ಧಾರವಾಡ: ‘ಇದುವರೆಗೂ ನಾನು ರಚಿಸಿರುವ ಕವಿತೆಗಳು ನನ್ನ ಜೀವನದಲ್ಲಿ ಆಗಿ ಹೋದ ನೆನಪುಗಳೇ ಆಗಿವೆ’ ಎಂದು ಹಿರಿಯ ಸಾಹಿತಿ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಹೇಳಿದರು.
ಇಲ್ಲಿನ ಜಿಲ್ಲಾ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ಸಿರಿಗನ್ನಡ ಪುಸ್ತಕ ಮಳಿಗೆ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಕಾವ್ಯ ವಾಚನ–ಮಂಥನ’ದಲ್ಲಿ ಕವಿತೆ ಓದುವುದಕ್ಕೂ ಮುನ್ನ ಅವರು ಮಾತನಾಡಿದರು.
‘ಬಾಲ್ಯದ ನೆನಪುಗಳು ಎಂದಿಗೂ ನಮ್ಮಿಂದ ಮರೆಯಾಗುವುದಿಲ್ಲ. 75ರ ವಯಸ್ಸಿನಲ್ಲಿಯೂ 24ರ ನೆನಪುಗಳು ನಮ್ಮಲ್ಲಿರುತ್ತವೆ. ಅಂಥ ನೆನಪುಗಳೇ ನನ್ನಿಂದ ಕವಿತೆಗಳಾಗಿ ಹೊರ ಬಂದಿವೆ. ಕಾವ್ಯ ಕ್ಷಣ ಕ್ಷಣಕ್ಕೂ ಬದಲಾವಣೆಯಾಗುತ್ತಾ ಹೋಗುತ್ತದೆ. ಕಾವ್ಯದಲ್ಲಾಗುವ ಸಣ್ಣ ಪುಟ್ಟ ಬದಲಾವಣೆಗಳು ಕಾವ್ಯವನ್ನು ಇನ್ನಷ್ಟು ಸಿಂಗಾರಗೊಳಿಸುತ್ತವೆ. ಹಾಗಂತ ಪದೇ ಪದೇ ಕಾವ್ಯ ಬದಲಾವಣೆಗೊಳ್ಳಬಾರದು’ ಎಂದರು.
‘ಒಂದು ಕವಿತೆ ಹಕ್ಕಿಯಂತೆ ಹಾರಬೇಕು. ಅದಕ್ಕೆ ರೆಕ್ಕೆಯನ್ನು ಕವಿಗಳು ಕಟ್ಟಬೇಕು. ಈ ಹಂತದಲ್ಲಿ ಓದು ಮತ್ತು ಬರಹ ಒಂದರಲ್ಲಿ ಒಂದು ಸೇರಿಕೊಂಡು ಕೆಲಸ ಮಾಡಬೇಕಾಗುತ್ತದೆ. ಒಬ್ಬ ವ್ಯಕ್ತಿ ಕವಿಯಾಗುತ್ತೇನೆ ಎಂಬ ಭರವಸೆ ಹೊಂದಿದ್ದರೆ ಕವಿಯಾಗಿಯೇ ಮುಂದುವರೆಯುವುದು ಒಳ್ಳೆಯದು. ಕೀರ್ತಿನಾಥ ಕುರ್ತಕೋಟಿ ಕವಿಯಾಗಬೇಕು ಎಂದು ಕಾವ್ಯಗಳನ್ನು ರಚಿಸಿದರು. ನಂತರ ನಾಟಕ, ನಿಬಂಧಗಳು ಹೀಗೆ ಎಲ್ಲ ರಂಗದಲ್ಲೂ ಕೆಲಸ ಮಾಡಿದರು. ಅವರು ರಚಿಸಿದ ನಿಬಂಧಗಳು ಶ್ರೇಷ್ಠ ನಿಬಂಧಗಳಾಗಿದೆ’ ಎಂದು ತಿಳಿಸಿದರು.
‘ಮಂಥನ ಎಂಬುದು ಮಜ್ಜಿಗೆಯನ್ನು ಕಡಿದು ಬೆಣ್ಣೆ ತೆಗೆದಂತೆ. ಮಂಥನ ಮಾಡಲಾರದೇ ಕಥನಕ್ಕೆ ಬರುವುದು ಸಾಧ್ಯವಿಲ್ಲ. ಮಂಥನ ಎಂಬುದು ಕಡೆದಷ್ಟು ಅದರ ವಿಸ್ತಾರ ಹೆಚ್ಚಾಗುತ್ತಾ ಹೋಗುತ್ತದೆ. ನಮ್ಮಲ್ಲಿ ಅನೇಕ ಕಲಾವಿದರು ಇದ್ದಾರೆ. ಅದರಲ್ಲೂ ಪ್ರಮುಖವಾಗಿ ಚಿತ್ರಕಲೆಯಲ್ಲಿ ಸಾಧನೆ ಮಾಡಿದ ಅನೇಕ ವ್ಯಕ್ತಿಗಳಿದ್ದಾರೆ. ಅಂಥವರನ್ನು ಒಂದು ಬಾರಿ ಈ ಮಂಥನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡುವ ಅವಶ್ಯತೆ ಇದೆ’ ಎಂದರು. ನಂತರ ‘ಕುಲಾಯಿ’ ಎಂಬ ಕವನ ವಾಚನ ಮಾಡಿದರು. ವಿದ್ಯಾಶ್ರೀ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.