ADVERTISEMENT

ಹುಬ್ಬಳ್ಳಿ | ಬಣ್ಣದರ್ಪಣೆ ಅಭಿಯಾನಕ್ಕೆ ಚಾಲನೆ ನಾಳೆ: ಕೇಂದ್ರ ಸಚಿವ ಜೋಶಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2022, 11:21 IST
Last Updated 28 ಅಕ್ಟೋಬರ್ 2022, 11:21 IST
ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ಕೇಂದ್ರ ಸಚಿವ ಪ್ರಲ್ಹಾದ ಜೋಶಿ   

ಹುಬ್ಬಳ್ಳಿ: ‘ಸ್ವಚ್ಛತೆಯಿಂದ ಧ್ಯೇಯವಾಕ್ಯದೊಂದಿಗೆ ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲಾ–ಕಾಲೇಜುಗಳಿಗೆ ಬಣ್ಣ ಬಳಿಯುವ ‘ಬಣ್ಣದರ್ಪಣೆ’ ಕಾರ್ಯಕ್ರಮಕ್ಕೆ ಕುಂದಗೋಳ ಪಟ್ಟಣದ ಶ್ರೀ ಹರಭಟ್ಟ ಶಾಲೆ ಮೈದಾನದಲ್ಲಿ ಸಂಜೆ 6ಕ್ಕೆ ಚಾಲನೆ ನೀಡಲಾಗುವುದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಜೆಎಸ್‌ಡಬ್ಲ್ಯೂ ಕಂಪನಿಯ ಸಿಎಸ್‌ಆರ್‌(ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ) ನಿಧಿಯಿಂದ ಈ ಅಭಿಯಾನ ಹಮ್ಮಿಕೊಂಡಿದ್ದು, ₹64 ಕೋಟಿ ವೆಚ್ಚದಲ್ಲಿ 1,177 ಶಾಲಾ–ಕಾಲೇಜುಗಳಿಗೆ ಬಣ್ಣ ಬಳಿಯಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಒಂದೊಂದು ಕೊಠಡಿಗೆ ಗುಣಮಟ್ಟದ 20 ಲೀ. ಬಣ್ಣದಂತೆ ಅಗತ್ಯವಿದ್ದಷ್ಟು ಬಣ್ಣ ಹಾಗೂ ಬ್ರಷ್‌ ನೀಡಲಾಗುವುದು. ಬಣ್ಣ ಬಳಿಯಲು ಜವಾಬ್ದಾರಿ ತೆಗೆದುಕೊಂಡವರು ಆಧಾರ ಕಾರ್ಡ್‌ ನೀಡಿ ನೋಂದಣಿ ಮಾಡಿಕೊಳ್ಳಬೇಕು. ಹಳೆಯ ವಿದ್ಯಾರ್ಥಿಗಳು, ಊರ ನಾಗರಿಕರು, ಪಾಲಕರು ಸಾಧ್ಯವಾದಷ್ಟು ಶ್ರಮದಾನ ಮಾಡಬೇಕು. ಶ್ರಮದಾನಕ್ಕೆ ಸ್ಥಳೀಯವಾಗಿ ಜನರು ಸಿಗದಿದ್ದರೆ ನಾವೇ ವ್ಯವಸ್ಥೆ ಮಾಡುತ್ತೇವೆ. ಉತ್ತಮವಾಗಿ ಬಣ್ಣ ಬಳಿದವರಿಗೆ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

ADVERTISEMENT

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ 984 ಪ್ರಾಥಮಿಕ ಶಾಲೆ, 139 ಪ್ರೌಢಶಾಲೆ ಹಾಗೂ ಪದವಿ ಪೂರ್ವ 54 ಕಾಲೇಜುಗಳಿದ್ದು, ಪ್ರತಿ ತಿಂಗಳು 100 ಶಾಲೆಗಳಿಗೆ ಬಣ್ಣ ಬಳಿಯುವ ಯೋಜನೆ ಹಾಕಿಕೊಳ್ಳಲಾಗಿದೆ. ಮುಂದಿನ ದೀಪಾವಳಿಗೆ ಎಲ್ಲ ಶಾಲೆಗಳನ್ನು ಪೂರ್ಣಗೊಳಿಸಲಾಗುವುದು. ಬಣ್ಣ ಬಳಿಯಲು ಈಗಾಗಲೇ ಆಫ್‌ಲೈನ್‌ನಲ್ಲಿ 45 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಕುಂದಗೋಳದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಆನ್‌ಲೈನ್‌ ನೋಂದಣಿಗೆ ಚಾಲನೆ ನೀಡಲಾಗುವುದು ಎಂದರು.

ಹು–ಧಾ ಮಹಾನಗರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಸಂಜಯ ಕಪಟಕರ, ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಕುಂದಗೋಳಮಠ, ಲಿಂಗರಾಜ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.