಳಷ್ಟು ಭಾಷೆಗಳು ಪ್ರಚಲಿತವಿದ್ದರೂ ಮಹಾತ್ಮ ಗಾಂಧೀಜಿಯವರು ಹಿಂದಿಗೆ ರಾಷ್ಟ್ರೀಯ ಭಾಷೆಯ ಸ್ಥಾನಮಾನ ದೊರಕಿಸಿಕೊಟ್ಟರು~ ಎಂದು ನವದೆಹಲಿಯ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ದೂರ ಶಿಕ್ಷಣ ವಿಭಾಗದ ನಿರ್ದೇಶಕಿ ಡಾ.ನಳಿನಿ ಲೇಲೆ ಹೇಳಿದರು.

ನಗರದಲ್ಲಿ ಭಾನುವಾರ ಸಭಾದ ದೂರಶಿಕ್ಷಣ ಶಾಖೆ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, `ಜೀವನದಲ್ಲಿ ಮೌಲ್ಯಗಳನ್ನು ಬೆಳೆಸಿಕೊಂಡು ಉತ್ತಮರಾಗಿ ಸಮಾಜದಲ್ಲಿ ಬಾಳಿದರೆ ನಿಮ್ಮ ಆದರ್ಶವನ್ನು ಇತರರು ಪಾಲಿಸುತ್ತಾರೆ. ವಿದ್ಯಾಭ್ಯಾಸವು ಅಜ್ಞಾನದಿಂದ ಜ್ಞಾನದ ಕಡೆಗೆ ಕತ್ತಲಿನಿಂದ ಬೆಳಕಿನೆಡೆಗೆ ಹೋಗುವ ಮಾರ್ಗವಾಗಿದೆ~ ಎಂದರು.

ಡಾ.ಭಾರತ ಭೂಷಣ ಮಾತನಾಡಿ, `ದೂರಶಿಕ್ಷಣ ಮೊದಲು ವಿದ್ಯಾರ್ಥಿಗಳಿಗೆ ಶಿಕ್ಷಣ ಪರಿಕರದ ಮೂಲಕ ವಿದ್ಯಾಭ್ಯಾಸ ನೀಡಲಾಗುತ್ತಿತ್ತು. ಇಂದು ವಿದ್ಯುನ್ಮಾನ ಹಾಗೂ ತಂತ್ರಜ್ಞಾನ ಸಹಾಯದಿಂದ ದೂರದಲ್ಲಿದ್ದ ಶಿಕ್ಷಕ ತನ್ನ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಾನೆ~ ಎಂದರು.

ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಕುಲಪತಿ ಎಚ್.ಹನುಮಂತಪ್ಪ, `ಬಹಳಷ್ಟು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಪೂರ್ತಿಗೊಳಿಸಲು ಸಾಧ್ಯವಾಗದಿದ್ದಾಗ ದೂರ ಶಿಕ್ಷಣ ವರದಾನವಾಗಿದೆ~ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕುಲಾಧಿಪತಿ ಡಾ.ವಿ.ಎಸ್.ಮಳಿಮಠ ಮಾತನಾಡಿ, `ಚೆನ್ನೈನಲ್ಲಿದ್ದ ದೂರ ಶಿಕ್ಷಣ ಇಲಾಖೆಯನ್ನು ಧಾರವಾಡಕ್ಕೆ ಸ್ಥಳಾಂತರಿಸಲಾಗಿದೆ. ಅತೀ ಕಡಿಮೆ ಖರ್ಚಿನಲ್ಲಿ ಶಿಕ್ಷಣವನ್ನು ಮನೆಯ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ದೂರ ಶಿಕ್ಷಣ ಸ್ಥಾಪಿಸಲಾಗಿದೆ~ ಎಂದರು.

ಡಾ.ಬಿ.ಚನ್ನಯ್ಯನ್, ಸೀತಾ ಲಕ್ಷ್ಮೀ, ಕಾರ್ಯಾಧ್ಯಕ್ಷ ಆರ್.ಎಫ್ ನೀರಲಕಟ್ಟಿ, ಆರ್.ರಾಜವೇಲ್, ಕೃಷ್ಣರಾವ್ ವೇದಿಕೆಯಲ್ಲಿದ್ದರು.  ದಿಲೀಪ ಸಿಂಗ್ ಪರಿಚಯಿಸಿದರು. ಡಾ.ಅಮರ ಜ್ಯೋತಿ ನಿರೂಪಿಸಿದರು. ನೀಲಂ ಹಾಗೂ ಸಂಗಡಿಗರು ರಾಷ್ಟ್ರಗೀತೆ ಹಾಡಿದರು. ಪ್ರೇಮಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ದುರ್ಗೇಶ ಹಾಗೂ ಸಂಗಡಿಗರು ಸ್ವಾಗತ ಗೀತೆ ಹಾಡಿದರು. ಡಾ.ಬಿ.ಬಿ.ಖೊಥ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.