ಧಾರವಾಡ: ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಎಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಮನೋಹರ ಮಂದೋಲಿ ಅರವನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.
ಸಿವಿಲ್ ಕಾಮಗಾರಿ ಗುತ್ತಿಗೆ ಪರವಾನಗಿ ನೀಡಲು ತಲಾ ₹2ಸಾವಿರದಂತೆ ಮೂರು ಜನರಿಂದ ಇವರು ಒಟ್ಟು ₹6ಸಾವಿರ ಲಂಚ ಪಡೆಯುತ್ತಿದ್ದರು. ಈ ಸಂದರ್ಭದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಮಂದೋಲಿ ಅವರನ್ನು ವಶಕ್ಕೆ ಪಡೆದಿದ್ದಾರೆ.
ಕಲಘಟಗಿ ತಾಲ್ಲೂಕಿನ ಕಲ್ಲಪ್ಪ ಶಿರಬಡಗಿ, ಚಂದ್ರಶೇಖರಯ್ಯ ಹಿರೇಮಠ ಹಾಗೂ ನಾಗರಾಜ ನವಲೂರು ಎಂಬುವವರು ಗುತ್ತಿಗೆದಾರ ಪರವಾನಗಿ ಪಡೆಯಲು ಸೆ. 11ರಂದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು. ಇವರಿಗೆ ಪರವಾನಗಿ ಮಂಜೂರು ಆಗಿದ್ದರೂ, ಅದನ್ನು ಮನೋಹರ ಅವರು ತಡೆಹಿಡಿದಿದ್ದರು. ಪರವಾನಗಿ ನೀಡಲು ಲಂಚದ ಬೇಡಿಕೆ ಇಟ್ಟಿದ್ದರು ಎಂದು ಎಸಿಬಿಗೆ ಈ ಮೂವರು ನೀಡಿದ್ದ ದೂರಿನಲ್ಲಿ ಹೇಳಲಾಗಿದೆ.
ಎಸಿಬಿ ಡಿವೈಎಸ್ಪಿ ಎಲ್. ವೇಣುಗೋಪಾಲ ಅವರ ನೇತೃತ್ವದಲ್ಲಿ ಈ ದಾಳಿ ನಡೆಯಿತು. ನಂತರ ಇಲ್ಲಿನ ಯಾಲಕ್ಕಿ ಶೆಟ್ಟರ್ ಕಾಲೊನಿಯಲ್ಲಿರುವ ಮನೋಹರ ಅವರ ಮನೆಯಲ್ಲಿ ಶೋಧ ಆರಂಭಿಸಿದ ಎಸಿಬಿ ಅಧಿಕಾರಿಗಳಿಗೆ ₹13.80ಲಕ್ಷ ನಗದು, ಬೆಳ್ಳಿ ಹಾಗೂ ಬಂಗಾರದ ಆಭರಣಗಳು ದೊರೆತಿವೆ. ರಾತ್ರಿಯವರೆಗೂ ಶೋಧ ಕಾರ್ಯ ಮುಂದುವರಿದಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.