
ಹುಬ್ಬಳ್ಳಿ: ಬಿಸಿಲಿನ ಝಳ ಪ್ರತಿ ದಿನ ಹೆಚ್ಚುತ್ತಿದ್ದು, ಜನ ತತ್ತರಿಸುವಂತಾಗಿದೆ. ಹೊರಗಡೆ ಓಡಾಡುವ ಜನರ ಬಾಯಾರಿಕೆ ನೀಗಿಸಲು ಇಲ್ಲಿನ ವೀರಾಪುರ ಓಣಿಯ ಆಟೊರಿಕ್ಷಾ ಚಾಲಕ ನಾಗರಾಜ ಗಬ್ಬೂರ ಅವರು ತಮ್ಮ ಆಟೊರಿಕ್ಷಾದಲ್ಲಿ ಕುಡಿಯುವ ನೀರಿನ ಉಚಿತ ವ್ಯವಸ್ಥೆ ಕಲ್ಪಿಸಿದ್ದಾರೆ. ಇದು ಹಲವು ಆಟೊರಿಕ್ಷಾ ಚಾಲಕರಿಗೆ ಮಾದರಿ ಆಗಿದೆ.
ಇಲ್ಲಿನ ಸಿದ್ಧಾರೂಢ ಮಠದ ಆವರಣದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಉತ್ತರ ಕರ್ನಾಟಕ ಅಟೊ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ನೇತೃತ್ವ ವಹಿಸಿದ್ದರು.
‘ಬಾಯಾರಿದವರಿಗೆ ನೀರು ನೀಡುವುದು ಕರ್ತವ್ಯ, ಸಂಸ್ಕೃತಿಯೂ ಹೌದು. 2016ರಿಂದ ಆಟೊರಿಕ್ಷಾದಲ್ಲಿ ನೀರಿನ ಕ್ಯಾನ್ ಅಳವಡಿಸಿಕೊಂಡು ಜನರಿಗೆ ಉಚಿತವಾಗಿ ನೀರು ಹಂಚುತ್ತಿರುವೆ. ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ನನ್ನಿಂದ ಪ್ರೇರಿತರಾಗಿ ಇನ್ನೂ 14 ಆಟೊರಿಕ್ಷಾ ಚಾಲಕರು ಉಚಿತ ನೀರಿನ ಸೇವೆ ಆರಂಭಿಸಿದ್ದು ಖುಷಿ ಕೊಟ್ಟಿದೆ. ಅವರೆಲ್ಲರಿಗೆ ಕ್ಯಾನ್ ಅಳವಡಿಸುವ ಸ್ಟ್ಯಾಂಡ್ ನಿರ್ಮಿಸಿ ಕೊಟ್ಟಿದ್ದೇನೆ’ ಎಂದು ನಾಗರಾಜ ಗಬ್ಬೂರ ‘ಪ್ರಜಾವಾಣಿ’ಗೆ ತಿಳಿಸಿದರು.
‘ಪ್ರತಿದಿನ ಮೂರರಿಂದ ನಾಲ್ಕು ಕ್ಯಾನ್ ನೀರು ಖಾಲಿ ಆಗುತ್ತದೆ. ಶುದ್ಧ ಕುಡಿಯುವ ನೀರನ್ನೇ ಒದಗಿಸುತ್ತೇನೆ. ಪ್ರತಿ ಕ್ಯಾನ್ಗೆ ₹5 ಖರ್ಚು ಆಗುತ್ತದೆ. ಅದೇನೂ ಹೊರೆಯಲ್ಲ. ಸೇವೆ ಮುಖ್ಯ. ನೀರು ಕುಡಿದವರೆಲ್ಲರೂ ನನ್ನ ಆಟೊರಿಕ್ಷಾದಲ್ಲಿ ಬರುತ್ತಾರೆ ಎಂಬ ನಿರೀಕ್ಷೆ ಇಲ್ಲ. ಪ್ರಯಾಣಿಕರು ಅಲ್ಲದೇ ಯಾರಾದರೂ ನೀರು ಕುಡಿಯಬಹುದು’ ಎನ್ನುತ್ತಾರೆ ಅವರು.
ಪುಟ್ಟ ಗ್ರಂಥಾಲಯ: ‘ಕನ್ನಡವನ್ನು ಮರೆಯಬಾರದು, ಪುಸ್ತಕಗಳನ್ನು ಓದಬೇಕು ಎಂಬ ಉದ್ದೇಶದಿಂದ ಆಟೊರಿಕ್ಷಾದಲ್ಲಿ ಪುಟ್ಟ ಗ್ರಂಥಾಲಯದ ವ್ಯವಸ್ಥೆಯೂ ಮಾಡಿದ್ದೇನೆ’ ಎಂದು ನಾಗರಾಜ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.