ADVERTISEMENT

ಕೆರೆಯಂತಾದ ಬೆಳಗಲಿ ಶಾಲೆಯ ಅಂಗಳ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 14:22 IST
Last Updated 19 ನವೆಂಬರ್ 2021, 14:22 IST
ಹುಬ್ಬಳ್ಳಿ ಗ್ರಾಮೀಣ ತಾಲ್ಲೂಕಿನ ಬೆಳಗಲಿ ಗ್ರಾಮದ ಸರ್ಕಾರಿ ಶಾಲೆಯ ಆವರಣ ನೀರಿನಿಂದ ಆವೃತವಾಗಿರುವುದು
ಹುಬ್ಬಳ್ಳಿ ಗ್ರಾಮೀಣ ತಾಲ್ಲೂಕಿನ ಬೆಳಗಲಿ ಗ್ರಾಮದ ಸರ್ಕಾರಿ ಶಾಲೆಯ ಆವರಣ ನೀರಿನಿಂದ ಆವೃತವಾಗಿರುವುದು   

ಹುಬ್ಬಳ್ಳಿ: ಸಣ್ಣ ಮಳೆ ಬಂದರೂ ಪರದಾಟ. ಮೊಣಕಾಲದೆತ್ತರಕ್ಕೆ ನಿಲ್ಲುವ ನೀರಿನಲ್ಲಿ ನಡೆದುಕೊಂಡೇ ಹೋಗಬೇಕಾದ ಅನಿವಾರ್ಯತೆ. ಹೆಜ್ಜೆ ಇಟ್ಟರೆ ಹಾವೊ; ಚೇಳೋ ಎನ್ನುವ ಭೀತಿ.

ಹುಬ್ಬಳ್ಳಿ ಗ್ರಾಮೀಣ ತಾಲ್ಲೂಕಿನ ಬೆಳಗಲಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಪರಿಸ್ಥಿತಿ ಇದು. ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಶಾಲೆಯ ಅಂಗಳ ಕರೆಯಂತಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ನಿತ್ಯ ಶಾಲೆಗೆ ಹೋಗಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಗ್ರಾಮದಲ್ಲಿ ಸರಿಯಾಗಿ ಮಳೆ ನೀರು ಹರಿದು ಹೋಗುವ ವ್ಯವಸ್ಥೆಯಿಲ್ಲದ ಕಾರಣ ಸಣ್ಣ ಮಳೆ ಬಂದರೂ ಊರಿನ ನೀರೆಲ್ಲ ಶಾಲೆಯ ಅಂಗಳಕ್ಕೆ ಬರುತ್ತದೆ. ಇದರಿಂದಾಗಿ ಆತಂಕದಲ್ಲಿಯೇ ಮಕ್ಕಳು ಶಾಲೆಗೆ ಹೋಗಬೇಕಾದ ಪರಿಸ್ಥಿತಿಯಿದೆ. ಹಿಂದೆ ಮಳೆ ನೀರು ಶಾಲಾ ಅಂಗಳಕ್ಕೆ ಬಂದಾಗ ಅನೇಕ ವಿದ್ಯಾರ್ಥಿಗಳು ಜಾರಿ ಬಿದ್ದು ಪೆಟ್ಟು ಮಾಡಿಕೊಂಡ ಉದಾಹರಣೆಗಳೂ ಇವೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿದ್ದಾರೆ.

ADVERTISEMENT

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಹುಬ್ಬಳ್ಳಿ ಗ್ರಾಮೀಣ ಬಿಇಒ ಅಶೋಕ ಸಿಂದಗಿ ‘ಶಾಲೆ ಮುಂದೆ ಹಳ್ಳಕ್ಕೆ ಹೋಗುವ ದಾರಿ ಇರುವ ಕಾರಣ ಸಮಸ್ಯೆಯಾಗಿದೆ. ಊರಿನ ನೀರು ಶಾಲೆಯ ಅಂಗಳ ಸೇರುತ್ತದೆ. ಈ ಕುರಿತು ಗ್ರಾಮ ಪಂಚಾಯ್ತಿ ಅಧಿಕಾರಿಗಳ ಜೊತೆ ಚರ್ಚಿಸಿದ್ದು, ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗಿದೆ. ಆದಷ್ಟು ಬೇಗನೆ ಕೆಲಸ ಮುಗಿಯಲಿದೆ ಎಂದು ಬೆಳಗಲಿ ಗ್ರಾಮ ಪಂಚಾಯ್ತಿಯವರು ತಿಳಿಸಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.