ADVERTISEMENT

ಹೆಲ್ಮೆಟ್ ಕಡ್ಡಾಯ ರದ್ದುಪಡಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 8:51 IST
Last Updated 13 ಡಿಸೆಂಬರ್ 2012, 8:51 IST

ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿ ಯಲ್ಲಿ ಹೆಲ್ಮೆಟ್ ಕಡ್ಡಾಯಗೊಳಿಸಿರುವುದನ್ನು ರದ್ದು ಪಡಿಸುವಂತೆ ಆಗ್ರಹಿಸಿ ಬಿಜೆಪಿ ಯುವಮೋರ್ಚಾ ಕಾರ್ಯ ಕರ್ತರು ಬುಧವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ರಾಜ್ಯ ಸರ್ಕಾರ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಿದ್ದು ಸ್ವಾಗತಾರ್ಹ ಜನರ ಸುರಕ್ಷತೆಯ ಸಲುವಾಗಿ ಈ ಕ್ರಮ ಸರಿಯಾಗಿದೆ. ಆದರೆ, ಇದರಿಂದ ಮಹಾನಗರದ ಜನತೆಗೆ ಬಹಳ ಕಿರಿ ಕಿರಿ ಉಂಟಾಗಿದೆ. ಧಾರವಾಡ ಮಹಾನಗರ ವ್ಯಾಪ್ತಿಯು ಐದು ಕಿ.ಮೀ. ವ್ಯಾಪ್ತಿಯ ಒಳಗೆ ಬರುತ್ತಿದ್ದು, ಈ ವ್ಯಾಪ್ತಿಯಲ್ಲಿ ಓಡಾಡುವ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿರುವುದು ಸರಿಯಲ್ಲ. ನೌಕರರು ದಿನನಿತ್ಯ ತಮ್ಮ ಕಚೇರಿಗೆ ಎರಡು ಬಾರಿ ಓಡಾಡುತ್ತಾರೆ, ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಬಿಡಲು ಓಡಾಡುತ್ತಾರೆ ಅಲ್ಲದೇ ಸಾರ್ವಜನಿಕರು ಮಾರುಕಟ್ಟೆಗೆ ಕೇವಲ ಒಂದು ಕಿ.ಮೀ ಅಂತರದಲ್ಲಿಯೇ ಓಡಾಡುತ್ತಾರೆ.  ಮಹಾನಗರ ವ್ಯಾಪ್ತಿಯಲ್ಲಿ ಓಡಾಡುವ ಸಾರ್ವಜನಿಕರಿಗೆ ವಿನಾಯಿತಿ ನೀಡಿ, ಅವಶ್ಯಕ ತಿದ್ದುಪಡಿ ಕ್ರಮವನ್ನು ಅನುಸರಿಸಲು ಅವಶ್ಯಕ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಮಂಜುನಾಥ ನಡಕಟ್ಟಿ, ಸುನೀಲ ಮೋರೆ, ಬಸವರಾಜ ರುದ್ರಾಪುರ, ಶಂಕರ ಶೇಳಕೆ, ಈರಣ್ಣ ದೊಡಮನಿ, ಹರೀಶ ಮನಕವಾಡ, ಮಾರುತಿ, ವಿ.ಸಿ.ಗೋವನಕೊಪ್ಪ ಮತ್ತಿತರರು ಈ ಸಂದರ್ಭದಲ್ಲಿದ್ದರು.

ಕಾರ್ಯಾಚರಣೆ ತೀವ್ರ
ಧಾರವಾಡ:ನಗರದಲ್ಲಿ ಬುಧವಾರ ಹೆಲ್ಮೆಟ್ ರಹಿತ ದ್ವಿಚಕ್ರ ವಾಹನ ಸವಾರರಿಗೆ ದಂಡ ಹಾಕುವ ಪ್ರಕ್ರಿಯೆ ಇನ್ನಷ್ಟು ಚುರುಕು ಪಡೆಯಿತು.

ಜ್ಯುಬಿಲಿ ವೃತ್ತ, ಕೋರ್ಟ್ ವೃತ್ತ, ಎನ್‌ಟಿಟಿಎಫ್, ಟೋಲ್ ನಾಕಾ, ಹಳೆ ಡಿಎಸ್‌ಪಿ ಕಚೇರಿ ಬಳಿ ಸಂಚಾರ ವಿಭಾಗದ ಪೊಲೀಸರು ನಗರದ ವಿವಿಧ ಪೊಲೀಸ್ ಠಾಣೆಗಳ ಪೊಲೀಸರ ಸಹಕಾರದೊಂದಿಗೆ ಹೆಲ್ಮೆಟ್ ಇಲ್ಲದ ದ್ವಿಚಕ್ರ ವಾಹನ ಸವಾರರನ್ನು ತಡೆದು ದಂಡ ವಿಧಿಸಿದರು.

ಹೆಲ್ಮೆಟ್ ಕಾರ್ಯಾಚರಣೆಯನ್ನು ಪತ್ರಿಕೆಗಳಲ್ಲಿ ಹಾಗೂ ಸ್ವತಃ ನೋಡು ವುದರ ಮೂಲಕ ಗಂಭೀರವಾಗಿ ಪರಿಗಣಿಸಿರುವ ನಾಗರಿಕರು ಹೆಲ್ಮೆಟ್ ತೆಗೆದುಕೊಂಡೇ ವಾಹನ ಏರುತ್ತಿದ್ದಾರೆ.

`ಈ ಕಾರ್ಯಾಚರಣೆ ಇನ್ನು ಮೂರ‌್ನಾಲ್ಕು ದಿನ ಇರುತ್ತದೆ. ಆ ಬಳಿಕ ಹೆಲ್ಮೆಟ್ ಹಾಕಿಲ್ಲ ಎಂದು ಯಾರೂ ಕೇಳುವುದಿಲ್ಲ' ಎಂದು ನಗರದ ವೈದ್ಯ ರೊಬ್ಬರು ಹೇಳಿದರು.

ಸಂಚಾರ ಠಾಣೆಯ ಇನ್‌ಸ್ಪೆಕ್ಟರ್ ವಿಜಯಕುಮಾರ್ ತಳವಾರ ಈ ಬಗ್ಗೆ ಪ್ರತಿಕ್ರಿಯೆ ನೀಡಿ, `ಇದು ನಿರಂತರವಾಗಿ ನಡೆಯಲಿದೆ' ಎಂದರು.ಜೊತೆಗೆ ನಗರದಲ್ಲಿ ಹೆಲ್ಮೆಟ್ ಖರೀದಿ ಮಾಡು ವವರ ಸಂಖ್ಯೆ ಹೆಚ್ಚಾಗಿದ್ದುಗಿದೆ.

ಸವಾರರಿಂದ 1.93 ಲಕ್ಷ ದಂಡ ವಸೂಲಿ
ಹುಬ್ಬಳ್ಳಿ: ಹೆಲ್ಮೆಟ್ ರಹಿತ ಚಾಲಕರನ್ನು ಪತ್ತೆಹಚ್ಚಿ ದಂಡ ವಿಧಿಸುವ ಕಾರ್ಯಾ ಚರಣೆಯು ಅವಳಿನಗರದಲ್ಲಿ ಬುಧವಾರ ಮುಂದುವರಿಯಿತು. ಒಟ್ಟು 1616 ಪ್ರಕರಣಗಳನ್ನು ದಾಖಲಿಸಿ 1,92,900 ರೂಪಾಯಿ ದಂಡ ವಸೂಲಿ ಮಾಡ ಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಚನ್ನಮ್ಮ ವೃತ್ತ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. ಒಳರಸ್ತೆ ಗಳಲ್ಲೂ ತಪಾಸಣೆ ನಡೆಯಿತು.

ದಂಡ ವಿಧಿಸುವ ಸುದ್ದಿ ಕೇಳಿಯೇ ಹೆಚ್ಚು ಮಂದಿ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡಿದರು ಎಂದು ಎಸಿಪಿ (ಸಂಚಾರ) ಎನ್. ಎಸ್. ಪಾಟೀಲ ಹೇಳಿದರು.

ಹೆಲ್ಮೆಟ್ ಖರೀದಿಯ ಭರಾಟೆ ನಿನ್ನೆ ಯಷ್ಟೇ ಜೋರಿತ್ತು. ಐಎಸ್‌ಐ ಮುದ್ರೆ ಯುಳ್ಳ ಹೆಲ್ಮೆಟ್‌ಗಳನ್ನು ಜನ ಹೆಚ್ಚು ಕೊಳ್ಳುತ್ತಿದ್ದಾರೆ ಎಂದು ಮಾರಾಟ ಗಾರರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.