ADVERTISEMENT

₹5.98 ಲಕ್ಷ ವಂಚನೆಗೊಳಗಾದ ಉದ್ಯೋಗಿ

​ಪ್ರಜಾವಾಣಿ ವಾರ್ತೆ
Published 20 ಜೂನ್ 2021, 1:25 IST
Last Updated 20 ಜೂನ್ 2021, 1:25 IST

ಹುಬ್ಬಳ್ಳಿ: ಎಸ್‌ಬಿಐ ಬ್ಯಾಂಕ್‌ ಖಾತೆಯ ದಾಖಲೆ ಪರಿಶೀಲನೆ ಮಾಡಬೇಕು ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಉದ್ಯೋಗಿ ಅಕ್ಬರಸಾಬ್‌ ಡಾಂಬರಮಟ್ಟೂರು ಅವರ ಮೊಬೈಲ್‌ಗೆ ಲಿಂಕ್‌ ಕಳುಹಿಸಿದ ವಂಚಕ, ಅವರ ಬ್ಯಾಂಕ್‌ ಖಾತೆಯಿಂದ ₹5.98 ಲಕ್ಷ ವರ್ಗಾಯಿಸಿಕೊಂಡಿದ್ದಾನೆ.

ಅಕ್ಬರಸಾಬ್‌ ಅವರ ಮೊಬೈಲ್‌ಗೆ ‘ಎಎಸ್‌ಬಿಐ ಬ್ಯಾಂಕ್‌ನಿಂದ ಪ್ರಮುಖ ಸಂದೇಶ. ಕ್ಲಿಕ್‌ ಮಾಡಿ’ ಎಂದು ವಂಚಕ ಲಿಂಕ್‌ ಕಳುಹಿಸಿದ್ದ. ಅದನ್ನು ಕ್ಲಿಕ್‌ ಮಾಡಿದಾಗ ದಾಖಲೆ ಪರಿಶೀಲನೆಗೆ ಮತ್ತೊಂದು ಲಿಂಕ್‌ ಕಳುಹಿಸಿ ಕ್ಲಿಕ್‌ ಮಾಡಲು ಹೇಳಿದ್ದಾನೆ. ಅದನ್ನು ಕ್ಲಿಕ್‌ ಮಾಡಿದ ತಕ್ಷಣ, ಎಸ್‌ಬಿಐ ಮುಂಬೈ ಕೇಂದ್ರ ಕಚೇರಿಯಿಂದ ವ್ಯವಸ್ಥಾಪಕ ಮಾತನಾಡುತ್ತಿರುವುದಾಗಿ ಹೇಳಿದ ವಂಚಕ, ಅವರ ಮೊಬೈಲ್‌ಗೆ ಬಂದ ಒಟಿಪಿ ಪಡೆದಿದ್ದಾನೆ. ನಂತರ ಆ ಒಟಿಪಿ ಕಾಲಮಿತಿ ಮುಗಿದಿದೆ, ಮತ್ತೊಂದು ಒಟಿಪಿ ತಿಳಿಸಿ ಎಂದಿದ್ದಾನೆ. ಹೀಗೆ ಎರಡು ಒಟಿಪಿ ಪಡೆದು ಆನ್‌ಲೈನ್‌ನಲ್ಲಿ ವರ್ಗಾಯಿಸಿಕೊಂಡಿದ್ದಾನೆ. ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

₹48 ಸಾವಿರ ವಂಚನೆ: ಗೂಗಲ್‌ ಸರ್ಚ್‌ನಲ್ಲಿ ದೊರೆತ ಫೋನ್‌ಪೇ ಸಹಾಯ ವಾಣಿ ನಂಬರ್‌ಗೆ ಕರೆ ಮಾಡಿದ ಗೋಪನಕೊಪ್ಪದ ಶಶಿಕಲಾ ವೈದ್ಯರಾಜ, ಆನ್‌ಲೈನ್‌ನಲ್ಲಿ ₹48 ಸಾವಿರ ಕಳೆದುಕೊಂಡಿದ್ದಾರೆ.

ADVERTISEMENT

ಶಶಿಕಲಾ ಅವರು ತಮ್ಮ ಯೂನಿಯನ್‌ ಬ್ಯಾಂಕ್‌ ಫೋನ್‌ ಪೇ ಖಾತೆಯಿಂದ ಇಂಡಿಯನ್‌ ಬ್ಯಾಂಕ್‌ ಫೋನ್‌ ಪೇ ಖಾತೆಗೆ ₹10 ಸಾವಿರ ವರ್ಗಾಯಿಸಿದ್ದರು. ಹಣ ಕಡಿತವಾಗಿದ್ದೂ, ವರ್ಗಾವಣೆಯಾಗಿರಲಿಲ್ಲ. ಗೂಗಲ್‌ನಲ್ಲಿ ದೊರೆತ ಸಹಾಯವಾಣಿಗೆ ಕರೆ ಮಾಡಿದಾಗ, ಹಣ ಮರಳಿಸುವುದಾಗಿ ಹೇಳಿದ ವಂಚಕ, ಹಣ ವರ್ಗಾವಣೆಯಾದ ಐಡಿ ಹಾಗೂ ಬ್ಯಾಂಕ್‌ ಖಾತೆಗೆ ನೊಂದಣಿಯಾದ ಮೊಬೈಲ್‌ ನಂಬರ್‌ ಪಡೆದು ಲಿಂಕ್‌ ಕಳುಹಿಸಿದ್ದಾನೆ. ಅದನ್ನು ಕ್ಲಿಕ್‌ ಮಾಡಲು ಹೇಳಿ, ಯುಪಿಐ ಪಿನ್‌ ಹಾಕಿ ಸಬ್‌ಮೀಟ್‌ ಮಾಡಲು ಹೇಳಿ, ತನ್ನ ಖಾತೆಗೆ ಹಣ ವರ್ಗಾಯಿಸಿಕೊಂಡಿದ್ದಾನೆ. ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂಜು; ಒಂಬತ್ತು ಮಂದಿ ಬಂಧನ: ಕೇಶ್ವಾಪುರ ಠಾಣೆಯಲ್ಲಿ ಜೂಜಾಟದ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ಒಟ್ಟು ಒಂಬತ್ತು ಮಂದಿ ಬಂಧಿಸಲಾಗಿದೆ.

ಪ್ರಕರಣವೊಂದರಲ್ಲಿ ಏಳು ಮಂದಿ ಆರೋಪಿ ಬಂಧಿಸಿ ₹13,120 ನಗದು, ಮತ್ತೊಂದು ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿ, ₹11,300 ನಗದು ವಶಪಡಿಸಿಕೊಳ್ಳಲಾಗಿದೆ.

ಮದ್ಯ ಮಾರಾಟ; ಬಂಧನ: ತಾಲ್ಲೂಕಿನ ಅಂಚಟಗೇರಿ ಗ್ರಾಮದ ಶಾಲೆಯ ಬಳಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪಿ ಚಂದ್ರಪ್ಪ ಕಲ್ಲನ್ನವರ ಬಂಧಿಸಿ, ₹1,272 ನಗದು ವಶಪಡಿಸಿಕೊಳ್ಳಲಾಗಿದೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.