
ಧಾರವಾಡದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಮಕ್ಕಳ ಸಾಹಿತಿ ಮತ್ತೂರು ಸುಬ್ಬಣ್ಣ ಹಾಗೂ ಧಾರವಾಡ ಆಕಾಶವಾಣಿ ಮುಖ್ಯಸ್ಥ ಬಸು ಬೇವಿನಗಿಡದ ಅವರಿಗೆ ಮಕ್ಕಳ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು
ಧಾರವಾಡ: ‘ಜಗತ್ತಿನ ಮೊದಲ ಸಾಹಿತ್ಯವೇ ಮಕ್ಕಳ ಸಾಹಿತ್ಯ. ತಾಯಿಯ ಲಾಲಿಯಿಂದ ಆರಂಭವಾಗಿ ದೊಡ್ಡ ಸಾಹಿತ್ಯವಾಗಿ ಬೆಳೆದಿದೆ’ ಎಂದು ಡಾ.ಎಂ.ಎಂ.ಕಲಬುರ್ಗಿ ಟ್ರಸ್ಟ್ ಅಧ್ಯಕ್ಷ ವೀರಣ್ಣ ರಾಜೂರ ತಿಳಿಸಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಮುಂಡರಗಿ ಕಲಾ ಶಿಕ್ಷಣ ಮತ್ತು ಸಂಸ್ಕೃತಿ ಪ್ರತಿಷ್ಠಾನ ಹಾಗೂ ಚಿಲಿಪಿಲಿ ಸಂಸ್ಥೆ ವತಿಯಿಂದ ಭಾನುವಾರ ಏರ್ಪಡಿಸಿದ್ದ ಶಿಕ್ಷಕಿ ಕಲಾವತಿ ಸೊಲಗಿ ಸ್ಮರಣೆಯಲ್ಲಿ 2022ರ ಮಕ್ಕಳ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಮಕ್ಕಳ ಸಾಹಿತ್ಯ ಮನಸ್ಸಿನಲ್ಲಿ ಕೊನೆಯವರೆಗೂ ಉಳಿಯುತ್ತದೆ ಎನ್ನುವುದಕ್ಕೆ ಇಂದಿಗೂ ಬಾಲ್ಯದ ಹಾಡು, ಕಥೆಗಳು ನೆನಪಿನಲ್ಲಿರುವುದೇ ಸಾಕ್ಷಿ. ಈ ಸಾಹಿತ್ಯ ವ್ಯಕ್ತಿತ್ವ ವಿಕಸನಕ್ಕೂ ಸಹಕಾರಿಯಾಗಿದೆ. ಮಕ್ಕಳ ಮನೋವಿಕಾಸಕ್ಕೆ ಕಾರಣವಾಗುವಂತಹ ಸಾಹಿತ್ಯ ರಚನೆಯತ್ತ ಸಾಹಿತಿಗಳು ಗಮನಹರಿಸಬೇಕು’ ಎಂದು ಹೇಳಿದರು.
ಮಕ್ಕಳ ಸಾಹಿತಿ ಮತ್ತೂರು ಸುಬ್ಬಣ್ಣ ಹಾಗೂ ಧಾರವಾಡ ಆಕಾಶವಾಣಿ ಮುಖ್ಯಸ್ಥ ಬಸು ಬೇವಿನಗಿಡದ ಅವರಿಗೆ ಮಕ್ಕಳ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಂವಿಧಾನ ದಿನದ ಅಂಗವಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ಸಾಹಿತಿ ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಡಾ. ಆನಂದ ಪಾಂಡುರಂಗಿ, ನಿಂಗು ಸೊಲಗಿ, ನಿಂಗಣ್ಣ ಕುಂಠಿ, ಶಶಿಧರ ತೋಡ್ಕರ, ಮಲ್ಲಿಕಾರ್ಜುನ ಚಿಕ್ಕಮಠ, ಕೆ.ಎಚ್. ನಾಯಕ, ಪಿ. ಮಾರುತಿ, ಆನಂದ ಪಾಟೀಲ, ಶರಣಬಸವ ಚೋಳಿನ, ಪ್ರಕಾಶ ಬಾಳಿಕಾಯಿ, ರಾಮು ಮೂಲಗಿ, ಶರಣು ಸೊಲಗಿ, ಚೇತನ ಸೊಲಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.