
ಹುಬ್ಬಳ್ಳಿ: ಇಲ್ಲಿನ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ ‘ಕಲಾದೇವಿ–2025’ ಕಾರ್ಯಕ್ರಮವು ವಿದ್ಯಾರ್ಥಿಗಳ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆಯಾಗಿತ್ತು.
ಪ್ರಾದೇಶಿಕ ಸಾರಿಗೆ ಕಚೇರಿ, ರೋಟರಿ ಕ್ಲಬ್, ಇನ್ನರ್ವೀಲ್ ಕ್ಲಬ್, ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಎನ್ಎಸ್ಎಸ್ ಘಟಕ, ಕೆಎಲ್ಇ ಟೆಕ್ನ ವಿದ್ಯಾರ್ಥಿ ಪರಿಷತ್ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಕಲ್ಪನೆ ಮತ್ತು ಕಲಾತ್ಮಕ ಕೌಶಲ ಅಭಿವೃದ್ಧಿಪಡಿಸುವ ಉದ್ದೇಶದೊಂದಿಗೆ ಚಿತ್ರಕಲೆ ಸ್ಪರ್ಧೆ ನಡೆಯಿತು. ಹುಬ್ಬಳ್ಳಿ, ಧಾರವಾಡ ಸುತ್ತಮುತ್ತಲಿನ ಕಾಲೇಜುಗಳ ಸುಮಾರು 700 ವಿದ್ಯಾರ್ಥಿಗಳು ಭಾಗವಹಿಸಿದ್ದರು.
‘ನನ್ನ ಮೆಚ್ಚಿನ ಕಾರ್ಟೂನ್’, ‘ಮಾಲಿನ್ಯದಿಂದ ಪರಿಸರದ ಮೇಲೆ ಬೀರುವ ಕೆಟ್ಟ ಪರಿಣಾಮಗಳು’, ‘ನನ್ನ ಕನಸು’ ಎಂಬ ಮೂರು ವಿಷಯಗಳನ್ನು ಆಧರಿಸಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಎಂಟು ಬಹುಮಾನಗಳನ್ನು ಬಾಲಕಿಯರೇ ಗಳಿಸಿದ್ದು ವಿಶೇಷ. ಚಿತ್ರಕಲೆ ಸ್ಪರ್ಧೆ ಜೊತೆಗೆ ಪರಿಸರ ಜಾಗೃತಿ ಮೂಡಿಸಲು ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ‘ವೇಸ್ಟ್ನಿಂದ ಬೆಸ್ಟ್’ ಯೋಜನೆ ಪ್ರದರ್ಶಿಸಲಾಯಿತು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಕಾಂತ ಬಡಿಗೇರ ಉದ್ಘಾಟಿಸಿದರು. ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಸಂಜಯ ಕೊಟಬಾಗಿ, ಸಿದ್ದು ಬೆಳ್ಳದ, ಆಶಾಲತಾ, ಇನ್ನರ್ವೀಲ್ ಕ್ಲಬ್ ಅಧ್ಯಕ್ಷೆ ಮೀನಲ್ ಸಾಲುಂಕೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.