ADVERTISEMENT

ಧಾರವಾಡ: ಕೆಐಎಡಿಬಿ ₹40 ಕೋಟಿ ಅಕ್ರಮ ಆರೋಪ

​ಪ್ರಜಾವಾಣಿ ವಾರ್ತೆ
Published 27 ಜನವರಿ 2024, 15:40 IST
Last Updated 27 ಜನವರಿ 2024, 15:40 IST
   

ಧಾರವಾಡ: ‘ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ(ಕೆಐಎಡಿಬಿ)ಯ ಬಹುಕೋಟಿ ಹಗರಣ ಬಗೆದಷ್ಟು ಆಳ ಎಂಬಂತಾಗಿದ್ದು, ಅಧಿಕಾರಿಗಳು ₹40 ಕೋಟಿ ಅಕ್ರಮ ಎಸಗಿರುವ ದಾಖಲೆಗಳು ಲಭಿಸಿವೆ’ ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭೂಮಿ ಪರಿಹಾರ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದ್ದು, ಮೃತಪಟ್ಟ ರೈತರ ಹೆಸರಲ್ಲಿ ಸಹ ಬ್ಯಾಂಕಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಹಣ ತೆಗೆಯಲಾಗಿದೆ’ ಎಂದು ಆರೋಪಿಸಿದರು.

‘14 ರೈತರ ಹೆಸರಿನಲ್ಲಿ ನಕಲಿ ಖಾತೆ ತೆರೆದು ಅಂದಾಜು ₹40 ಕೋಟಿ ವರ್ಗಾವಣೆ ಮಾಡಲಾಗಿದೆ. ಈ ಹಗರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಉನ್ನತ ಹಂತದ ತನಿಖೆ ನಡೆಸಬೇಕು. ಒಂದೂವರೆ ವರ್ಷದಿಂದ ನಿರಂತರವಾಗಿ ಹೋರಾಟ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ಸಕರಾತ್ಮಕವಾಗಿ ಸ್ಪಂದಿಸಿಲ್ಲ. ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಎಲ್ಲ ಹಣ ವಸೂಲು ಮಾಡಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಭೂಮಿ ಕಳೆದುಕೊಂಡ ಗೋಕುಲದ ರೈತ ಕೃಷ್ಣಪ್ಪ ಬೆಳ್ಳೇರಿ ಮಾತನಾಡಿ, ‘ಕೆಐಎಡಿಬಿ ನಮ್ಮ ಜಮೀನನ್ನು ಸ್ವಾಧೀನಪಡಿಸಿಕೊಂಡು ಪರಿಹಾರ ನೀಡಿದೆ. ಆದರೆ, 2022ರಲ್ಲಿ ನನ್ನ ಹೆಸರಲ್ಲಿ ಬ್ಯಾಂಕ್‌ನಲ್ಲಿ ನಕಲಿ ಖಾತೆ ತೆರೆದು ₹2.95 ಕೋಟಿ ಆರ್‌ಟಿಜಿಎಸ್‌ ಮಾಡಲಾಗಿದೆ. ನನ್ನ ಸೋದರ ನಾಗಪ್ಪ ಬೆಳ್ಳೇರಿ 2019ರಲ್ಲಿಯೇ ನಿಧನರಾಗಿದ್ದು, 2022ರಲ್ಲಿ ಅವರ ಹೆಸರಲ್ಲಿ ನಕಲಿ ಖಾತೆ ಸೃಷ್ಟಿಸಿ ₹2.58 ಕೋಟಿ ವರ್ಗಾಯಿಸಿಕೊಳ್ಳಲಾಗಿದೆ’ ಎಂದು ಆರೋಪಿಸಿದರು.

ಜನಜಾಗೃತಿ ಸಂಘದ ಉಪಾಧ್ಯಕ್ಷ ನಾಗರಾಜ ಕಿರಣಗಿ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.