ಹುಬ್ಬಳ್ಳಿ: ಒಂದೇ ವಿನ್ಯಾಸದ ಮನೆಗಳನ್ನು ಕಟ್ಟುವ ಸಾಂಪ್ರದಾಯಿಕ ಶೈಲಿಗೆ ವಿದಾಯ ಹೇಳಿ, ಬದಲಾದ ತಂತ್ರಜ್ಞಾನಕ್ಕೆ ತಕ್ಕಂತೆ ಮನೆಗಳನ್ನು ಕಟ್ಟಬೇಕು. ಅವುಗಳು ಆದಷ್ಟು ಪರಿಸರ ಸ್ನೇಹಿಯಾಗಿರಬೇಕು ಎಂದು ಲಕ್ಷೇಶ್ವರದ ಕಮಲಾ ಮತ್ತು ವೆಂಕಪ್ಪ ಅಗಡಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಉದಯಕುಮಾರ ಎಸ್. ಹಂಪನ್ನನವರ ಹೇಳಿದರು.
ಸಿವಿಲ್ ಎಂಜಿನಿಯರ್ಗಳ ಸಲಹಾ ಸಂಸ್ಥೆ (ಎಸಿಸಿಇ) ಹುಬ್ಬಳ್ಳಿ ಶಾಖೆ ಬುಧವಾರ ಹಮ್ಮಿಕೊಂಡಿದ್ದ ಎಂಜಿನಿಯರ್ಸ್ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಮನೆಗೆ ದೊಡ್ಡ ಕಿಟಕಿಗಳನ್ನ ಅಳವಡಿಸಿ, ಅದಕ್ಕೆ ಕರ್ಟನ್ಗಳನ್ನು ಹಾಕಿ ಒಳಗೆ ಎಸಿ ಹಾಕುವ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಇದರ ಬದಲು ಪ್ರಕೃತಿಸ್ನೇಹಿ ಮನೆಗಳನ್ನಿ ನಿರ್ಮಿಸಬೇಕು’ ಎಂದು ಸಲಹೆ ನೀಡಿದರು.
‘ಯಾವಾಗಲೂ ವಿಜ್ಞಾನ, ತಂತ್ರಜ್ಞಾನದಲ್ಲಿ ನಿರಂತರ ಅಭಿವೃದ್ಧಿ ಸಾಧಿಸುತ್ತಿರಬೇಕು. ಜೊತೆಗೆ ದೈವಭಕ್ತಿಯೂ ಇರಬೇಕು. ಕೇವಲ ದೈವಭಕ್ತಿ ಅಥವಾ ತಂತ್ರಜ್ಞಾನದ ಬೆನ್ನು ಹತ್ತಿ ಹೋದರೆ ಸಾಕಾಗುವುದಿಲ್ಲ’ ಎಂದರು.
‘ಎಂಜಿನಿಯರ್ಗಳ ಸಲಹಾ ಸಂಸ್ಥೆ ನಿರಂತರವಾಗಿ ಹೊಸ ಪ್ರಯೋಗಗಳನ್ನು ಮಾಡುತ್ತಿರಬೇಕು. ತಮಗೆ ಕಷ್ಟವಾದ ಪ್ರಶ್ನೆಗಳ ಪರಿಹಾರಕ್ಕೆ ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವ ಬೆಳೆಸಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರಲ್ಲಿಯೂ ಪ್ರತಿಭೆಯಿದ್ದು, ಅದು ಶ್ರೇಷ್ಠ ಸಾಧನೆಯ ಮೂಲಕ ಅಜರಾಮರವಾಗಿ ಉಳಿಯಬೇಕು’ ಎಂದು ಅಭಿಪ್ರಾಯಪಟ್ಟರು.
ಕುಂದಗೋಳದ ಶಿವಾನಂದ ಮಠದ ಬಸವೇಶ್ವರ ಸ್ವಾಮೀಜಿ, ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಸಿವಿಲ್ ಮತ್ತು ಪರಿಸರ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಎಂ.ವಿ. ಚಿತವಾಡಗಿ, ಎಸಿಸಿಇ ಚೇರ್ಮನ್ ಸುರೇಶ ಎಂ. ಕಿರೇಸೂರ, ಅಧ್ಯಕ್ಷ ಶ್ರೀಕಾಂತ ವಿ. ಪಾಟೀಲ, ಕಾರ್ಯದರ್ಶಿಗಳಾದ ಸಂಜೀವ ಜೋಶಿ, ಶಶಿಕಾಂತ ಕಣ್ಣೂರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.