ADVERTISEMENT

ಹುಬ್ಬಳ್ಳಿ: ವರ್ಷ ಕಳೆದರೂ ಮುಗಿಯದ ಸೇತುವೆ ಕಾಮಗಾರಿ

ಮತ್ತೆ ತುಂಬಿತು ಕರೆ; ತೆರವಾಗಲಿಲ್ಲ ನಾಲಾ ಒತ್ತುವರಿ, ಆತಂಕದಲ್ಲಿ ಜನತೆ

ಬಸವರಾಜ ಹವಾಲ್ದಾರ
Published 5 ಆಗಸ್ಟ್ 2020, 19:30 IST
Last Updated 5 ಆಗಸ್ಟ್ 2020, 19:30 IST
ಉಣಕಲ್‌ ಕೆರೆಯ ನಾಲಾದ ಉಣಕಲ್‌–ಗಾಮನಗಟ್ಟಿ ರಸ್ತೆಗೆ ನಿರ್ಮಿಸುತ್ತಿರುವ ಸೇತುವೆ ಅಪೂರ್ಣವಾಗಿರುವುದು. ಪಕ್ಕದಲ್ಲಿ ನಿರ್ಮಿಸಿದ್ದ ರಸ್ತೆಯೂ ನೀರಿನಲ್ಲಿ ಮುಳುಗಿ ಸಂಚಾರ ಸಂಪರ್ಕ ಕಡಿತವಾಗಿದೆ
ಉಣಕಲ್‌ ಕೆರೆಯ ನಾಲಾದ ಉಣಕಲ್‌–ಗಾಮನಗಟ್ಟಿ ರಸ್ತೆಗೆ ನಿರ್ಮಿಸುತ್ತಿರುವ ಸೇತುವೆ ಅಪೂರ್ಣವಾಗಿರುವುದು. ಪಕ್ಕದಲ್ಲಿ ನಿರ್ಮಿಸಿದ್ದ ರಸ್ತೆಯೂ ನೀರಿನಲ್ಲಿ ಮುಳುಗಿ ಸಂಚಾರ ಸಂಪರ್ಕ ಕಡಿತವಾಗಿದೆ   

ಹುಬ್ಬಳ್ಳಿ: ಉಣಕಲ್‌ ಕೆರೆ ಕಳೆದ ವರ್ಷ ಆ.6 ರಂದು ಕೋಡಿ ಬಿದ್ದಿತು. ಈ ಬಾರಿ ಒಂದು ದಿನ ಮೊದಲೇ ಕೋಡಿ ಬಿದ್ದಿದೆ. ನಾಲಾ ಒತ್ತುವರಿ ತೆರವಾಗಿಲ್ಲ. ಅದರ ಮಾರ್ಗದಲ್ಲಿ ಬರುವ ನಾಲ್ಕು ಸೇತುವೆಗಳ ಕಾಮಗಾರಿಯೂ ಪೂರ್ಣಗೊಂಡಿಲ್ಲ. ಹೀಗಾಗಿ ಅಲ್ಲಿರುವಸಾವಿರಾರು ಮನೆಗಳವರಿಗೆ ಮತ್ತೆ ಪ್ರವಾಹದ ಭೀತಿ ಎದುರಾಗಿದೆ.

ಮುಗಿಯದ ನಾಲ್ಕು ಸೇತುವೆಗಳ ನಿರ್ಮಾಣ

ಉಣಕಲ್‌ ನಾಲಾದಲ್ಲಿ ಪ್ರವಾಹ ಬಂದಿದ್ದರಿಂದ ಅದನ್ನು ದಾಟಿ ಹೋಗಲು ನಿರ್ಮಿಸಿದ್ದ ನಾಲ್ಕು ಸೇತುವೆಗಳು ಹಾಳಾಗಿದ್ದವು. ಅವುಗಳ ದುರಸ್ತಿ ಕಾರ್ಯವನ್ನು ಕೂಡಲೇ ಕೈಗೆತ್ತಿಕೊಳ್ಳಲಾಗುವುದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಚಿವ ಜಗದೀಶ ಶೆಟ್ಟರ್ ಭರವಸೆ ನೀಡಿದ್ದರು. ಆದರೆ, ಭರವಸೆ ಇನ್ನೂ ಈಡೇರಿಲ್ಲ.

ADVERTISEMENT

ದುರಸ್ತಿ ಕಾರ್ಯವನ್ನು ವಿಳಂಬವಾಗಿ ಫೆಬ್ರುವರಿಯಲ್ಲಿ ₹8.38 ಕೋಟಿ ವೆಚ್ಚದಲ್ಲಿ ಆರಂಭಿಸಲಾಗಿದೆ. ಜೂನ್‌ ಅಂತ್ಯದ ವೇಳೆಗೆ ಪೂರ್ಣಗೊಳಿಸಲು ಉದ್ದೇಶಿಸಲಾಗಿತ್ತು. ಆಗಸ್ಟ್‌ ಮೊದಲ ವಾರ ಮುಗಿಯುತ್ತ ಬಂದರೂ ಪೂರ್ಣಗೊಂಡಿಲ್ಲ.

ಉಣಕಲ್‌ ಕೆರೆಯ ಬಳಿ ಗಾಮನಗಟ್ಟಿಗೆ ಹೋಗುವ ಸೇತುವೆ ಹಾಗೂ ಲಿಂಗರಾಜ ನಗರದ ಉದ್ಯಾನದ ಬಳಿ ನಿರ್ಮಿಸುತ್ತಿರುವ ಸೇತುವೆ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿವೆ. ಬನಶಂಕರಿ ಬಡಾವಣೆ ಬಳಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ ಮುಕ್ಕಾಲು ಭಾಗವಾಗಿದೆ.

ದೇವಿನಗರದ ಬಳಿ ನಿರ್ಮಿಸುತ್ತಿರುವ ಸೇತುವೆಯ ಕಾಮಗಾರಿ ಅರ್ಧದಷ್ಟೂ ಆಗಿಲ್ಲ. ಕೆರೆ ಕೋಡಿ ಬಿದ್ದಿರುವುದರಿಂದ ಈಗ ಕಾಮಗಾರಿ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಎದ್ದಿದೆ.

ಉಣಕಲ್‌ನಿಂದ ಗಾಮನಗಟ್ಟಿಗೆ ಹೋಗುವ ಮಾರ್ಗದಲ್ಲಿ ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ನಾಲಾಕ್ಕೆ ತಾತ್ಕಾಲಿಕ ರಸ್ತೆ ನಿರ್ಮಿಸಲಾಗಿತ್ತು. ಕೆರೆ ಕೋಡಿ ಬಿದ್ದಿರುವುದರಿಂದ ರಸ್ತೆ ನೀರಿನಲ್ಲಿ ಮುಳುಗಿದ್ದು, ಸಂಪರ್ಕ ಕಡಿತಗೊಂಡಿದೆ.

ಬನಶಂಕರಿ ಬಡಾವಣೆಯ ಬಳಿ ಪೈಪ್‌ಗಳನ್ನು ಹಾಕಿ ರಸ್ತೆ ನಿರ್ಮಿಸಲಾಗಿತ್ತು. ಕೆರೆ ಕೋಡಿ ಬೀಳುತ್ತಿದ್ದಂತೆಯೇ ನೀರು ಹೆಚ್ಚಾಗಿ ಅನಾಹುತವಾಗಬಹುದು ಎಂದು ಪಾಲಿಕೆ ಅಧಿಕಾರಿಗಳೇ ಜೆಸಿಬಿ ಮೂಲಕ ಪೈಪ್‌ಗಳನ್ನು ಕಿತ್ತು ನೀರು ಹರಿದು ಹೋಗಲು ಅನುವು ಮಾಡಿಕೊಟ್ಟಿದ್ದಾರೆ.

ತೆರವಾಗದ ಒತ್ತುವರಿ

ನಾಲಾ ನೀರು ಮನೆಗಳಿಗೆ ನುಗ್ಗಿದಾಗ ನಾಲಾ ಒತ್ತುವರಿಯೇ ಇದಕ್ಕೆ ಕಾರಣ ಎಂಬ ದೂರುಗಳು ಕೇಳಿ ಬಂದಿದ್ದವು.

ಮಹಾನಗರ ಪಾಲಿಕೆ ಹಾಗೂ ಭೂ ಮಾಪನ ಇಲಾಖೆ ಸಿಬ್ಬಂದಿಗೆ ನಾಲೆಯ 8.5 ಕಿ.ಮೀ. ಸಮೀಕ್ಷೆಗೆ ಒಪ್ಪಿಸಲಾಗಿತ್ತು. ಸಮೀಕ್ಷೆಯಲ್ಲಿ 153 ಕಡೆಗಳಲ್ಲಿ ಅತಿಕ್ರಮಣವಾಗಿರುವುದು ಕಂಡು ಬಂದಿದೆ.

ಚನ್ನಪೇಟೆಯ ಧೋಬಿಘಾಟ್‌ ಮತ್ತು ಪಾಂಡುರಂಗ ಕಾಲೊನಿ ಪ್ರದೇಶಗಳಲ್ಲಿ ಶೇ 80ರಷ್ಟು ಒತ್ತುವರಿಯಾಗಿದೆ‌. ಕಾಲುವೆ ಅತಿಕ್ರಮಣ ಮಾಡಿಕೊಂಡು ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಇನ್ನು ಕೆಲವೆಡೆ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ, ಬಾಡಿಗೆ ನೀಡಿರುವುದು ವರದಿಯಲ್ಲಿ ಉಲ್ಲೇಖವಾಗಿದೆ. ಮತ್ತೆ ನಾಲೆ ತುಂಬಿ ಹರಿಯುತ್ತಿದ್ದರೂ ತೆರವು ಕಾರ್ಯ ಮಾತ್ರ ಆಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.