ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ತರಕಾರಿ ಮಾರುಕಟ್ಟೆಗೆ ದೊಡ್ಡ ಹೊಡೆತ ಬಿದ್ದಿದೆ. ತರಕಾರಿ, ಸೊಪ್ಪು ಸರಿಯಾಗಿ ಪೂರೈಕೆಯಾಗದ್ದರಿಂದ ಬೆಲೆಯೂ ಹೆಚ್ಚಾಗಿದೆ.
ಕಳೆದ ವಾರದ ತರಕಾರಿಗಳ ಬೆಲೆಗೆ ಹೋಲಿಸಿದರೆ, ಈ ವಾರ ಬಹುತೇಕ ದರ ಹೆಚ್ಚಳವಾಗಿವೆ. ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ.
ಆವಕ ಕಡಿಮೆ: ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಕೃಷಿ ಚುಟುವಟಿಕೆಗಳು ಕೆಲವು ದಿನಗಳಿಂದ ಸ್ಥಗಿತಗೊಂಡಿವೆ. ಹೀಗಾಗಿ ಮಾರುಕಟ್ಟೆಗೆ ಸೊಪ್ಪು ಸೇರಿದಂತೆ ಬಹುತೇಕ ತರಕಾರಿಗಳ ಆವಕ ಕಡಿಮೆಯಾಗಿದೆ. ಕೆಲವೆಡೆ ಮಳೆಯಿಂದ ತರಕಾರಿ ಬೆಳೆಯೂ ಹಾನಿಯಾಗಿದೆ.
ಮಳೆಯಿಂದ ಹಣ್ಣಿನ ಪೂರೈಕೆಯೂ ಶೇ 50ರಷ್ಟು ಕಡಿಮೆಯಾಗಿದೆ. ಗ್ರಾಹಕರು ಬರುತ್ತಿಲ್ಲ, ನಷ್ಟ ಹೆಚ್ಚಾಗಿದೆ ಎನ್ನುತ್ತಾರೆ ಹಣ್ಣಿನ ವ್ಯಾಪಾರಸ್ಥರು.
ಕಳೆದ ವಾರ ಟೊಮೆಟೊ ಬೆಲೆ ಕೆ.ಜಿ ಗೆ ₹10 ರಿಂದ ₹15 ಇದ್ದದ್ದು, ಈ ವಾರ ₹25–₹30 ತಲುಪಿದೆ. ಬೆಂಡೆಕಾಯಿ, ಬೀನ್ಸ್, ಸೌತೆಕಾಯಿಗೆ ಬೇಡಿಕೆ ಹೆಚ್ಚಿರುವುದರಿಂದ ಬೆಲೆಯೂ ಹೆಚ್ಚಳವಾಗಿದೆ ಎಂದು ವ್ಯಾಪಾರಸ್ಥರು ಹೇಳಿದರು.
ಈರುಳ್ಳಿ, ಮೆಣಸಿನಕಾಯಿ ದರ ಸ್ಥಿರ: ಅತಿಹೆಚ್ಚು ಮಾರಾಟವಾಗುವ ಈರುಳ್ಳಿ ಬೆಲೆಯಲ್ಲಿ ಸ್ಥಿರತೆ ಕಂಡು ಬಂದಿದೆ. ಕಳೆದ ವಾರಕೆ.ಜಿಗೆ ₹30– ₹35ರಂತೆ ಮಾರಾಟವಾಗಿದ್ದ ಈರುಳ್ಳಿ, ಕೆ.ಜಿಗೆ ₹25– ₹30ರಂತೆ ಮಾರಾಟವಾಗಿದ್ದ ಆಲೂಗಡ್ಡೆ ಬೆಲೆ ಈ ವಾರವೂ ಅಷ್ಟೇ ಇದೆ. ಮೆಣಸಿನಕಾಯಿ ಕೆ.ಜಿಗೆ ₹50, ದಪ್ಪ ಮೆಣಸಿನಕಾಯಿ ಕೆ.ಜಿಗೆ ₹50–₹60 ಇತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.