ADVERTISEMENT

ಅಳ್ನಾವರ: ಕಾರ್ಮಿಕ ಇಲಾಖೆ ಭ್ರಷ್ಟಾಚಾರ ಸಿಬಿಐ ತನಿಖೆ ನಡೆಸಿ; ನಾಗರಾಜ ಛಬ್ಬಿ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 5:14 IST
Last Updated 15 ಆಗಸ್ಟ್ 2025, 5:14 IST
ನಾಗರಾಜ ಛಬ್ಬಿ
ನಾಗರಾಜ ಛಬ್ಬಿ   

ಅಳ್ನಾವರ: ರಾಜ್ಯದ ಕಾರ್ಮಿಕ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ನೂರಾರು ಕೋಟಿ ರೂಪಾಯಿ ಹಗರಣ ಸಿಬಿಐ ತನಿಖೆಗೆ ಒಳಪಡಿಸಿ ತಪ್ಪಿಸ್ಥರಿಗೆ ಶಿಕ್ಷೆ ನೀಡಬೇಕು ಎಂದು
ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ ಆಗ್ರಹಿಸಿದ್ದಾರೆ.

ಇಲ್ಲಿನ ಬಿಜೆಪಿ ಕಾರ್ಯಾಲಯ ಗುರುವಾರ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಕಾಂಗ್ರೆಸ್‍ನ ಶಾಸಕರು, ಸಚಿವರು, ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ವಿವಿದ ಇಲಾಖೆಗಳಲ್ಲಿ ನಡೆದಿರುವ ಹಗರಣಗಳೇ ಇದನ್ನು ಪುಷ್ಠಿಕರಿಸುತ್ತಿವೆ.
ಆದರೂ ಸರ್ಕಾರ ಕಣ್ತೆರೆಯುತ್ತಿಲ್ಲ ಎಂದು ದೂರಿದರು.

ADVERTISEMENT

ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ಮೂರು ಬಾರಿ ಮಂತ್ರಿಯಾದರೂ ಜನ ಸೇವೆಯೆಂಬುದನ್ನು ಬದಿಗಿಟ್ಟು ರಾಜಕಾರಣವನ್ನು ವ್ಯಾಪಾರೀಕರಣ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

‘ಅವರದೇ ಅಧೀನದಲ್ಲಿರುವ ಕಾರ್ಮಿಕ ಇಲಾಖೆಯಲ್ಲಿ ನೂರಾರು ಕೋಟಿ ರೂಪಾಯಿ ಹಗರಣ ನಡೆದಿದೆ. ಅದರ ಬಗ್ಗೆ ಮಾತನಾಡದ ಸಚಿವ ಲಾಡ್ ಅವರು ಜನರ ದಾರಿ ತಪ್ಪಿಸಲು ಮೋದಿಯವರನ್ನು ಟೀಕಿಸುವ ಕೆಲಸ ಮಾಡುತ್ತಿದ್ದಾರೆ’ ಎಂದರು.

ತನಿಖೆಗೆ ಒಳಪಡಿಸದೆ ಇದ್ದರೆ ಮುಂಬರುವ ದಿನದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದರು.

ಬಿಜೆಪಿ ಧಾರವಾಡ ಜಿಲ್ಲಾ ಗ್ರಾಮೀಣ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ ಮಾತನಾಡಿ, ಕ್ಷೇತ್ರದಲ್ಲಿ ಅತಿಯಾದ ಮಳೆಯಿಂದ ಬೆಳೆ ಹಾನಿ ಸಂಭವಿಸಿದೆ. ಹಸಿಬರ ಉಂಟಾಗಿದ್ದು ಕೂಡಲೆ ರೈತರಿಗೆ ಪರಿಹಾರ ನೀಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಕಲ್ಮೇಶ ಬೆಲೂರ, ಶಿವಾಜಿ ಡೊಳ್ಳಿನ, ಯಲ್ಲಪ್ಪ ಹುಲೆಪ್ಪನವರ, ನಾರಾಯಣ ಮೋರೆ, ಲಿಂಗರಾಜ ಮೂಲಿಮನಿ, ಲಖನ ಬರಗುಂಡಿ, ಮಹಾವೀರ ಯಳ್ಳೂರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.