ಹುಬ್ಬಳ್ಳಿ: ಸ್ಥಳೀಯ ವಿಜಯನಗರದ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆ ಪಕ್ಕದ ಹುಬ್ಬಳ್ಳಿ-ಧಾರವಾಡ ಒನ್ ಸೆಂಟರ್ನಲ್ಲಿ ರೂ. 10 ಲಕ್ಷ ನಗದು ಹಾಗೂ ರೂ 1.80 ಲಕ್ಷ ಚೆಕ್ಗಳು ಕಳುವಾದ ಘಟನೆ ಭಾನುವಾರ ರಾತ್ರಿ ನಡೆದಿದೆ.
ಸೋಮವಾರ ಬೆಳಿಗ್ಗೆ ಕಚೇರಿಯ ಸಿಬ್ಬಂದಿ ದೀಪಕ್ ಅವರು ಲಾಕರ್ ತೆಗೆದಾಗ ನಗದು ಹಾಗೂ ಚೆಕ್ಗಳು ಕಳುವಾದುದು ಬೆಳಕಿಗೆ ಬಂತು. ಶನಿವಾರದ ದಿನ ಗ್ರಾಹಕರಿಂದ ಸಂಗ್ರಹಿಸಿದ ನಗದು ಹಾಗೂ ಚೆಕ್ಗಳನ್ನು ಲಾಕರ್ನಲ್ಲಿ ಇರಿಸಲಾಗಿತ್ತು. ಆದರೆ ಕೀಲಿ ಮುರಿಯದೆ ಕಳ್ಳತನವಾಗಿದ್ದು ಹಲವಾರು ಸಂಶಯಗಳಿಗೆ ಕಾರಣವಾಗಿದೆ.
ಸ್ಥಳಕ್ಕೆ ಶ್ವಾನ ದಳ ಹಾಗೂ ಬೆರಳಚ್ಚು ತಂಡ ಭೇಟಿ ನೀಡಿ ಪರಿಶೀಲಿಸಿತು. ಸ್ಥಳಕ್ಕೆ ಪೊಲೀಸ್ ಕಮೀಷನರ್ ಡಾ.ಕೆ. ರಾಮಚಂದ್ರ ರಾವ್, ಅಪರಾಧ ಮತ್ತು ಸಂಚಾರ ಡಿಸಿಪಿ ಪಿ.ಆರ್. ಬಟಕುರ್ಕಿ, ಅಶೋಕನಗರ ಠಾಣೆ ಇನ್ಸ್ಪೆಕ್ಟರ್ ಗುರುದತ್ತ ಹಾಗೂ ಪಿಎಸ್ಐ ಬಿ.ಟಿ. ಬುದ್ನಿ ಭೇಟಿ ನೀಡಿದರು. ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
ರೂ 60 ಸಾವಿರ ಅಪಹರಣ
ಹುಬ್ಬಳ್ಳಿ: ಬೈಕ್ ಮೇಲೆ ಹೊರಟವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ರೂ 60,000 ನಗದು ಅಪಹರಿಸಿದ ಘಟನೆ ಭಾನುವಾರ ರಾತ್ರಿ ಸಿಬಿಟಿ ಕಿಲ್ಲಾದಲ್ಲಿ ನಡೆದಿದೆ.
ಕಿಲ್ಲಾದಲ್ಲಿ ಬಂಗಾರ ಪರೀಕ್ಷಿಸುವ ಕಂಪ್ಯೂಟರ್ ಕೇಂದ್ರವಿರುವ ಕೈಲಾಸ ಜಾಧವ ಹಾಗೂ ಅವರ ಸಿಬ್ಬಂದಿ ಪಿಂಟೊ ಅವರು ಹಲ್ಲೆಗೊಳಗಾದವರು. ತಮ್ಮ ಕಂಪ್ಯೂಟರ್ ಕೇಂದ್ರ ಮುಚ್ಚಿಕೊಂಡು ಬೈಕ್ ಮೂಲಕ ಮನೆಗೆ ಹೊರಟಿದ್ದ ಕೈಲಾಸ ಹಾಗೂ ಪಿಂಟೊ ಅವರಿಗೆ ಎದುರಿಗೆ ಬಂದವನೊಬ್ಬ ಖಾರದ ಪುಡಿ ಎರಚಿ, ಮಚ್ಚಿನಿಂದ ಹಲ್ಲೆ ನಡೆಸಿದವನು ಬ್ಯಾಗಿನಲ್ಲಿದ್ದ ನಗದನ್ನು ಅಪಹರಿಸಿ ಪರಾರಿಯಾದ. ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.