ಹುಬ್ಬಳ್ಳಿ: ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಸುವರ್ಣ ಮಹೋತ್ಸವ ಸಮಾರೋಪದ ಅಂಗವಾಗಿ ಶುಕ್ರವಾರ (ಜ.26) ಸಂಜೆ 5.30ಕ್ಕೆ ದೇಶಪಾಂಡೆನಗರದ ಕರ್ನಾಟಕ ಜಿಮ್ಖಾನ ಅಸೋಸಿಯೇಷನ್ ಮೈದಾನದಲ್ಲಿ ಪ್ರಸಿದ್ಧ ಹಿನ್ನೆಲೆ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಸಂಗೀತ ಸಂಜೆ ಏರ್ಪಡಿಸಲಾಗಿದೆ.
ಸಂಸ್ಥೆಯ 51ನೇ ವಾರ್ಷಿಕೋತ್ಸವ ಅಂಗವಾಗಿ ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸಮಾರೋಪದ ಅಂಗವಾಗಿ ಬಾಲಸುಬ್ರಹ್ಮಣ್ಯಂ ಅವರನ್ನು ನಗರಕ್ಕೆ ಕರೆಸಲಾಗುತ್ತಿದೆ. ಒಂದು ದಶಕದ ಬಳಿಕ ಬಾಲಸುಬ್ರಹ್ಮಣ್ಯಂ ಅವರು ಹುಬ್ಬಳ್ಳಿಗೆ ಬಂದು ಸಂಗೀತ ಸಂಜೆ ಕಾರ್ಯಕ್ರಮ ನಡೆಸಿಕೊಡುತ್ತಿರುವುದು ವಿಶೇಷ.
ಸಭಾ ಕಾರ್ಯಕ್ರಮದ ನಂತರ ಎಸ್ಪಿಬಿ ಅವರು ಸಂಗೀತದ ರಸದೌತಣ ಉಣಬಡಿಸಲಿದ್ದಾರೆ. ಸಾರ್ವಜನಿಕರಿಗೆ ಪ್ರವೇಶ ಉಚಿತ ಇದ್ದು, ಸುಮಾರು 7 ಸಾವಿರ ಮಂದಿ ಕೂರಲು ಆಸನ ವ್ಯವಸ್ಥೆ ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.