ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ
ಪ್ರಾತಿನಿಧಿಕ ಚಿತ್ರ
ಹುಬ್ಬಳ್ಳಿ: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಗೌರವ ಸಂಭಾವನೆ ಮತ್ತು ಸೂಕ್ತ ತರಬೇತಿ ನೀಡದೆ ನಿಯೋಜಿಸಿರುವುದಕ್ಕೆ ಅಂಗನವಾಡಿ ಕಾರ್ಯಕರ್ತೆಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎಸ್ಎಸ್ಎಲ್ಸಿ, ಪಿಯುಸಿ ಮುಗಿಸಿರುವ 20 ಸಾವಿರ ಅಂಗನವಾಡಿ ಕಾರ್ಯಕರ್ತೆಯರನ್ನು ಸಮೀಕ್ಷೆಗೆ ಬಳಸಲಾಗಿದೆ. ಈಗ ನಿಯೋಜನೆಗೊಂಡಿರುವ ಶಿಕ್ಷಕರಿಗೆ ಸಹಾಯಕರಾಗಿ ಕಾರ್ಯ ನಿರ್ವಹಿಸುವ ಜತೆಗೆ, ಸಮೀಕ್ಷೆ ನಡೆಸಿದ ಮನೆಗಳ ಪುನರ್ ಪರಿಶೀಲನೆ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿದೆ.
ಕಾರ್ಯಕರ್ತೆಯರನ್ನು ಸಮೀಕ್ಷೆಗೆ ನಿಯೋಜಿೇಹನ ಕುರಿತು ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಆದೇಶ ಬಂದಿಲ್ಲ. ಕೆಲ ತಾಲ್ಲೂಕುಗಳಲ್ಲಿ ತಹಶೀಲ್ದಾರ್ಗಳು ಮಾತ್ರ ಆದೇಶ ಹೊರಡಿಸಿದ್ದು, ಗೌರವ ಸಂಭಾವನೆ ನೀಡುವ ಕುರಿತು ತಿಳಿಸಿಲ್ಲ.
‘ಕೆಲಸಕ್ಕೆ ತಕ್ಕಂತೆ ಸಂಭಾವನೆ ನೀಡಿದರೆ ಅನುಕೂಲ. ಐದು, ಹತ್ತು ಸಾವಿರಕ್ಕೆ ಅಂಗನವಾಡಿಗಳಲ್ಲಿ ದುಡಿಯುವ ನಾವು, ಸಮೀಕ್ಷೆಗೆ ಬೆಳಿಗ್ಗೆಯಿಂದ ಸಂಜೆವರೆಗೆ ಮನೆಮನೆಗೆ ಓಡಾಡಬೇಕು. ಭಾನುವಾರವೂ ರಜೆ ಪಡೆಯುವ ಹಾಗಿಲ್ಲ’ ಎಂದು ಅಂಗನವಾಡಿ ಕಾರ್ಯಕರ್ತೆಯೊಬ್ಬರು ಬೇಸರ ವ್ಯಕ್ತಪಡಿಸಿದರು.
‘ನಿಗದಿತ ಅವಧಿಯಲ್ಲಿ ಸಮೀಕ್ಷೆ ಮುಗಿಯದ್ದಕ್ಕೆ ಏಕಾಏಕಿ, ಕಾರ್ಯಕರ್ತೆಯರನ್ನು ನಿಯೋಜಿಸಿದ್ದಾರೆ. ರಾಯಚೂರಿನಲ್ಲಿ ಆಕ್ಷೇಪಿಸಿದ್ದ ಐವರು ಕಾರ್ಯಕರ್ತೆಯರನ್ನು ಅಮಾನತು ಮಾಡಲಾಗಿತ್ತು. ತರಬೇತಿ, ಗೌರವ ಸಂಭಾವನೆ ನೀಡದೆ ಸಮೀಕ್ಷೆ ಮಾಡುವಂತೆ ಸೂಚಿಸಿದ್ದು ಸರಿಯಲ್ಲ’ ಎಂದು ಅಂಗನವಾಡಿ ನೌಕರರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸುನಂದಾ ಎಸ್.ಎಚ್., ಹೇಳಿದರು.
ಸರ್ಕಾರ ಸೂಚಿಸಿದ ಕೆಲಸ ಮಾಡಲು ಸಿದ್ಧರಿದ್ದೇವೆ. ಸಮೀಕ್ಷೆಗೆ ನಿಯೋಜಿತರಾದ ಶಿಕ್ಷಕರಿಗೆ ಗೌರವ ಸಂಭಾವನೆ ನೀಡಿದಂತೆ ನೀಡಬೇಕುಸುನಂದಾ ಎಸ್.ಎಚ್., ಪ್ರಧಾನ ಕಾರ್ಯದರ್ಶಿ, ಅಂಗನವಾಡಿ ನೌಕರರ ಸಂಘ
ಅಂಗನವಾಡಿ ಕಾರ್ಯಕರ್ತೆಯರನ್ನು ಸಮೀಕ್ಷೆಗೆ ನಿಯೋಜಿಸಿಕೊಳ್ಳಲಾಗಿದೆ. ಅವರಿಗೆ ಯಾವ ರೀತಿ ಗೌರವ ಸಂಭಾವನೆ ನೀಡಬೇಕು ಎಂಬ ಕುರಿತು ಪರಿಶೀಲಿಸಲಾಗುವುದುರುದ್ರೇಶ ಘಾಳಿ, ಸಮೀಕ್ಷಾ ಉಸ್ತುವಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.