ADVERTISEMENT

ಶಿಕ್ಷಕರಿಗೆ ‌ಮನೆಯಿಂದಲೇ ತಯಾರಿಗೆ ಅವಕಾಶ ಕೊಡಿ

ಸಚಿವರಿಗೆ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಜೂನ್ 2020, 17:20 IST
Last Updated 3 ಜೂನ್ 2020, 17:20 IST

ಹುಬ್ಬಳ್ಳಿ: ಸರ್ಕಾರ ಶಾಲೆ ಆರಂಭಿಸುವ ನಿರ್ಧಾರ ಕೈಗೊಳ್ಳುವ ತನಕ ಶಿಕ್ಷಕರಿಗೆ ಮನೆಯಿಂದಲೇ ಪೂರ್ವತಯಾರಿ ಮಾಡಿಕೊಳ್ಳಲು ಅವಕಾಶ ಕೊಡಬೇಕು. ಶಾಲೆ ಪ್ರಾರಂಭದ ದಿನದಿಂದಲೇ ಮಕ್ಕಳು ಹಾಗೂ ಶಿಕ್ಷಕರು ಏಕಕಾಲದಲ್ಲಿ ಶಾಲೆಗೆ ಹಾಜರಾಗುವಂತೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪದಾಧಿಕಾರಿಗಳು ಶಿಕ್ಷಣ ಸಚಿವ ಸುರೇಶ ಕುಮಾರ್‌ ಅವರಿಗೆ ಮನವಿ ಮಾಡಿದ್ದಾರೆ.

ಜುಲೈನಲ್ಲಿ ಶಾಲಾ, ಕಾಲೇಜುಗಳ ಆರಂಭಕ್ಕೆ ಕ್ರಮ ಕೈಗೊಳ್ಳಬಹುದು ಎಂದು ಕೇಂದ್ರ ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸಿರುವ ಕಾರಣ ರಾಜ್ಯ ಸರ್ಕಾರ ಜೂನ್‌ 5ರಿಂದ ಮುಖ್ಯ ಗುರುಗಳು ಹಾಗೂ ಸಿಬ್ಬಂದಿ ಶಾಲೆಗೆ ಬರಬೇಕು. ಶಾಲಾ ಪ್ರಾರಂಭಕ್ಕೆ ಪೂರ್ವತಯಾರಿ ಮಾಡಿಕೊಳ್ಳಬೇಕು ಎಂದು ಸೂಚಿಸಿದೆ. ಆದರೆ, ಶಿಕ್ಷಕರು ಬಹಳಷ್ಟು ಅಪಾಯದಲ್ಲಿ ಆತಂಕದಿಂದ ಶಾಲೆಗೆ ಹೋಗಬೇಕಾಗಿದೆ ಎಂದು ಪದಾಧಿಕಾರಿಗಳು ಹೇಳಿದ್ದಾರೆ.

ಲಾಕ್‌ಡೌನ್‌ ಕಾರಣದಿಂದ ತಮ್ಮ ಊರುಗಳಲ್ಲಿಯೇ ಉಳಿದಿರುವ ಶಿಕ್ಷಕಕರಿಗೆ ಬೇರೆ ಜಿಲ್ಲೆಗಳಿಗೆ ತೆರಳಲು ಸರಿಯಾದ ಸಮಯಕ್ಕೆ ಸಾರಿಗೆ ವ್ಯವಸ್ಥೆ ಇಲ್ಲ. ಹೆಚ್ಚು ಕೋವಿಡ್‌ 19 ಪ್ರಕರಣಗಳು ಇರುವ ಸ್ಥಳದಿಂದ ಕೆಲಸ ಮಾಡುವ ಹಳ್ಳಿಗಳ ಶಾಲೆಗಳಿಗೆ ಹೋದರೆ ಅಲ್ಲಿಯೂ ಸೋಂಕು ತಗುಲುವ ಅಪಾಯವಿದೆ. ಮಕ್ಕಳ ದಾಖಲಾತಿಗಾಗಿ ಶಿಕ್ಷಕರು ಮನೆಮನೆಗೆ ತೆರಳಿದಾಗ ಸೋಂಕು ಹರಡಿದರೂ ಅಚ್ಚರಿಯಿಲ್ಲ. ಆದ್ದರಿಂದ ಸರ್ಕಾರ ಈ ಕುರಿತು ತನ್ನ ನಿರ್ಧಾರ ಪುನರ್‌ ಪರಿಶೀಲಿಸಬೇಕು ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಅಶೋಕ ಎಂ.ಸಜ್ಜನ, ಪದಾಧಿಕಾರಿಗಳಾದ ಮಲ್ಲಿಕಾರ್ಜುನ ಉಪ್ಪಿನ ಗೌರವ, ಮಹೇಶ ಜೋಶಿ, ಎಲ್.ಐ. ಲಕ್ಕಮ್ಮನವರ, ಶರಣಪ್ಪಗೌಡ್ರ, ಎಸ್.ಎಫ್.ಪಾಟೀಲ ಮನವಿ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.