ADVERTISEMENT

ನಿವೇಶನ ಒದಗಿಸಲು ಬದ್ಧ: ಶೆಟ್ಟರ್‌

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 15:18 IST
Last Updated 5 ಅಕ್ಟೋಬರ್ 2019, 15:18 IST
ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ತರಬೇತಿ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮದಲ್ಲಿ ಸಚಿವ ಜಗದೀಶ ಶೆಟ್ಟರ್‌ ಮಾತನಾಡಿದರು
ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ತರಬೇತಿ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮದಲ್ಲಿ ಸಚಿವ ಜಗದೀಶ ಶೆಟ್ಟರ್‌ ಮಾತನಾಡಿದರು   

ಹುಬ್ಬಳ್ಳಿ: ಗಿರಿಜನರಿಗೆ ನಿವೇಶನಗಳನ್ನು ಒದಗಿಸಬೇಕು ಎನ್ನುವ ಬೇಡಿಕೆ ಬಹಳ ವರ್ಷಗಳಿಂದ ಇದ್ದು, ಅವರಿಗೆ ಈ ಸೌಲಭ್ಯ ಒದಗಿಸಲು ಬದ್ಧನಿದ್ದೇನೆ ಎಂದು ಸಚಿವ ಜಗದೀಶ ಶೆಟ್ಟರ್‌ ಹೇಳಿದರು.

ಹಳೇ ಹುಬ್ಬಳ್ಳಿಯ ಕೇತೇಶ್ವರ ಕಾಲೊನಿಯಲ್ಲಿ ಧಾರವಾಡ ಜಿಲ್ಲಾ ಗಿರಿಜನ ವಿವಿಧ ಉದ್ದೇಶಗಳ ಲ್ಯಾಂಪ್ಸ್‌ ಸಹಕಾರಿ ಸಂಘದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಕರಕುಶಲ ಉದ್ಯೋಗದ ತರಬೇತಿ ಪಡೆದ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆರಂಭದಲ್ಲಿ ಮಾತನಾಡಿದ ಸಂಘದ ರಾಜ್ಯ ಘಟಕದ ಅಧ್ಯಕ್ಷ ಯು.ಕಾ. ಹಳಪೇಟಿ ‘150 ಸದಸ್ಯರಿಗೆ ನಿವೇಶನ ಒದಗಿಸಬೇಕು. ಹೊಸೂರಿನಲ್ಲಿ ನಿರ್ಮಾಣವಾಗಿರುವ ಹೊಸ ಬಸ್‌ ನಿಲ್ದಾಣದಲ್ಲಿ ಎಸ್‌.ಟಿ. ಮೀಸಲಾತಿಯಲ್ಲಿ ರಿಯಾಯಿತಿ ದರದಲ್ಲಿ ಮಾರಾಟ ಮಳಿಗೆ ಒದಗಿಸಬೇಕು, ಅಮರಗೋಳದ ಕೈಗಾರಿಕಾ ವಸಾಹತು ಮಹಿಳಾ ಪಾರ್ಕ್‌ನಲ್ಲಿ ಕೈಗಾರಿಕಾ ಸ್ಥಾಪನೆಗೆ ಎರಡು ಎಕರೆ ಭೂಮಿ ನೀಡಬೇಕು’ ಎಂದು ಮನವಿ ಮಾಡಿದರು.

ADVERTISEMENT

ಬಳಿಕ ಮಾತನಾಡಿದ ಶೆಟ್ಟರ್‌ ‘ನಿಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗುವುದು. ನಿವೇಶನ ಒದಗಿಸುವ ಸಲುವಾಗಿ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ಜೊತೆ ಶೀಘ್ರದಲ್ಲಿಯೇ ಸಭೆ ನಡೆಸುತ್ತೇನೆ’ ಎಂದು ಭರವಸೆ ನೀಡಿದರು.

‘ಮಹಿಳೆ ಆರ್ಥಿಕವಾಗಿ ಸ್ವತಂತ್ರವಾಗಿದ್ದರೆ ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ. ಸ್ವಾವಲಂಬಿ ಬದುಕಿಗೆ ಕರಕುಶಲ ಉದ್ಯೋಗ ಉತ್ತಮ ಮಾರ್ಗ’ ಎಂದರು. ತರಬೇತಿ ಪೂರ್ಣಗೊಳಿಸಿದವರಿಗೆ ಶೆಟ್ಟರ್‌ ಸಾಂಕೇತಿಕವಾಗಿ ಪ್ರಮಾಣ ಪತ್ರ ವಿತರಿಸಿದರು. ಸಂಘದ ಐದು ವರ್ಷಗಳ ಸಾಧನೆಯ ಪಾಕ್ಷಿಕ ನೋಟ ಬಿಡುಗಡೆ ಮಾಡಿದರು.

ಅಖಿಲ ಕರ್ನಾಟಕ ಮೇದ ಗಿರಿಜನಾಂಗ ಕಲ್ಯಾಣ ಸೇವಾಸಂಘದ ಅಧ್ಯಕ್ಷ ಕೆ.ಎಂ. ಶೀಗಿಹಳ್ಳಿ, ಉಪಾಧ್ಯಕ್ಷ ಮಾರುತಿ ಕಟ್ಟಿಮನಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಶ್ರೀಕಾಂತ ಕುಲಕರ್ಣಿ, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಡಾ. ಚಂದ್ರಪ್ಪ, ಹುಬ್ಬಳ್ಳಿ ಮೇದಾ ಸಮಾಜದ ಅಭ್ಯುದಯ ಸಂಘದ ಅಧ್ಯಕ್ಷ ಶಂಕರ ಮಿಶ್ರಿಕೋಟಿ, ಮೇದಾರ ಸಮಾಜದ ಪ್ರಮುಖರಾದ ಎಂ.ಜಿ. ಹೆಬ್ಬಳ್ಳಿ, ವೈ.ಸಿ. ಬೆಟಗೇರಿ, ರಮೇಶ ಹುಲಕೊಪ್ಪ, ಶಿವಪ್ಪ ಹೆಬ್ಬಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.