ADVERTISEMENT

ಬಣವಿ ಕೊಲೆ ಪ್ರಕರಣ: ಮತ್ತೊಬ್ಬ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 8:58 IST
Last Updated 13 ಫೆಬ್ರುವರಿ 2020, 8:58 IST

ಹುಬ್ಬಳ್ಳಿ: ರಾಜನಗರದ ಉದ್ಯಮಿ ವೆಂಕಣ್ಣ ಬಣವಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಬಾಂಗ್ಲಾ ಮೂಲದ ಆರೋಪಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

ಇಲಿಯಾಸ್‌ ಸೈಕತ್‌ ಬಂಧಿತನಾಗಿದ್ದು, ಬಾಂಗ್ಲಾದೇಶದ ಪಿರಿಶಪುರ ಜಿಲ್ಲೆಯ ಚಾಂದಿಪುರದವನು.

ಈ ಹಿಂದೆ ಕೇರಳದಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಇವನನ್ನು ಕಣ್ಣೂರು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದ್ದರು. ಆ ವೇಳೆ ಹುಬ್ಬಳ್ಳಿಯ ಔಷಧ ವ್ಯಾಪಾರಿ ವೆಂಕಣ್ಣ ಬಣವಿ ಅವರ ಕೊಲೆ ಪ್ರಕರಣದಲ್ಲಿಯೂ ಭಾಗಿಯಾಗಿರುವ ವಿಷಯ ತಿಳಿದು ಬಂದಿದೆ.

ADVERTISEMENT

‘ಕೇರಳದಲ್ಲಿ ಬಂಧನವಾಗಿರುವ ಆರೋಪಿಯನ್ನು ಇಲ್ಲಿಗೆ ಕರೆತಂದು ವಿಚಾರಣೆ ನಡೆಸಲು ನ್ಯಾಯಾಲಯದ ಕೇಳಿದ್ದೇವೆ’ ಎಂದು ಅಶೋಕನಗರ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ರವಿಚಂದ್ರ ಬಡಾಫಕ್ಕೀರಪ್ಪನವರ ‘ಪ್ರಜಾವಾಣಿ’ಗೆ ತಿಳಿಸಿದರು.

ಹಿನ್ನೆಲೆ: 2019ರ ಜನವರಿ 22ರಂದು ವ್ಯಾಪಾರಿ ಬಣವಿ ಅವರನ್ನು ಕೊಲೆ ಮಾಡಿ ₹11.15 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಆರು ಮಂದಿ ತಂಡ ದೋಚಿ ಪರಾರಿಯಾಗಿತ್ತು. ಬಾಂಗ್ಲಾದೇಶದ ಮೂಲದ ಮಾಣಿಕ್‌ ಇಮ್ರಾನ್‌ ಎಂಬುವವನನ್ನು ಬಂಧಿಸಲಾಗಿತ್ತು. ಇಬ್ಬರು ಆರೋಪಿಗಳ ಬಂಧನವಾಗಿದ್ದು, ಇನ್ನು ನಾಲ್ವರ ಬಂಧನವಾಗಬೇಕಿದೆ.

ಲಂಚ ಕೇಳಿದ ಅಧಿಕಾರಿ, ದೂರು ದಾಖಲು: ಇಲ್ಲಿನ ಕಾರವಾರ ರಸ್ತೆಯಲ್ಲಿರುವ ಪ್ರಿನ್ಸ್‌ ಪಾಯಿಂಟ್(ಗೋಲ್ಡನ್ ವೈನ್ಸ್‌) ಬಾರ್‌ ಮೇಲೆ ದಾಳಿ ನಡೆಸಿದ ಅಬಕಾರಿ ಅಧಿಕಾರಿ ಮಂಜುನಾಥ ಮಲ್ಲಿಗೇರಿ ಹಾಗೂ ಉಳಿದ ಸಿಬ್ಬಂದಿ ವಿರುದ್ಧ ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಾರ್‌ ಮಾಲೀಕ ಶ್ರೀನಿವಾಸ ಜಿತೂರಿ ಅವರ ಪತ್ನಿ ಲಲಿತಾ ಜಿತೂರಿ ದೂರು ನೀಡಿದ್ದಾರೆ.

ಫೆ. 6ರಂದು ಪ್ರಿನ್ಸ್‌ ಬಾರ್‌ ಮೇಲೆ ಬೆಳಗಾವಿ ವಿಭಾಗದ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭ, ಪತಿ ಎಲ್ಲ ದಾಖಲೆಗಳನ್ನು ತೋರಿಸಿದ್ದರು. ನಂತರ ಪತಿಗೆ ಮತ್ತೊಂದು ಅಂಗಡಿಗೆ ಕರೆಸಿ ₹2 ಲಕ್ಷ ಲಂಚ ನೀಡುವಂತೆ ಹೇಳಿದ್ದರು. ಅದಕ್ಕೆ ಒಪ್ಪದಿದ್ದಾಗ ದೂರು ದಾಖಲಿಸಿ, ಬಾರ್‌ ಬಂದ್‌ ಮಾಡಿಸುತ್ತೇವೆ ಎಂದು ಬೆದರಿಸಿದ್ದರು. ಅಲ್ಲದೆ, ಅವರ ಮೇಲೆ ಹಲ್ಲೆ ನಡೆಸಿ ಬೂಟು ಕಾಲಿನಿಂದ ಒದ್ದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಲಲಿತಾ ತಿಳಿಸಿದ್ದಾರೆ.

ಹಲ್ಲೆ, ದೂರು ದಾಖಲು: ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಗದಗ ರಸ್ತೆಯ ಕಾರುಣ್ಯ ಕಾಲೊನಿ ನಿವಾಸಿ ಪ್ರೇಮರಾವ್‌ ಕೊರಪಟ್ಟಿ ಅವರ ಮೇಲೆ ನಾಲ್ವರು ಕಲ್ಲಿನಿಂದ ಹೊಡೆದು ಹಲ್ಲೆ ನಡೆಸಿದ್ದಾರೆ. ಆಕಾಶ, ಶುಭಂ ಸೇರಿದಂತೆ ನಾಲ್ವರ ವಿರುದ್ಧ ಕೇಶ್ವಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.