ಹುಬ್ಬಳ್ಳಿ: ‘ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಸೂಪರ್ ಫಾಸ್ಟ್ ರೈಲು ಆರಂಭಕ್ಕೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಮೌಖಿಕವಾಗಿ ಸಮ್ಮತಿ ಸೂಚಿಸಿದ್ದು, ಮುಂದಿನ ಆರು ತಿಂಗಳ ಒಳಗೆ ಚಾಲನೆ ನೀಡಲಾಗುವುದು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹುಬ್ಬಳ್ಳಿಯಿಂದ ಬೆಂಗಳೂರಿಗೆ ರೈಲು ಪ್ರಯಾಣದ ಅವಧಿ ಎಂಟು ಗಂಟೆ ಇದ್ದು, ಸೂಪರ್ ಫಾಸ್ಟ್ ರೈಲು ನಾಲ್ಕು ಗಂಟೆಯಲ್ಲೇ ತಲುಪಲಿದೆ’ ಎಂದರು.
‘ಮ್ಯಾಂಗನೀಸ್, ಕಲ್ಲಿದ್ದಲು ಗಣಿಗಾರಿಕೆ ಕುರಿತ ರಾಜ್ಯಗಳ ಅಧಿಕಾರವನ್ನು ಕೇಂದ್ರ ಕಸಿದುಕೊಳ್ಳುವ ಯತ್ನ ಮಾಡಿಲ್ಲ. ಈ ಹಿಂದಿದ್ದ ಮಾರ್ಗಸೂಚಿಗಳನ್ನೇ ಜಾರಿಗೊಳಿಸಲಾಗಿದೆ. ಅದರ ಪರಿಣಾಮ ₹45 ಸಾವಿರ ಕೋಟಿ ಸಂಗ್ರಹವಾಗಿದ್ದು, ₹25 ಸಾವಿರ ಕೋಟಿ ಗಣಿಗಾರಿಕೆ ಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಬಳಸಲಾಗಿದೆ. ಗಣಿಗಾರಿಕೆಯಿಂದ ಬಂದ ಆದಾಯವನ್ನು ಪುನರ್ವಸತಿ ಕಾರ್ಯಕ್ಕೆ ಬಳಸಿಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ’ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.