ADVERTISEMENT

ಅಗ್ರಿ ಗೋಲ್ಡ್‌: ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ 20ರಂದು

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2021, 5:58 IST
Last Updated 12 ಡಿಸೆಂಬರ್ 2021, 5:58 IST

ಹುಬ್ಬಳ್ಳಿ: ‘ಅಗ್ರಿಗೋಲ್ಡ್‌ ಸಂಸ್ಥೆಯಿಂದ ಲಕ್ಷಾಂತರ ಠೇವಣಿದಾರರಿಗೆ ನಷ್ಟವಾಗಿದೆ. ಸಂಸ್ಥೆಯ ಆಸ್ತಿಯನ್ನು ಮುಟ್ಟಗೋಲು ಹಾಕಿಕೊಂಡು, ಠೇವಣಿದಾರರಿಗೆ ಪರಿಹಾರ ನೀಡಲು ಸರ್ಕಾರ ಮುಂದಾಗಬೇಕು. ಈ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ನಿರ್ಣಯ ತೆಗೆದುಕೊಳ್ಳಬೇಕು’ ಎಂದು ಅಗ್ರಿಗೋಲ್ಡ್‌ ಗ್ರಾಹಕರು ಹಾಗೂ ಏಜೆಂಟ್‌ ಕ್ಷೇಮಾಭಿವೃದ್ಧಿ ಸಂಘದ ಧಾರವಾಡ ಜಿಲ್ಲಾ ಘಟಕ ಅಧ್ಯಕ್ಷ ವೀರಬಸಪ್ಪ ಅಂಕಲಿ ಒತ್ತಾಯಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಗ್ರಿಗೋಲ್ಡ್ ಸಂಸ್ಥೆಯು ರಾಜ್ಯದಲ್ಲಿ ಒಟ್ಟು 8.5 ಲಕ್ಷಕ್ಕೂ ಹೆಚ್ಚು ಗ್ರಾಹಕರಿಂದ ₹1,700 ಕೋಟಿಗೂ ಅಧಿಕ ಹಣ ಸಂಗ್ರಹ ಮಾಡಿ ವಂಚನೆ ಮಾಡಿದೆ. ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದೆ. ಸಿಐಡಿ ಸಹ ಅಗ್ರಿಗೋಲ್ಡ್‌ನ ಚರಾಸ್ತಿಗಳನ್ನು ವಶಕ್ಕೆ ಪಡೆದಿದೆ. ಆದರೆ, ಈವರೆಗೆ ವಂಚನೆಗೆ ಒಳಗಾದವರಿಗೆ ಪರಿಹಾರ ದೊರಕಿಲ್ಲ’ ಎಂದರು.

‘ಧಾರವಾಡದಲ್ಲಿ ಮೂರು ಸಾವಿರ ಏಜೆಂಟರು ಹಾಗೂ 35 ಸಾವಿರ ಜನ ಗ್ರಾಹಕರಿದ್ದೇವೆ. ಸಂಸ್ಥೆಯಿಂದ ವಶಪಡಿಸಿಕೊಂಡಿರುವ ಆಸ್ತಿಯಿಂದ ವಂಚನೆಗೆ ಒಳಗಾದವರಿಗೆ ಪರಿಹಾರ ನೀಡಬೇಕು. ಇಲ್ಲವೇ ಆಂಧ್ರಪ್ರದೇಶ ಸರ್ಕಾರದಂತೆ ಇಲ್ಲಿಯೂ ರಾಜ್ಯ ಸರ್ಕಾರವೇ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಈಗಾಗಲೇ ಹಲವು ಏಜೆಂಟರು ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪರಿಹಾರ ನೀಡುವಂತೆ ಸಂಸ್ಥೆಯ ಗ್ರಾಹಕರು, ಏಜೆಂಟರು ಡಿ.20ಕ್ಕೆ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಲಿದ್ದೇವೆ. ಅಂದಾಜು 10ರಿಂದ 15 ಸಾವಿರ ಜನ ಸೇರುವ ಸಾಧ್ಯತೆ ಇದೆ’ ಎಂದರು.

ಅಸೋಸಿಯೇಷನ್‌ನ ಕಾರ್ಯದರ್ಶಿ ಶಂಕರ ಪರೀಟ, ಖಜಾಂಜಿ ವಿರೇಶ ಬಾರ್ಕಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶಾಲಿನಿ ಯಾದವಾಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.