ADVERTISEMENT

‘ನಿಜಗುಣ ಶಿವಯೋಗಿ’ ಸಣ್ಣಾಟ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2013, 7:18 IST
Last Updated 2 ಡಿಸೆಂಬರ್ 2013, 7:18 IST

ಧಾರವಾಡ: ಕರ್ನಾಟಕ ರಾಜ್ಯೋತ್ಸವ ಮಾಸಾ­ಚರಣೆಯ ಅಂಗವಾಗಿ ಕರ್ನಾಟಕ ವಿದ್ಯಾವರ್ಧಕ ಸಂಘವು ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಆಯೋಜಿಸಿದ್ದ ನಾಟಕೋತ್ಸವ ದಿನದಂದು ವೈ.ಎಂ.ಮಾದರ ಸ್ಮರಣಾರ್ಥ ಪುಡಕಲಕಟ್ಟಿಯ ಬಸವೇಶ್ವರ ಸಣ್ಣಾಟ ಮೇಳದವರು ‘ನಿಜಗುಣ ಶಿವಯೋಗಿ’ ಸಣ್ಣಾಟ ಪ್ರದರ್ಶನ ನೀಡಿದರು.

ಮಲ್ಲಿಕಾರ್ಜುನ ತರ್ಲಘಟ್ಟ ನಿರ್ದೇಶನ, ಬಸವರಾಜ ಮಾಸ್ತರ ತೇಗೂರ ಸಂಗೀತದ ಈ ನಾಟಕವನ್ನು ಶ್ರೀಶೈಲ ಹುದ್ದಾರ ನಿರ್ದೇಶಿಸಿದ್ದರು.

ನಾಟಕ ಪ್ರದರ್ಶನದ ಮೊದಲು ಕಲಾವಿದರಾದ ರಾಮದುರ್ಗದ ಮಹಾದೇವ ಹಡಪದ ಹಾಗೂ ಹಿರೇಬೂದಿಹಾಳದ ಸಣ್ಣ ಫಕ್ಕೀರಪ್ಪ ಭಜಂತ್ರಿ ಅವರನ್ನು ಸಂಘದಿಂದ ರಂಗಕಲಾ ಸನ್ಮಾನ ಮಾಡಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮಹಾದೇವ ಹಡಪದ, ‘ಉತ್ತರ ಕರ್ನಾಟಕದಲ್ಲಿ ಕಲೆಗೆ ಸಂಬಂಧಪಟ್ಟಂತೆ ನಾಟಕ ಶಾಲೆ ತರಬೇತಿ ಕೇಂದ್ರಗಳ ಹೊರತಾಗಿಯೂ ರಂಗಭೂಮಿಯ ಕಲಾವಿದರು ಸಾಕಷ್ಟು ಪ್ರಮಾಣದಲ್ಲಿ ಇದ್ದಾರೆ. ಅಭಿನಯದ ಪಟ್ಟುಗಳನ್ನು ಕಲಾವಿದರಿಗೆ ಕಲಿಸಿಕೊಟ್ಟವರೇ ಉತ್ತರ ಕರ್ನಾಟಕದವರು. ರಂಗಕಲೆಗೆ ಹೆಚ್ಚಿನ ಉತ್ತೇಜನ ದೊರಕಬೇಕಾದರೆ ಉತ್ತರ ಕರ್ನಾಟಕ ಭಾಗದಲ್ಲಿ ನಾಟಕ ಶಾಲೆಗಳು ಪ್ರಾರಂಭವಾಗಬೇಕಾಗಿರುವುದು ಅವಶ್ಯ’ ಎಂದರು.

ರಂಗ ಅತಿಥಿಯಾಗಿ ಆಗಮಿಸಿದ್ದ ಹು–-ಧಾ ಮಹಾನಗರ ಪಾಲಿಕೆಯ ಮಾಜಿ ಮೇಯರ್‌ ಮೋಹನ ಏಕಬೋಟೆ, ‘ಹುಬ್ಬಳ್ಳಿ-–ಧಾರವಾಡ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಯಾವುದೇ ಪ್ರವೇಶ ಶುಲ್ಕ ಇಲ್ಲದೇ ನಾಟಕಗಳನ್ನು ಪ್ರದರ್ಶಿಸಿದರೂ ಪ್ರೇಕ್ಷಕರು ಸಾಕಷ್ಟು ಸಂಖ್ಯೆಯಲ್ಲಿ ಬರುವುದಿಲ್ಲ, ಇಂತಹ ಸಂದರ್ಭದಲ್ಲಿ ಮುಕ್ತವಾಗಿ 15 ದಿನಗಳ ಕಾಲ ಕರ್ನಾಟಕ ವಿದ್ಯಾವರ್ಧಕ ಸಂಘವು ನಾಟಕೋತ್ಸವವನ್ನು ಏರ್ಪಡಿಸಿ ಪ್ರೇಕ್ಷಕರ ಮನಮುಟ್ಟುವಂತಹ ಕಾರ್ಯ ಮಾಡುತ್ತಿದ್ದು, ರಂಗಕಲೆ ಉಳಿಸಿ ಬೆಳೆಸುವಲ್ಲಿ ಮುಂದಾಗಿದ್ದು ಶ್ಲಾಘನೀಯ’ ಎಂದರು.

ಸಂಘದ ಕಾರ್ಯಾಧ್ಯಕ್ಷ ಪ್ರೊ.ಬಿ.ವಿ.ಗುಂಜೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಹ ಕಾರ್ಯದರ್ಶಿ ಶಿವಾನಂದ ಭಾವಿಕಟ್ಟಿ, ಶಂಕರ ಕುಂಬಿ ಅತಿಥಿಗಳಿಗೆ ಗೌರವ ಸಲ್ಲಿಸಿದರು. ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಸ್ವಾಗತಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.