ಧಾರವಾಡ: ಕ್ರಿಸ್ತ ಬರೀ ಒಂದು ಧರ್ಮಕ್ಕೆ ಸೀಮಿತನಾಗಿಲ್ಲ. ಆತ ಜಗದ ರಕ್ಷಕ, ಮಾನವೀಯತೆಯ ಸಾಕಾರ ಮೂರ್ತಿ. ಆತನನ್ನು ಶಿಲುಬೆಗೇರಿಸುವ ಮೂಲಕ ಮೂಢರು ಸತ್ಯವನ್ನೂ ಶಿಲುಬೆಗೇರಿಸಿದರು...
–ಖ್ಯಾತ ನೃತ್ಯಪಟು, ಮನೋವೈದ್ಯೆ ಶಿವಮೊಗ್ಗದ ಡಾ.ಕೆ.ಎಸ್.ಪವಿತ್ರಾ ಅವರು ಭಾನುವಾರ ಇಲ್ಲಿನ ಸೃಜನಾ ರಂಗಮಂದಿರದಲ್ಲಿ ಪ್ರಸ್ತುತಪಡಿಸಿದ ‘ಕ್ರಿಸ್ತಕಾವ್ಯ’ದ ಒಟ್ಟಾರೆ ತಿರುಳಿದು.
ಶ್ರೀವಿಜಯ ಕಲಾನಿಕೇತನವು ನಗರದ ಇಂಟ್ಯಾಕ್ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಒಂದೂವರೆ ಗಂಟೆಗಳ ಕಾಲ ಡಾ.ಪವಿತ್ರಾ ಆ್ಯಡಂ–ಈವ್ರಿಂದ ಮೊದಲ್ಗೊಂಡು ಮೇರಿ ಏಸು ಕ್ರಿಸ್ತನನ್ನು ಈ ಲೋಕಕ್ಕೆ ನೀಡಿದ ಸಂಗತಿ, ಆತನ ಬಾಲ್ಯ, ಯೌವನ ಹಾಗೂ ಶಿಲುಬೆಗೇರುವವರೆಗಿನ ಕ್ಷಣಗಳನ್ನು ಅತ್ಯಂತ ಭಾವಪೂರ್ಣವಾಗಿ ಪ್ರಸ್ತುತಪಡಿಸಿದರು.
ಬಾಲ ಏಸು ತನ್ನನ್ನು ಕೊಲ್ಲಲು ಜನಿಸಿದ್ದಾನೆ ಎಂಬ ವಾರ್ತೆ ಕೇಳಿದ ಬೆತ್ಲೆಹೆಮ್ನ ದೊರೆಗೆ ಏಸು ಯಾರೆಂದು ಗುರುತಿಸುವುದೇ ಕಷ್ಟವಾಗುತ್ತದೆ. ಆಗ ಮಾನವ ಕುಲವೇ ಬೆಚ್ಚಿಬೀಳುವ ನಿರ್ಧಾರ ಕೈಗೊಂಡ ದೊರೆ, ಎರಡು ವರ್ಷದೊಳಗಿನ ಮಕ್ಕಳನ್ನು ಕೊಚ್ಚಿ ಹಾಕುವ ಸನ್ನಿವೇಶದ ಪ್ರಸ್ತುತಿ ನೋಡುಗರ ಕಣ್ಣಂಚಿನಲ್ಲಿ ನೀರು ತರಿಸಿತು.
ಕಳೆದ ಡಿಸೆಂಬರ್ನಲ್ಲಿಯೇ ‘ಕ್ರಿಸ್ತಕಾವ್ಯ’ ನೃತ್ಯ ರೂಪಕ ನಡೆಯಬೇಕಿತ್ತಾದರೂ ಕೆಲ ಬಲಪಂಥೀಯ ಸಂಘಟನೆಗಳ ಬೆದರಿಕೆ ಕರೆಯ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಭಾನುವಾರದ ಕಾರ್ಯಕ್ರಮಕ್ಕೂ ಪೊಲೀಸ್ ಕಾವಲು ಹಾಕಲಾಗಿತ್ತು. ಆದರೆ, ಕಾರ್ಯಕ್ರಮದಲ್ಲಿ ವಿರೋಧದ ಸಣ್ಣ ಸೊಲ್ಲೂ ಕೇಳಿಬರಲಿಲ್ಲ.
ಹಾಡುಗಾರಿಕೆಯಲ್ಲಿ ವಿದುಷಿ ವಸುಧಾ ಬಾಲಕೃಷ್ಣ, ಕೊಳಲು ಜಯರಾಂ, ನಟುವಾಂಗದಲ್ಲಿ ವಿದ್ವಾನ್ ಗುರುಪ್ರಸಾದ್, ಮೃದಂಗದಲ್ಲಿ ರಾಜಕುಮಾರ್ ಅಯ್ಯರ್, ರಿದಂ ಪ್ಯಾಡ್ನಲ್ಲಿ ರಾಘವೇಂದ್ರ ಸಾಥ್ ನೀಡಿದರು.
ಶ್ರೀವಿಜಯ ಕಲಾನಿಕೇತನದ ಅಧ್ಯಕ್ಷ ಡಾ. ಕೆ.ಆರ್.ಶ್ರೀಧರ್, ಎಸ್ಡಿಎಂ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಜೆ.ವಿ.ಚೌಟಿ, ಮನೋವೈದ್ಯ ಡಾ.ಆನಂದ ಪಾಂಡುರಂಗಿ, ಇಂಟ್ಯಾಕ್ ಸಂಚಾಲಕ ಎನ್.ಪಿ.ಭಟ್, ಯಶೋಧಾ ಭಟ್ಟ ಉದ್ಘಾಟಕಾ ಕಾರ್ಯಕ್ರಮದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.