ADVERTISEMENT

ಕಾಂಗ್ರೆಸ್ ಗಟ್ಟಿನೆಲೆ ಇರುವಲ್ಲಿ ಬಿಜೆಪಿ ಕುತಂತ್ರ: ಪ್ರಸಾದ ಅಬ್ಬಯ್ಯ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2021, 7:03 IST
Last Updated 3 ಸೆಪ್ಟೆಂಬರ್ 2021, 7:03 IST
ಪ್ರಸಾದ ಅಬ್ಬಯ್ಯ
ಪ್ರಸಾದ ಅಬ್ಬಯ್ಯ   

ಹುಬ್ಬಳ್ಳಿ: ಮಹಾನಗರ ಪಾಲಿಕೆಯಲ್ಲಿ ನಮ್ಮ ಪಕ್ಷ ಹೆಚ್ಚು ಮತಗಳನ್ನು ಹೊಂದಿರುವ ವಾರ್ಡ್‌ಗಳಲ್ಲಿ ಬಿಜೆಪಿ ಉದ್ದೇಶಪೂರ್ವಕವಾಗಿ ಕುತಂತ್ರ ಮಾಡಿದೆ. ಸಕಾರಣ ಇಲ್ಲದಿದ್ದರೂ ಮತದಾರರ ಹೆಸರುಗಳನ್ನು 61ನೇ ವಾರ್ಡ್ ವ್ಯಾಪ್ತಿಯ ಕನ್ಯಾನಗರದಲ್ಲಿ ತೆಗೆದು ಹಾಕಿಸಿದೆ ಎಂದು ಕಾಂಗ್ರೆಸ್ ಶಾಸಕ ಪ್ರಸಾದ ಅಬ್ಬಯ್ಯ ಆರೋಪಿಸಿದರು.

ಇಲ್ಲಿನ ಸಂತೋಷ ನಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕುಟುಂಬ ಸಮೇತ ಬಂದು ಮತ ಚಲಾಯಿಸಿದ ಬಳಿಕ ಮಾಧ್ಯಮದವರ ಜೊತೆ ಅವರು ಮಾತನಾಡಿದರು.

ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಕನ್ಯಾನಗರದಲ್ಲಿ 500 ಮತದಾರರ ಹೆಸರುಗಳನ್ನು ಬೇರೆ ವಾರ್ಡ್ ಗಳಿಗೆ ಸ್ಥಳಾಂತರ ಮಾಡಲಾಗಿದೆ. ಕಾಂಗ್ರೆಸ್ 50ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ. ಬೆಲೆ ಏರಿಕೆ ಹಾಗೂ ಈಗಿನ ಸರ್ಕಾರ ಕೆಟ್ಟ ಆಡಳಿತದಿಂದ ಜನ ಬೇಸತ್ತು ಹೋಗಿದ್ದಾರೆ‌. ಇದರಿಂದ ಕಾಂಗ್ರೆಸ್‌ಗೆ ಅನುಕೂಲವಾಗಲಿದೆ ಎಂದರು.

ADVERTISEMENT

ಕಾಂಗ್ರೆಸ್ ಬಹುಮತ ಪಡೆಯುವುದು ‌ಸ್ಪಷ್ಟ. ಇದನ್ನು ಸಹಿಸಲಾಗದೇ ಬಿಜೆಪಿ ನಿರಂತರವಾಗಿ ಕುತಂತ್ರ ಮಾಡುತ್ತಿದೆ ಎಂದು ದೂರಿದರು.

ಮತದಾರರನ್ನು ಉದ್ದೇಶಪೂರ್ವಕವಾಗಿ ಸ್ಥಳಾಂತರ ಮಾಡಲಾಗಿದೆ. ಇದನ್ನು ಒಂದು ಗಂಟೆಯಲ್ಲಿ ‌ಸರಿಪಡಿಸಬೇಕು. ಇಲ್ಲವಾದರೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.