ADVERTISEMENT

ಕಲಘಟಗಿಯಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ; ಜೋಶಿ, ನಿಂಬಣ್ಣ, ಸವದಿ ಭಾಗಿ

ಕಲಘಟಗಿಯಲ್ಲಿ ವಿಜಯ ಸಂಕಲ್ಪ ಯಾತ್ರೆ; ಭರ್ಜರಿ ರೋಡ್‌ ಶೋ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 5:04 IST
Last Updated 20 ಮಾರ್ಚ್ 2023, 5:04 IST
ಕಲಘಟಗಿಯಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ರೋಡ್‌ಶೋನಲ್ಲಿ ಶಾಸಕ ಸಿ.ಎಂ.ನಿಂಬಣ್ಣವರ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಾರ್ಯಕರ್ತರತ್ತ ಕೈಬೀಸಿದರು. ಸಚಿವ ಮುರುಗೇಶ ನಿರಾಣಿ, ಶಾಸಕ ಲಕ್ಷ್ಮಣ ಸವದಿ ಇದ್ದಾರೆ
ಕಲಘಟಗಿಯಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ರೋಡ್‌ಶೋನಲ್ಲಿ ಶಾಸಕ ಸಿ.ಎಂ.ನಿಂಬಣ್ಣವರ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಾರ್ಯಕರ್ತರತ್ತ ಕೈಬೀಸಿದರು. ಸಚಿವ ಮುರುಗೇಶ ನಿರಾಣಿ, ಶಾಸಕ ಲಕ್ಷ್ಮಣ ಸವದಿ ಇದ್ದಾರೆ   

ಕಲಘಟಗಿ: ಪಟ್ಟಣಕ್ಕೆ ಆಗಮಿಸಿದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಶನಿವಾರ ಭವ್ಯ ಸ್ವಾಗತ ಕೋರಲಾಯಿತು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಸಿ.ಎಂ.ನಿಂಬಣ್ಣವರ ನೇತೃತ್ವದಲ್ಲಿ ಸುಮಾರು ಒಂದೂವರೆ ಕಿ.ಮೀ ರೋಡ್‌ ಶೋ ನಡೆಸಲಾಯಿತು.

ಪಟ್ಟಣದ ಎಪಿಎಂಸಿಯಿಂದ ಆರಂಭವಾದ ಯಾತ್ರೆ ಬಮ್ಮಿಗಟ್ಟಿ ಕ್ರಾಸ್, ಮಚಗಾರ ಓಣಿ, ಚೌತಮನಿ ಕಟ್ಟಿ, ಅಕ್ಕಿ ಓಣಿ, ಜೋಳದ ಓಣಿ, ಎಲಿಗಾರ ಓಣಿ, ಗ್ರಾಮದೇವಿ ದೇವಸ್ಥಾನದ ಮೂಲಕ ಯುವಶಕ್ತಿ ವೃತ್ತದಲ್ಲಿ ಸಮಾರೋಪಗೊಂಡಿತು.

ವಿವಿಧ ಗಲ್ಲಿಗಳಲ್ಲಿ ಯಾತ್ರೆ ಸಾಗುತ್ತಿದ್ದಂತೆ ಮನೆಗಳ ಚಾವಣಿಗಳ ಮೇಲೆ ನಿಂತಿದ್ದ ಕಾರ್ಯಕರ್ತರು, ಸಾರ್ವಜನಿಕರು ಹೂಮಳೆಗರೆದರು. ಜಾಂಜ್‌ ಮೇಳ, ಜಗ್ಗಲಗಿ, ಡೊಳ್ಳು ಕುಣಿತ, ಲಂಬಾಣಿ ಸಾಂಪ್ರದಾಯಿಕ ಉಡುಪು ಧರಿಸಿದ್ದ ಮಹಿಳೆಯರು ಯಾತ್ರೆಗೆ ಮೆರುಗು ತಂದರು. 108 ಮಹಿಳೆಯರು ಯಾತ್ರೆಯಲ್ಲಿ ಕುಂಭ ಹೊತ್ತು ಸಾಗಿದರು.

ADVERTISEMENT

ಯಾತ್ರೆಯ ಸಮಾರೋಪದಲ್ಲಿ ಮಾತನಾಡಿದ ಶಾಸಕ ಲಕ್ಷ್ಮಣ ಸವದಿ, ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕು. ಡಬಲ್ ಎಂಜಿನ್‌ ಸರ್ಕಾರವನ್ನು ಮುಂದುವರಿಸಬೇಕು’ ಎಂದರು.

ಶಾಸಕ ಸಿ.ಎಂ.ನಿಂಬಣ್ಣವರ ಮಾತನಾಡಿ, ‘ನನ್ನ ಮೇಲೆ ವಿಶ್ವಾಸವಿಟ್ಟು ಆಯ್ಕೆ ಮಾಡಿದ್ದಕ್ಕೆ ಒಂದು ದಿನವೂ ಸದನಕ್ಕೆ ಗೈರಾಗಿಲ್ಲ. ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು. ಈ ಗುರಿ ಸಾಧಿಸುವ ನಿಟ್ಟಿನಲ್ಲಿ ಕಾರ್ಯಕರ್ತರ ಪ್ರಯತ್ನ ದೊಡ್ಡದಿದೆ’ ಎಂದರು.

ಯಾತ್ರೆಯಲ್ಲಿ ಮೂವರ ಜೇಬಿಗೆ ಕತ್ತರಿ: ಯಾತ್ರೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಮುಖಂಡ ವಿ.ಎಸ್.ಪಾಟೀಲ ಅವರ ಜೇಬಿಗೆ ಕತ್ತರಿ ಹಾಕಿರುವ ಕಳ್ಳರು, ₹25 ಸಾವಿರ ಎಗರಿಸಿದ್ದಾರೆ. ಅಲ್ಲದೆ, ಮುಖಂಡ ಶಿವಾಜಿ ಡೊಳ್ಳಿನ ಸೇರಿ ಇನ್ನಿಬರ ಜೇಬುಗಳವು ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಚಿವ ಮುರುಗೇಶ ನಿರಾಣಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಕುಂದಗೋಳಮಠ, ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಶೇರೆವಾಡ, ವಿ.ಎಸ್.ಪಾಟೀಲ, ಐ.ಸಿ.ಗೋಕುಲ, ಶಿವಾನಂದ ಹಿರೇಮಠ, ಶಶಿಧರ ನಿಂಬಣ್ಣವರ, ಸಿ.ಎಫ್. ಪಾಟೀಲ, ಮಾತೇಶ ತಹಶೀಲ್ದಾರ್‌, ಈರಣ್ಣ ಜಡಿ, ಗುರು ಪಾಟೀಲ, ಗದಿಗೆಪ್ಪ ಕಳ್ಳಿಮನಿ, ಕಲ್ಮೇಶ ಹಾವೇರಪೇಟ್, ಮಹೇಶ ತಿಪ್ಪಣ್ಣವರ, ಸದಾನಂದ ಚಿಂತಾಮಣಿ, ಬ್ರಹ್ಮಕುಮಾರ ಅಳಗವಾಡಿ, ಬಸವರಾಜ ಹೊನ್ನಳ್ಳಿ, ಸೋಮು ಕೊಪ್ಪದ, ಪರಶುರಾಮ ಹುಲಿಹೊಂಡ, ಎಫ್.ಕೆ.ನಿಗದಿ, ಶಿವಾನಂದ ಹಿರೇಮಠ, ವೀರಣ್ಣ ಕುಬಸದ, ನಿಂಗಪ್ಪ ಸುತಗಟ್ಟಿ, ವಿಜಯಲಕ್ಷ್ಮಿ ಆಡಿನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.