ADVERTISEMENT

ಧಾರವಾಡ: ಸೋರುತಿಹುದು ಶಾಲೆ ಮಾಳಿಗೆ...

ಶಾಲೆ ಆರಂಭವಾದರೂ ದುರಸ್ತಿಗೆ ಕಾಯುತ್ತಿರುವ ಕೊಠಡಿಗಳು

ರಾಯಸಾಬ ಅನಸರಿ
Published 1 ಜೂನ್ 2023, 1:41 IST
Last Updated 1 ಜೂನ್ 2023, 1:41 IST
ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಮಲಕನಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ಕೊಠಡಿ ಶಿಥಿಲಗೊಂಡಿರುವುದು
ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಮಲಕನಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ಕೊಠಡಿ ಶಿಥಿಲಗೊಂಡಿರುವುದು   

ಧಾರವಾಡ: ಬೇಸಿಗೆ ರಜೆ ಕಳೆದು ಶಾಲೆಗಳತ್ತ ಮುಖ ಮಾಡಿರುವ ಮಕ್ಕಳಿಗೆ ಸದ್ಯ ಮಳೆಗೆ ಸೋರುವ ಕೊಠಡಿ, ಬಿರುಕು ಬಿಟ್ಟರೂ ದುರಸ್ತಿ ಕಾಣದ ಶಾಲೆಯ ಕಟ್ಟಡಗಳು ಸ್ವಾಗತ ಕೋರುತ್ತಿವೆ!

ಜಿಲ್ಲೆಯ ಹಲವು ಶಾಲೆಗಳಲ್ಲಿ ಮೂಲ ಸೌಕರ್ಯದ ಕೊರತೆ ಎದ್ದು ಕಾಣುತ್ತಿದ್ದು, ಅನೇಕ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಆಟದ ಮೈದಾನಗಳಿಲ್ಲದೆ ವಿದ್ಯಾರ್ಥಿಗಳು ಕ್ರೀಡೆಗಳಿಂದ ದೂರ ಉಳಿಯುವಂತಾಗಿದೆ. ಸರ್ಕಾರಿ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ದಾಖಲಾತಿ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಶಾಲೆಗಳ ಸ್ಥಿತಿಯಲ್ಲಿ ಮಾತ್ರ ಯಾವುದೇ ಬದಲಾವಣೆ ಆಗದಿರುವುದು ಶಿಕ್ಷಣ ಇಲಾಖೆಯ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ.

2022–23ನೇ ಸಾಲಿನಲ್ಲಿ ಸುರಿದ ಭಾರಿ ಮಳೆಗೆ ಜಿಲ್ಲೆಯಲ್ಲಿನ 374 ಶಾಲೆಗಳ 1009 ಕೊಠಡಿಗಳು ಜಖಂಗೊಂಡಿದ್ದವು. ಬಹುತೇಕ ಅವೆಲ್ಲವೂ ಗ್ರಾಮೀಣ ಪ್ರದೇಶದ ಶಾಲೆಗಳು ಎಂಬುದು ಗಮನಿಸಬೇಕಾದ ಅಂಶ. ಜಿಲ್ಲೆಯ ಹಲವು ಸರ್ಕಾರಿ ಶಾಲೆಗಳ ಕೊಠಡಿಗಳು ಕುಸಿದು ಬೀಳುವ ಹಂತದಲ್ಲಿವೆ. ಕೆಲವೆಡೆ ಚಾವಣಿಯ ಹೆಂಚುಗಳು ನೆಲಕ್ಕೆ ಬೀಳುವ ಸ್ಥಿತಿಯಲ್ಲಿದ್ದರೆ, ಮಳೆಗೆ ಬೆರಳೆಣಿಕೆಯಷ್ಟು ಶಾಲಾ ಮೈದಾನ ಕೆರೆಯಾಗಿ ಮಾರ್ಪಡುತ್ತವೆ. ಇನ್ನೂ ಕೆಲವೆಡೆ ಕುಡಿಯುವ ನೀರು, ಶೌಚಾಲಯ ಇಲ್ಲದ ಶಾಲೆಗಳಿವೆ.

ADVERTISEMENT

1500 ಮಕ್ಕಳಿರುವ ನವಲೂರು ಶಾಲೆಗೆ ಸುಸಜ್ಜಿತ ಆಟದ ಮೈದಾನವಿಲ್ಲ. ಮುಗದ ಸರ್ಕಾರಿ ಪ್ರಾಥಮಿಕ ಶಾಲೆಯ ಕೊಠಡಿಗಳು ಮಳೆಗೆ ಸೋರುತ್ತವೆ. ಆಳ್ನಾವರ ಭಾಗದ ದೋಪೆನಟ್ಟಿ ಗ್ರಾಮದ ಶಾಲೆಯ ಕಟ್ಟಡ ಬೀಳುವ ಹಂತದಲ್ಲಿದೆ. ಹೂಲಿಕೇರಿ ಗ್ರಾಮದ ಉರ್ದು ಶಾಲೆಯ ಕೊಠಡಿಗಳು ಮಳೆಗೆ ಸೋರುತ್ತವೆ. ಹೀಗೆ ವಿವಿಧ ತಾಲ್ಲೂಕಿನ ಹತ್ತಾರು ಶಾಲೆಗಳು ದುಸ್ಥಿತಿಯಲ್ಲಿವೆ.

ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರವಾರು ಸರ್ಕಾರಿ ಶಾಲೆಗಳಿಗೆ 1 ರಿಂದ 11 ಹಂತಗಳಲ್ಲಿ ತುರ್ತು ಕೊಠಡಿಗಳ ದುರಸ್ತಿಗೆ ಕ್ರಿಯಾ ಯೋಜನೆ ಸಲ್ಲಿಕೆ ಮಾಡಲಾಗಿದೆ. ಜಿಲ್ಲೆಯ 79 ಶಾಲೆಗಳ ಒಟ್ಟು 662 ಕೊಠಡಿಗಳ ಪೈಕಿ 257 ಕೊಠಡಿಗಳ ದುರಸ್ತಿ ಅವಶ್ಯತೆ ಇರುವ ಬಗ್ಗೆ ಸರ್ಕಾರಕ್ಕೆ ಕ್ರಿಯಾ ಯೋಜನೆ ಸಲ್ಲಿಕೆ ಮಾಡಲಾಗಿದೆ. ಈ ಪೈಕಿ 9 ಕಾಮಗಾರಿಗಳು ಪ್ರಾರಂಭವಾಗಿದ್ದು, 27 ಕೊಠಡಿಗಳ ದುರಸ್ತಿ ಕಾರ್ಯ ಪೂರ್ಣಗೊಂಡಿದೆ. 47 ಕೊಠಡಿಗಳ ದುರಸ್ತಿ ಪ್ರಗತಿಯಲ್ಲಿದೆ. ಒಟ್ಟು ಮಂಜೂರಾದ ₹4.5 ಕೋಟಿ ಅನುದಾನದಲ್ಲಿ ₹2.2 ಕೋಟಿ ಮಾತ್ರ ಬಿಡುಗಡೆ ಆಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಕೆಲವೆಡೆ ಶಿಕ್ಷಕರ ಕೊರತೆ ಇದೆ. ಇದರಿಂದ ಶಿಕ್ಷಣದ ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಜಿಲ್ಲೆಯ ಕೆಲ 1ರಿಂದ 5ರ ವರೆಗಿನ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಬ್ಬರೇ ಶಿಕ್ಷಕರು ಬೋಧನೆ ಮಾಡುವಂತಾಗಿದೆ. ಕೆಲವೆಡೆ ಅತಿಥಿ ಶಿಕ್ಷಕರೇ ಪಾಠ ಮಾಡುವ ಸ್ಥಿತಿ ಇದೆ.

Quote - ಹಂತ ಹಂತವಾಗಿ ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಅನೇಕ ಕಟ್ಟಡಗಳ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ. ಜಿಲ್ಲೆಯಲ್ಲಿ ಶಿಥಿಲಾವಸ್ಥೆಯ ಶಾಲೆಗಳು ಸಂಖ್ಯೆ ಸರ್ವೇ ಮಾಡಲಾಗಿಲ್ಲ. - ಎಸ್.ಎಸ್. ಕೆಳದಿಮಠ ಉಪನಿರ್ದೇಶಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಧಾರವಾಡ

Quote - ಶಾಲಾ ಕೊಠಡಿಗಳ ಹೆಂಚು ಹಾರಿಹೋಗಿದೆ. ಹೆಚ್ಚುವರಿ ಕೊಠಡಿ ಇಲ್ಲದಿರುವುದರಿಂದ ಶಿಕ್ಷರು ವಿದ್ಯಾರ್ಥಿಗಳು ಭಯದಿಂದಲೇ ಇರುವಂತಾಗಿದೆ. ಹೊಸ ಕಟ್ಟಡ ನಿರ್ಮಾಣದ ಭರವಸೆ ಈವರೆಗೂ ಈಡೇರಿಲ್ಲ. –ಮಂಜುನಾಥ ದೇಸಾಯಿ ಎಸ್‌ಡಿಎಂಸಿ ಅಧ್ಯಕ್ಷ ಮಲಕನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.