ADVERTISEMENT

ಹುದ್ದೆ ಘನತೆಗೆ ಕುಂದು ತಂದ ಸಿಎಂ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 7:35 IST
Last Updated 3 ಫೆಬ್ರುವರಿ 2011, 7:35 IST

ಹುಬ್ಬಳ್ಳಿ: ‘ತಮ್ಮ ವಿರುದ್ಧ ವಾಮಾಚಾರ ನಡೆದಿದೆ ಎಂದು ಮಾತನಾಡುವ ಮುಖ್ಯಮಂತ್ರಿಗಳು ಹುದ್ದೆಯ ಘನತೆ ಕಳೆಯುತ್ತಿದ್ದಾರೆ’ ಎಂದು ಕಾಂಗ್ರೆಸ್ ವಕ್ತಾರ ಬಿ.ಎಲ್.ಶಂಕರ ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.‘ಸಂವಿಧಾನಕ್ಕೆ ಬದ್ಧತೆ ಸೂಚಿಸಿ ಅಧಿಕಾರದ ಪ್ರಮಾಣ ವಚನ ಸ್ವೀಕರಿಸಿದ್ದನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮರೆತಿದ್ದಾರೋ ಅಥವಾ ಉದ್ದೇಶಪೂರ್ವಕವಾಗಿ ಇಂತಹ ಹೇಳಿಕೆ ನೀಡಿದ್ದಾರೆಯೋ ಅರ್ಥವಾಗುತ್ತಿಲ್ಲ’ ಎಂದು ಪ್ರಶ್ನಿಸಿದರು.

‘ಈ ಬಾರಿ ಫೆಬ್ರುವರಿ ಅಂತ್ಯದ ಒಳಗೆ ರಾಜ್ಯ ಬಜೆಟ್ ಮಂಡನೆ ಮಾಡುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ. ಇದರ ಔಚಿತ್ಯ ಅರ್ಥವಾಗುತ್ತಿಲ್ಲ. ಕೇಂದ್ರದ ಬಜೆಟ್ ಮಂಡನೆಯಾದ ನಂತರ ರಾಜ್ಯಗಳ ಬಜೆಟ್ ಮಂಡಿಸುವುದು ಸಾಮಾನ್ಯ ಪ್ರಕ್ರಿಯೆ. ಮುಖ್ಯಮಂತ್ರಿಗಳ ತರಾತುರಿ ನೋಡಿದರೆ ಅವರ ಸಮಯ ಮುಗಿಯುತ್ತ ಬಂದಿದೆಯೇನೊ ಎನ್ನುವ ಅನುಮಾನ ಬರುತ್ತಿದೆ’ ಎಂದು ಅವರು ಹೇಳಿದರು.ಜಿಲ್ಲಾ ಹಾಗೂ ಮಹಾನಗರ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಎಸ್.ಶಿವಳ್ಳಿ, ಎ.ಎಂ.ಹಿಂಡಸಗೇರಿ ಇದ್ದರು.

ಕಾಂಗ್ರೆಸ್ ರ್ಯಾಲಿ 10ರಂದು
ರಾಜ್ಯ ಸರ್ಕಾರದ ವಿರುದ್ಧ ಜನಜಾಗೃತಿ ಮೂಡಿಸಲು ಇದೇ ತಿಂಗಳ 10ರಂದು ಹುಬ್ಬಳ್ಳಿಯಲ್ಲಿ ನಾಡರಕ್ಷಣಾ ರ್ಯಾಲಿ ನಡೆಯಲಿದೆ ಎಂದು ಕಾಂಗ್ರೆಸ್ ವಕ್ತಾರ ಬಿ.ಎಲ್.ಶಂಕರ ಬುಧವಾರ ತಿಳಿಸಿದರು.ರ್ಯಾಲಿಗೆ ಪೂರ್ವಭಾವಿಯಾಗಿ ಇಲ್ಲಿ ಏರ್ಪಡಿಸಲಾಗಿದ್ದ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು. ‘ಗಣಿ, ಭೂ ಹಗರಗಣಗಳು ಹಾಗೂ ಸರ್ಕಾರದ ವೈಫಲ್ಯವನ್ನು ಜನತೆಗೆ ವಿವರಿಸಲು ಪಕ್ಷ ರ್ಯಾಲಿ ಸಂಘಟಿಸುತ್ತಿದೆ; ಮೊದಲ ರ್ಯಾಲಿ ಬೆಂಗಳೂರಿನಲ್ಲಿ ಈಗಾಗಲೇ ನಡೆದಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.