ಹುಬ್ಬಳ್ಳಿ: ‘ಬಸವಣ್ಣನವರು ಹನ್ನೆರಡನೇ ಶತಮಾನದಲ್ಲೇ ಸಮ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದರು. ಎಲ್ಲಾ ಸಮುದಾಯಗಳ ಶರಣಗೊಂದಿಗೆ ಸೇರಿ,ಜಾತಿ ಹಾಗೂ ತಾರತಮ್ಯವನ್ನು ತೊಡೆದು ಹಾಕಲು ಮುಂದಾದರು. ಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಬಸವಾದಿ ಶರಣರು ವಚನಗಳನ್ನು ರಚಿಸಿದರು. ಹಾಗಾಗಿಯೇ, ಜಗತ್ತಿನಾದ್ಯಂತ ಬಸವಣ್ಣನನ್ನು ನೆನೆಯಲಾಗುತ್ತಿದೆ’ ಎಂದು ಕೆಎಲ್ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ ಹೇಳಿದರು.
ಬಸವ ಜಯಂತಿ ಅಂಗವಾಗಿ ನಗರದ ಪಿ.ಸಿ. ಜಾಬಿನ ಕಾಲೇಜಿನಲ್ಲಿ ಪಿ.ಸಿ. ಜಾಬಿನ ಪರಿವಾರ ಬುಧವಾರ ಆಯೋಜಿಸಿದ್ದ ‘ಶರಣ ಚಿಂತನೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಬಸವಣ್ಣನ ವಚನಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಬದುಕು ಸುಭಿಕ್ಷವಾಗುತ್ತದೆ. ಅವರು ಹೇಳಿದ ಕಾಯಕ ಹಾಗೂ ದಾಸೋಹವನ್ನು ಎಲ್ಲರೂ ಪಾಲಿಸಬೇಕು. ಅದಕ್ಕೆ, ಕೇವಲಒಂದು ಶಿಕ್ಷಣ ಸಂಸ್ಥೆಯಿಂದ ಆರಂಭಗೊಂಡ ಕೆಎಲ್ಇ ಸಂಸ್ಥೆಯು, ಇಂದು 287 ಶಿಕ್ಷಣ ಸಂಸ್ಥೆಗಳಾಗಿ ವಿಸ್ತರಿಸಿರುವುದೇ ಸಾಕ್ಷಿ’ ಎಂದರು.
ಲೆಕ್ಕ ಪರಿಶೋಧಕ ನಟರಾಜ ಮುರ್ಶಿಳ್ಳಿ ಮಾತನಾಡಿ, ‘ಶರಣ ತತ್ವ ಅರಿವಿನ ಮೇಲೆ ನಿಂತಿದೆ. ಕೆಲಸವೇ ಬೇರೆ ಕಾಯಕವೇ ಬೇರೆ. ಯಾರಿಗೂ ಗೊತ್ತಾಗದ ಹಾಗೆ ಮಾಡುವ ದಾನವೇ ದಾಸೋಹ. ಶರಣರ ಬದುಕನ್ನು ವಿದ್ಯಾರ್ಥಿಗಳು ಸ್ಫೂರ್ತಿಯಾಗಿ ಸ್ವೀಕರಿಸಬೇಕ. ಭಾರತ ಅತ್ಯಂತ ಪುಣ್ಯಭೂಮಿ. ಮನುಕುಲದ ಉದ್ಧಾರಕ್ಕಾಗಿ ಇಲ್ಲಿ ಕಾಲಕಾಲಕ್ಕೂ ಮಹಾನ್ ಪುರುಷರು ಜನಸಿದ್ದಾರೆ. ಹಾಗಾಗಿ, ಭಾರತದಲ್ಲಿ ಜ್ಞಾನ ಸಂಪತ್ತು ಹೇರಳವಾಗಿದೆ’ ಎಂದರು.
ಚನ್ನಪ್ಪ ಜೆ. ಜಾಬಿನ ಮಾತನಾಡಿದರು. ಪ್ರಾಚಾರ್ಯ ಎಲ್.ಡಿ. ಹೊರಕೇರಿ ಅತಿಥಿಗಳನ್ನು ಸ್ವಾಗತಿಸಿದರು. ಪ್ರಾಚಾರ್ಯರಾದ ಡಾ.ವಿ.ಆರ್. ವಾಗ್ಮೋರೆ, ಸುನೀಲ ವೆರ್ಣೇಕರ, ಪ್ರಾಧ್ಯಾಪಕರಾದ ಎಸ್.ಪಿ. ಕೌಜಲಗಿ, ಸುಮಂಗಲಾ ಪಾಟೀಲ ಇದ್ದರು. ನಮ್ರತಾ ಬತ್ಲಿ ಪ್ರಾರ್ಥನೆ ಹಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.