ADVERTISEMENT

ಉಣಕಲ್ ಚನ್ನಬಸವೇಶ್ವರ ರಥೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2020, 10:27 IST
Last Updated 11 ಫೆಬ್ರುವರಿ 2020, 10:27 IST
ಹುಬ್ಬಳ್ಳಿಯ ಉಣಕಲ್‌ ಗ್ರಾಮದಲ್ಲಿ ಸೋಮವಾರ ಉಳವಿ ಚನ್ನಬಸವೇಶ್ವರ ಸ್ವಾಮಿಯ ರಥೋತ್ಸವ ಜರುಗಿತು
ಹುಬ್ಬಳ್ಳಿಯ ಉಣಕಲ್‌ ಗ್ರಾಮದಲ್ಲಿ ಸೋಮವಾರ ಉಳವಿ ಚನ್ನಬಸವೇಶ್ವರ ಸ್ವಾಮಿಯ ರಥೋತ್ಸವ ಜರುಗಿತು   

ಹುಬ್ಬಳ್ಳಿ: ಉಣಕಲ್‌ ಗ್ರಾಮದಲ್ಲಿ ಸೋಮವಾರ ಉಳವಿ ಚನ್ನಬಸವೇಶ್ವರ ಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ದಾಂಡೇಲಿಯ ಉಳವಿಯಲ್ಲಿ ರಥೋತ್ಸವ ನಡೆಯುವ ದಿನವೇ ಇಲ್ಲಿಯೂ ನಡೆಯುವುದು ವಿಶೇಷ.

ಚನ್ನಬಸವೇಶ್ವರ ಸ್ವಾಮಿಯ ಬೆಳ್ಳಿಯ ಉತ್ಸವ ಮೂರ್ತಿಯ ಪಲ್ಲಕ್ಕಿ ಮೆರವಣಿಗೆ ಉಣಕಲ್‌ ಗ್ರಾಮದ ಬೀದಿಗಳಲ್ಲಿ ಸಾಗಿತು. ಸಂಜೆ 6ಕ್ಕೆ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಹರ ಹರ ಮಹಾದೇವ, ಓಂ ನಮಃ ಶಿವಾಯ ಎಂಬ ಘೋಷಣೆಗಳನ್ನು ಕೂಗುತ್ತಾ ಭಕ್ತರು ರಥ ಎಳೆದರು.

ಧಾರವಾಡ, ಹಾವೇರಿ ಹಾಗೂ ಹುಬ್ಬಳ್ಳಿ ಸುತ್ತಲಿನ ಗ್ರಾಮಗಳಿಂದ ಬಂದಿದ್ದ ಭಕ್ತರು ರಥಕ್ಕೆ ಉತ್ತತ್ತಿ, ಬಾಳೆಹಣ್ಣು ತೂರಿ ಕೃತಾರ್ಥರಾದರು. ಉಣಕಲ್‌ ಉದ್ಯಾನದವರೆಗೆ ರಥ ಎಳೆದು ಮರಳಿ ದೇವಸ್ಥಾನಕ್ಕೆ ತರಲಾಯಿತು.

ADVERTISEMENT

ರಥೋತ್ಸವ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ಬೆಳಿಗ್ಗೆ ಕಳಸಾರೋಹಣ, ರುದ್ರಾಭಿಷೇಕ ನೆರವೇರಿಸಲಾಯಿತು. ಮಧ್ಯಾಹ್ನ ಮಹಾಪ್ರಸಾದ ವಿತರಿಸಲಾಯಿತು.‌

‘ಚನ್ನಬಸವೇಶ್ವರರು ಉಳವಿಯಲ್ಲಿ ನೆಲೆ ನಿಲ್ಲುವ ಮೊದಲು ಉಣಕಲ್‌ನಲ್ಲಿ ಪೂಜೆ ಸಲ್ಲಿಸಿದ್ದರು ಎಂಬ ಪ್ರತೀತಿ ಇದೆ. ಹಾಗಾಗಿ ಪ್ರತಿ ವರ್ಷ ಉಳವಿಯಲ್ಲಿ ರಥೋತ್ಸವ ನಡೆಯುವ ದಿನವೇ ಇಲ್ಲಿಯೂ ರಥೋತ್ಸವ ನಡೆಸಲಾಗುತ್ತಿದೆ. ಉಣಕಲ್‌ ದೇವಸ್ಥಾನದಲ್ಲಿ 1971ರಿಂದಲೂ ರಥೋತ್ಸವ ಆಚರಿಸಲಾಗುತ್ತಿದೆ’ ಎಂದು ಜ್ಞಾನನಿಧಿ ಉಳವಿ ಚನ್ನಬಸವೇಶ್ವರ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಮಹದೇವಪ್ಪ ಮೆಣಸಿನಕಾಯಿ ‘ಪ್ರಜಾವಾಣಿ’ಗೆ ತಿಳಿಸಿದರು.

ಸಮಿತಿಯ ಸದಸ್ಯರಾದ ಭೀಮನಗೌಡ ಕೆಂಚನಗೌಡ, ಈರಣ್ಣ ಭದ್ರಾಪುರ, ವೀರಯ್ಯ ಮಠಪತಿ, ಕಲ್ಲಪ್ಪ ಹದ್ಲಿ ಉಸ್ತುವಾರಿಯಲ್ಲಿ ರಥೋತ್ಸವ ನಡೆಯಿತು. ಮಕ್ಕಳ ಆಟಿಕೆ ಸಾಮಗ್ರಿ ಹಾಗೂ ಪೂಜಾ ಸಾಮಗ್ರಿಗಳ ಮಾರಾಟವೂ ಜೋರಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.