ಹುಬ್ಬಳ್ಳಿ: 'ಜನರು ಶಾಂತಿ, ನೆಮ್ಮದಿ, ಅಭಿವೃದ್ಧಿ ಬಯಸುತ್ತಿದ್ದಾರೆ. ಹೀಗಿದ್ದಾಗ, ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿ ವಿಚಾರವಾಗಿ ನಾಯಕರು ಪ್ರಚೋದನಕಾರಿ ಹೇಳಿಕೆ ನೀಡುವುದು ಸರಿಯಲ್ಲ' ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿವಿವಾದ ಬಗೆಹರಿದ ವಿಷಯ. ಅದನ್ನು ಮುಂದಿಟ್ಟುಕೊಂಡು ಪ್ರಚೋದನಾಕಾರಿ ಹೇಳಿಕೆ ನೀಡುತ್ತಾ,ನೆಮ್ಮದಿ ಕದಡುವುದು ಸಮಂಜಸವಲ್ಲ. ಈ ಬಾರಿ ಅಲ್ಲಿಯವರೇ ನಮ್ಮವರನ್ನು ಪ್ರಚೋದಿಸಿದ್ದಾರೆ. ಅವರು ಬಸ್ಸಿಗೆ ಮಸಿ ಬಳಿದರೆಂದು ನಾವು ಬಳಿಯುವುದು, ನಾವು ಮಸಿ ಬಳಿದೆವೆಂದರೆ ಅವರು ಬಳಿಯುವುದು. ಇವೆಲ್ಲ ಅರ್ಥಹೀನ ಸಂಗತಿಗಳು' ಎಂದು ಬೇಸರ ವ್ಯಕ್ತಪಡಿಸಿದರು.
'ದೇಶ ಒಂದು, ನಾವೆಲ್ಲರೂ ಒಂದು ಎನ್ನುವ ಮನೋಭಾವದಿಂದ ಬದುಕಬೇಕು. ಯಾರೇ ಆಗಲಿ ತಕ್ಷಣ ಪ್ರಚೋದನಕಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಎರಡೂ ರಾಜ್ಯದವರು ಪರಸ್ಪರ ಹೊಂದಾಣಿಕೆಯಿಂದ ನೆಲೆಕಂಡುಕೊಂಡು ನೆಮ್ಮದಿಯಿಂದ ಬದುಕುತ್ತಿದ್ದಾರೆ. ಅಲ್ಲಿಯ ಹಳ್ಳಿ ಮಂದಿ ಇಲ್ಲಿ ಬರರು, ಇಲ್ಲಿಯವರು ಅಲ್ಲಿಗೆ ಹೋಗರು. ರಾಜಕೀಯ ಇರಲಿ, ಏನೇ ಇರಲಿ. ಇಂತಹ ವಿಷಯಗಳಿಂದ ಅವರು ಸಹ ಬೇಸತ್ತಿದ್ದಾರೆ' ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.