ADVERTISEMENT

ಹೊರ ರಾಜ್ಯಗಳಿಗೆ ವರ್ಗಾವಣೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2018, 10:35 IST
Last Updated 8 ಮಾರ್ಚ್ 2018, 10:35 IST

ಧಾರವಾಡ: ಕನ್ನಡ ಭಾಷಿಕ ಕೆಲ ಕಾರ್ಮಿಕರನ್ನು ಗರಗದ ಹತ್ತಿರದ ಎಂ.ಎಂ. ಇಂಡಸ್ಟ್ರೀಸ್ ಪ್ರೈವೇಟ್‌ ಲಿಮಿಟೆಡ್ ಕಂಪನಿಯು ಉದ್ದೇಶಪೂರ್ವಕವಾಗಿ ಹೊರ ರಾಜ್ಯಗಳಿಗೆ ವರ್ಗಾವಣೆ ಮಾಡಿ, ದಬ್ಬಾಳಿಕೆ ನಡೆಸುತ್ತಿದೆ ಎಂದು ಆರೋಪಿಸಿ ಕರುನಾಡ ಸೇನೆ ಪದಾಧಿಕಾರಿಗಳು ಬುಧವಾರ ಕಂಪನಿ ಎದುರು ಪ್ರತಿಭಟನೆ ನಡೆಸಿದರು.

ಕೆಲಸ ಮಾಡುವುದಾರೆ ಅಸ್ಸಾಂಗೆ ಹೋಗಿ ಎಂದು ಕಂಪನಿಯ ಮಾಲೀಕರು ಹೇಳುತ್ತಿದ್ದಾರೆ. ಹೊರ ರಾಜ್ಯಗಳ 70 ರಿಂದ 80 ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಂಡು ಕನ್ನಡಿಗರಿಗೆ ಅವಮಾನ ಮಾಡಲಾಗುತ್ತಿದೆ. ಇಲ್ಲಿಯವರನ್ನು ಬೇರೆ ರಾಜ್ಯಕ್ಕೆ ಹೋಗುವಂತೆ ಒತ್ತಾಯಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಹಲವು ವರ್ಷಗಳಿಂದ ಗರಗ ಸುತ್ತ–ಮುತ್ತಲಿನ ಗ್ರಾಮಗಳ 15 ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಅವರನ್ನು 2014 ರಲ್ಲಿ ಕೆಲಸದಿಂದ ಬಿಡುಗಡೆ ಮಾಡಲಾಗಿತ್ತು. ಕಾರ್ಮಿಕ ನ್ಯಾಯಾಲಯವು 2018ರ ಜನವರಿ 2 ರಿಂದ ಕೆಲಸಕ್ಕೆ ತೆಗೆದುಕೊಳ್ಳಲು ಸೂಚಿಸಿದೆ. ಆದರೆ, ಕಂಪನಿಯ ಮಾಲೀಕರು ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳದೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ದೂರಿದರು.

ADVERTISEMENT

ಕರುನಾಡ ಸೇನೆಯ ಉತ್ತರ ಕರ್ನಾಟಕ ಅಧ್ಯಕ್ಷ ಶಿವಾಜಿ ಡೇಂಬ್ರೆ, ರುದ್ರಪ್ಪ ಅರಿವಾಳ, ವಿನಾಯಕ ನಡುವಿನಮನಿ, ಕಿರಣ ಬುಲ್‌ಬುಲೆ, ವೀರೇಶ ಜೋಗಿ, ರಾಜು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.