
ಧಾರವಾಡ: ‘ದೇಶದ ವಿವಿಧೆಡೆ ಧಾರವಾಡದ ಮಾವು ಶ್ರೇಷ್ಠ ಎನ್ನುವ ಭಾವನೆ ಇದೆ. ರೈತರು ಇದನ್ನೇ ಬಂಡವಾಳವನ್ನಾಗಿಸಿಕೊಂಡು ಮಾವು ಬ್ರಾಂಡ್ ನಿರ್ಮಿಸಿಕೊಂಡು ಮಾರಾಟ ಮಾಡಬೇಕು’ ಎಂದು ಮಹಾರಾಷ್ಟ್ರದ ಸಹ್ಯಾದ್ರಿ ಫಾರ್ಮ್ನ ಮುಖ್ಯಸ್ಥ ವಿಲಾಸರಾವ್ ಶಿಂಧೆ ಹೇಳಿದರು.
ನಗರದ ಆಲೂರು ವೆಂಕಟರಾವ್ ಭವನದಲ್ಲಿ ಮಾವು ಬೆಳೆಗಾರರ ಬಳಗದ ವತಿಯಿಂದ ಶನಿವಾರ ನಡೆದ ರಫ್ತು ಗುಣಮಟ್ಟದ ಮಾವು ಉತ್ಪದನೆ ಮತ್ತು ರಫ್ತು ವಿಧಾನಗಳ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ವರ್ಷಪೂರ್ತಿ ಮಾವು ರಫ್ತು ಮಾಡುವ ವಿನೂತನ ತಂತ್ರಜ್ಞಾನವನ್ನು ಶೋಧಿಸಿ ಕೊಟ್ಟರೆ ಧಾರವಾಡ ತನ್ನ ಮಾವು ಬೆಳೆಯಿಂದ ವಿಶ್ವ ಭೂಪಟದಲ್ಲಿ ಗುರುತಿಸಿಕೊಳ್ಳಲಿದೆ. ಸಹಕಾರ ತತ್ವಗಳ ಅಡಿಯಲ್ಲಿ ಮಾವು ಬೆಳೆಗಾರರು ಸಂಘಟಿತರಾಗಬೇಕು’ ಎಂದು ಕೋರಿದರು.
ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿಷ್ಣುವರ್ಧನ ಮಾತನಾಡಿ, ‘ಮಾವು ಉತ್ಪಾದನೆ ಕುಂಠಿತಗೊಳ್ಳುತ್ತಿದೆ. ರೈತರು ತೋಟ ನಿರ್ವಹಣೆ ಸರಿಯಾಗಿ ಮಾಡುತ್ತಿಲ್ಲ. ತಾಂತ್ರಿಕತೆ ಅಳವಡಿಸಿಕೊಂಡರೆ ಮಾವು ಉತ್ಪಾದನೆ ಹೆಚ್ಚಿಸಬಹುದು’ ಎಂದು ಸಲಹೆ ನೀಡಿದರು.
ಪ್ರಗತಿಪರ ರೈತ ಭೀಮಸೇನ ಕೋಕರೆ ಮಾತನಾಡಿ, ‘ಸರ್ಕಾರ ರಸ್ತೆ, ಸೇತುವೆಗಳನ್ನು ನಿರ್ಮಿಸಿದರೆ ಸಾಲದು. ರೈತರ ಉತ್ಪನ್ನಗಳ ಮೌಲ್ಯವರ್ಧನೆಗೆ ಒತ್ತು ನೀಡಿ ಪ್ರೋತ್ಸಾಹಿಸಬೇಕು’ ಎಂದರು.
ಕೃಷಿ ವಿಜ್ಞಾನಿ ಜ್ಞಾನೇಶ್ವರ ಗೋಪಾಲಿ ಅವರ ‘ವೈಜ್ಞಾನಿಕ ಪದ್ಧತಿಯ ಮಾವು ಕೃಷಿ ತಾಂತ್ರಿಕ ಕೈಪಿಡಿ’ ಹಾಗೂ ಮಾವು ಬೆಳಗಾರರ ಬಳಗ ವೆಬ್ಸೈಟ್ ಬಿಡುಗಡೆ ಮಾಡಲಾಯಿತು.
ಮಾವು ಬೆಳೆಗಾರರ ಬಳಗದ ಗೌರವ ಅಧ್ಯಕ್ಷ ರಾಜೇಂದ್ರ ಪೋದ್ದಾರ, ಅಧ್ಯಕ್ಷ ಸುಭಾಷ್ ಆಕಳವಾಡಿ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಕಾಶಿನಾಥ ಭದ್ರಣ್ಣವರ, ಮಾವು ಅಭವೃದ್ಧಿ ನಿಗಮದ ಅಧ್ಯಕ್ಷ ಮುದ್ದು ಗಂಗಾಧರ, ಪ್ರಕಾಶ ಸೊಬರದ, ಪ್ರಮೊದ್ ಗಾಂವ್ಕರ್, ಉಮೇಶ್ ಕಟಗಿ, ಎಸ್.ಎನ್ ಸವದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.