ಹುಬ್ಬಳ್ಳಿ: ‘ಪ್ರಾಥಮಿಕ ಹಂತದಲ್ಲಿಯೇ ರೋಗವನ್ನು ಗುರುತಿಸಿ, ಸರಿಯಾದ ಚಿಕಿತ್ಸೆ ಪಡೆದರೆ ಕ್ಯಾನ್ಸರ್ ಗುಣಪಡಿಸಬಹುದಾಗಿದೆ. ಈ ನಿಟ್ಟಿನಲ್ಲಿ ಇಲ್ಲಿನ ಎಚ್ಸಿಜಿ ಕ್ಯಾನ್ಸರ್ ಸೆಂಟರ್ನಲ್ಲಿ ಅತ್ಯಾಧುನಿಕ ಯಂತ್ರೋಪಕರಣ ಅಳವಡಿಸಿರುವುದು ಉತ್ತಮ ಕಾರ್ಯ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದ ಗೋಕುಲ ರಸ್ತೆಯಲ್ಲಿ ನಿರ್ಮಿಸಿರುವ ಎಚ್ಸಿಜಿ ಕ್ಯಾನ್ಸರ್ ಸೆಂಟರ್ ಅನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ‘ಈ ಹಿಂದೆ ಕ್ಯಾನ್ಸರ್ ರೋಗಿಗಳಿಗೆ ರೇಡಿಯೊಥೆರಪಿ, ಕಿಮೊಥೆರಪಿ ಸೇರಿ ಇನ್ನಿತರ ಚಿಕಿತ್ಸೆ ನೀಡುವಾಗ ದೇಹದ ಇತರ ಅಂಗಗಳಿಗೂ ಹಾನಿಯಾಗುತ್ತಿತ್ತು. ಈಗ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಚಿಕಿತ್ಸೆ ನೀಡಲು ಅತ್ಯಾಧುನಿಕ ವ್ಯವಸ್ಥೆ ಇದೆ. ಕ್ಯಾನ್ಸರ್ ರೋಗಿಗಳು ಭಯ ಪಡುವ ಅಗತ್ಯ ಇಲ್ಲ’ ಎಂದರು.
‘ಜಾಗತಿಕ ಮಟ್ಟದಲ್ಲಿ ಕ್ಯಾನ್ಸರ್ ರೋಗ ಅತ್ಯಂತ ವೇಗವಾಗಿ ಹರಡುತ್ತಿದೆ. ಅದಕ್ಕೆ ಜೀವನ ಶೈಲಿ, ಆಹಾರ ಪದ್ಧತಿ ಕಾರಣ. ಜಂಕ್ಫುಡ್ ಸೇವನೆ ಹೆಚ್ಚುತ್ತಿದೆ. ಕ್ಯಾನ್ಸರ್ಗೆ ಚಿಕಿತ್ಸೆ ನೀಡುವುದು ಒಂದೆಡೆಯಾದರೆ, ಅದು ಬಾರದಂತೆ ಯಾವ ರೀತಿ ಮುಂಜಾಗ್ರತೆ ವಹಿಸಬೇಕು ಎಂಬುದು ಮುಖ್ಯ’ ಎಂದು ಹೇಳಿದರು.
‘ಯೂನಿವರ್ಸಲ್ ಹೆಲ್ತ್ ಕೇರ್ ಯೋಜನೆ ಜಾರಿ ಬಗ್ಗೆ ಎಚ್ಸಿಜಿ ಕ್ಯಾನ್ಸರ್ ಆಸ್ಪತ್ರೆಯ ಸಂಸ್ಥಾಪಕ ಬಿ.ಎಸ್. ಅಜಯಕುಮಾರ್ ಮನವಿ ಮಾಡಿದ್ದು, ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರೊಂದಿಗೆ ಮಾತನಾಡಲಾಗುವುದು. ಬಡ ರೋಗಿಗಳಿಗೆ ರಿಯಾಯಿತಿ ದರದಲ್ಲಿ ಅಥವಾ ಉಚಿತ ಚಿಕಿತ್ಸೆ ನೀಡಲು ಮುಂದಾಗಬೇಕು’ ಎಂದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ‘ಕ್ಯಾನ್ಸರ್ ಸೇರಿದಂತೆ ಇನ್ನಿತರ ರೋಗಗಳಿಗೆ ಸಂಬಂಧಿಸಿದ ಔಷಧಗಳ ಮೇಲಿನ ಜಿಎಸ್ಟಿ ದರ ಇಳಿಕೆ ಮಾಡಿರುವುದರಿಂದ ಹೆಚ್ಚು ಅನುಕೂಲವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಫಿಟ್ ಇಂಡಿಯಾ ಎಂಬ ಪರಿಕಲ್ಪನೆ ನೀಡಿದ್ದು, ಎಲ್ಲರೂ ಸದೃಢ ಆರೋಗ್ಯ ಹೊಂದಬೇಕು’ ಎಂದು ಹೇಳಿದರು.
ಎಚ್ಸಿಜಿ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಮನೀಶ್ ಮಟ್ಟೂ, ‘ರಾಜ್ಯದಲ್ಲಿ ಪ್ರತಿ ವರ್ಷ 90 ಸಾವಿರದಿಂದ 1 ಲಕ್ಷ ಜನರು ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆಯುತ್ತಾರೆ. ಈ ಹಿಂದೆ ಗುಣಮಟ್ಟದ ಚಿಕಿತ್ಸೆಗಾಗಿ ಬೆಂಗಳೂರು, ಹೈದರಾಬಾದ್, ಚೆನ್ನೈನಂತಹ ನಗರಳಿಗೆ ಹೋಗಬೇಕಿತ್ತು. ಈಗ ನಗರದಲ್ಲಿಯೇ ಅತ್ಯಾಧುನಿಕ ಚಿಕಿತ್ಸೆ ನೀಡಲಾಗುತ್ತಿದೆ’ ಎಂದರು.
ಎಚ್ಸಿಜಿ ಕ್ಯಾನ್ಸರ್ ಸೆಂಠರ್ನ ಸಿಇಒ ಮನಿಷಾ ಕುಮಾರ್, ಅಬ್ದುಲ್ ರಹೀಂ ಇದ್ದರು.
ಪ್ರಸ್ತುತ ಚಿಕಿತ್ಸಾ ವೆಚ್ಚ ಔಷಧಿಗಳ ದರ ಹೆಚ್ಚಾಗಿದೆ. ಯೂನಿವರ್ಸಲ್ ಹೆಲ್ತ್ಕೇರ್ ಯೋಜನೆ ಜಾರಿಗೆ ತಂದರೆ ಎಲ್ಲರಿಗೂ ಒಂದೇ ದರದಲ್ಲಿ ಚಿಕಿತ್ಸೆ ದೊರೆಯಲಿದೆ ಎಚ್ಸಿಸಿ ಆಸ್ಪತ್ರೆಯ ಸಂಸ್ಥಾಪಕ ಬಿ.ಎಸ್.ಅಜಯ್ಕುಮಾರ್ ಹೇಳಿದರು. ದೇಶದಲ್ಲಿ 25ಕ್ಕೂ ಹೆಚ್ಚು ಮತ್ತು ರಾಜ್ಯದಲ್ಲಿ ಏಳು ಎಚ್ಸಿಜಿ ಸೆಂಟರ್ಗಳಿವೆ. ನಗರದಲ್ಲಿ ಕ್ಯಾನ್ಸರ್ ರೋಗಿಗಳಿಗೆ ಅಸ್ಥಿ ಮಜ್ಜೆ ಕಸಿ (ಬೋನ್ ಮ್ಯಾರೊ ಟ್ರಾನ್ಸ್ಪ್ಲಾಂಟ್) ಚಿಕಿತ್ಸೆಯನ್ನು ಆರಂಭಿಸುವ ಚಿಂತನೆ ಇದೆ ಎಂದರು. ಎಚ್ಸಿಜಿ ಸೆಂಟರ್ನಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಥಮ ಬಾರಿಗೆ ಅತ್ಯಾಧುನಿಕ ಎಲೆಕ್ಟ್ರಾ ವರ್ಸಾ ಎಚ್ಡಿ ವಿಕಿರಣ ಚಿಕಿತ್ಸಾ ಯಂತ್ರವನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.