ಹುಬ್ಬಳ್ಳಿ: ನಿಖರ ಪಾಸ್ಗಳು ಹಾಗೂ ತಂತ್ರಗಾರಿಕೆಯ ಆಟಕ್ಕೆ ಒತ್ತು ಕೊಟ್ಟ ಗದುಗಿನ ಹನುಮಾನ್ ಬ್ಲೆಸಿಂಗ್ ತಂಡ, ಯಂಗ್ ಸ್ಟಾರ್ಸ್ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ್ದ ಅಂತರ ರಾಜ್ಯಗಳ ಆಹ್ವಾನಿತ ಹಾಕಿ ಟೂರ್ನಿಯಲ್ಲಿ ಚಾಂಪಿಯನ್ ಆಯಿತು.
ಇಲ್ಲಿನ ಸೆಟ್ಲಮೆಂಟ್ನ ಮಣ್ಣಿನ ಅಂಗಳದಲ್ಲಿ ಮಂಗಳವಾರ ನಡೆದ ಫೈನಲ್ನಲ್ಲಿ ಬ್ಲೆಸಿಂಗ್ ತಂಡ 2–1 ಗೋಲುಗಳಿಂದ ಹೈದರಾಬಾದ್ನ ಆರ್ಟಿಲರಿ ಸೆಂಟರ್ ಎದುರು ಗೆಲುವು ಪಡೆದು ಟ್ರೋಫಿ ಹಾಗೂ ₹30 ಸಾವಿರ ಬಹುಮಾನ ಪಡೆದುಕೊಂಡಿತು. ರನ್ನರ್ಸ್ ಅಪ್ ತಂಡಕ್ಕೆ ಟ್ರೋಫಿ ಹಾಗೂ ₹20 ಸಾವಿರ ಬಹುಮಾನ ಲಭಿಸಿತು.
ಉಭಯ ತಂಡಗಳು ಗೋಲು ಗಳಿಸಲು ಮೊದಲ ಕ್ವಾರ್ಟರ್ನಲ್ಲಿ ಉತ್ತಮ ಪ್ರಯತ್ನ ಮಾಡಿದರೂ ಫಲ ಲಭಿಸಲಿಲ್ಲ. ಎರಡನೇ ಕ್ವಾರ್ಟರ್ನ ಮೊದಲ ನಿಮಿಷದಲ್ಲಿಯೇ ಆರ್ಟಿಲರಿ ಸೆಂಟರ್ ತಂಡದ ಸಚಿನ್ ರಾಠೋಡ್ (16ನೇ ನಿಮಿಷ) ಪೆನಾಲ್ಟಿ ಸ್ಟ್ರೋಕ್ ಮೂಲಕ ಗೋಲು ಗಳಿಸಿದರು. ಗದಗ ತಂಡದ ಚಿರಂತ್ (23ನೇ ನಿಮಿಷ) ಚೆಂಡನ್ನು ಗುರಿ ಸೇರಿಸಿ ಸಮಬಲ ಸಾಧಿಸಿದರು.
ಗದಗ ತಂಡದ ಆಟಗಾರರು ಎರಡು ಮತ್ತು ಮೂರನೇ ಕ್ವಾರ್ಟರ್ಗಳಲ್ಲಿ ಚೆಂಡಿನ ಮೇಲೆ ಹೆಚ್ಚು ಹೊತ್ತು ನಿಯಂತ್ರಣ ಸಾಧಿಸಿ ಗೋಲು ಗಳಿಸುವ ಪ್ರಯತ್ನ ಮಾಡಿದರು. ಇದಕ್ಕೆ ಎದುರಾಳಿ ತಂಡದ ರಕ್ಷಣಾ ವಿಭಾಗದ ಆಟಗಾರರು ಅವಕಾಶ ಕೊಡಲಿಲ್ಲ.ಆರ್ಟಿಲರಿ ಸೆಂಟರ್ ತಂಡ ತನಗೆ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲವಾಯಿತು. ಹೀಗಾಗಿ ಕೊನೆಯ ಕ್ವಾರ್ಟರ್ ಅವಧಿಯ ಆಟ ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸಿತು.
ಈ ಅವಧಿಯಲ್ಲಿ ಗದಗ ತಂಡದ ಹರೀಶ್ ಮುಟಗಾರ ಸಹ ಆಟಗಾರರು ನೀಡಿದ ಪಾಸ್ಗಳ ನೆರವಿನಿಂದ 50ನೇ ನಿಮಿಷದಲ್ಲಿ ಗೋಲು ದಾಖಲಿಸಿ ಮುನ್ನಡೆ ತಂದುಕೊಟ್ಟರು. ಕೊನೆಯ ಹತ್ತು ನಿಮಿಷ ‘ಟೈಮ್ ಪಾಸ್’ ತಂತ್ರ ಮಾಡಿ ಗೆಲುವಿನ ಖುಷಿ ತನ್ನದಾಗಿಸಿಕೊಂಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.