
ಅಳ್ನಾವರ: ‘ನಿಜವಾದ ಬಡವರಿಗೆ ಸರ್ಕಾರದ ಸೌಲಭ್ಯ ದೊರೆಯಬೇಕು. ಜನರ ಸಮಸ್ಯೆ ಬಗೆಹರಿಸುವ ಮೂಲಕ ಸರ್ಕಾರದ ಮಹಾತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಯ ಯಶಸ್ಸಿಗೆ ಶ್ರಮಿಸಬೇಕು’ ಎಂದು ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ ಹೇಳಿದರು.
ಇಲ್ಲಿನ ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ನಡೆದ ತಾಲ್ಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ‘ಸಮಿತಿ ತಾಲ್ಲೂಕಿನ ವ್ಯಾಪ್ತಿಯ ಪ್ರತಿ ಹಳ್ಳಿಗಳಿಗೂ ಹೋಗಿ ಯೋಜನೆ ಜಾರಿಗೆ ಮುತುವರ್ಜಿ ವಹಿಸಿದೆ. ಇದು ಇತರರಿಗೆ ಮಾದರಿ’ ಎಂದರು.
ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ವಿನಾಯಕ ಕುರುಬರ ಮಾತನಾಡಿ, ‘ತಾಲ್ಲೂಕು ವ್ಯಾಪ್ತಿಯಲ್ಲಿ ಯೋಜನೆ ಸರಿಯಾಗಿ ತಲುಪುತ್ತಿವೆ. ಈ ಭಾಗದ ಯೋಜನೆ ಜಾರಿ ಜೊತೆಗೆ ಗ್ರಾಮೀಣ ಭಾಗದ ಸಾಕಷ್ಟು ಸಮಸ್ಯೆಗಳ ಬಗ್ಗೆ ವಿವಿಧ ಇಲಾಖೆಗಳ ಅಧಿಕಾರಿಗಳ ಗಮನಕ್ಕೆ ತಂದು, ಜನರಿಗೆ ಅನುಕೂಲ ಮಾಡಿಕೊಡಲಾಗಿದೆ. ಸಾರಿಗೆ, ಪಡಿತರ ವಿತರಣೆ ಮುಂತಾದ ಯೋಜನೆಗಳು ಸಾಕಷ್ಟು ಪ್ರಗತಿ ಸಾಧಿಸಿವೆ. ಬರುವ ದಿನದಲ್ಲಿ ಯುವ ನಿಧಿ ಫಲಾನುಭವಿಗಳಿಗೆ ಕೌಶಲ ತರಬೇತಿ ಜೊತೆಗೆ ಉದ್ಯೋಗ ದೊರಕಿಸಿಕೊಡಲು ಪ್ರಯತ್ನ ಮಾಡುವೆ’ ಎಂದರು.
ಚರ್ಚೆ: ‘ಧಾರವಾಡಕ್ಕೆ ಬೆಳಿಗ್ಗೆ ಮತ್ತು ಸಂಜೆ ವೇಗದೂತ ಬಸ್ ಓಡಿಸಬೇಕು. ಹೂಲಿಕೇರಿ ಗ್ರಾಮಕ್ಕೆ ಸರಿಯಾದ ಸಮಯಕ್ಕೆ ಬಸ್ ಸಂಚರಿಸಬೇಕು. ಸಾರಿಗೆ ವ್ಯವಸ್ಥೆ ಸುಧಾರಣೆಗೆ ಹೆಚ್ಚಿನ ಬಸ್ ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಒತ್ತಡ ಹಾಕಬೇಕು. ಕಾಳ ಸಂತೆಯಲ್ಲಿ ಪಡಿತರ ಮಾರಾಟ ತಡೆಯಬೆಕು. ಆಹಾರ ಧಾನ್ಯ ಮತ್ತು ತೂಕ ಸರಿಪಡಿಸಲು ನೂತನ ತಂತ್ರಜ್ಞಾನ ಸರಿಯಾಗಿ ಕಾರ್ಯನಿರ್ವಹಿಸುವಂತೆ ನೋಡಬೇಕು. ಕಡಬಗಟ್ಟಿ, ಕಾಶೇನಟ್ಟಿ ಗ್ರಾಮದಲ್ಲಿ ಹೊಸ ವಿದ್ಯುತ್ ಕಂಬ ಅಳವಡಿಸಬೇಕು. ಅಂಗನವಾಡಿ ಸಹಾಯಕಿ ಹುದ್ದೆ ಭರ್ತಿ ಮಾಡಿಕೊಳ್ಳಬೇಕು’ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯಿತು.
ಹಳಿಯಾಳ ಡಿಪೊ ವ್ಯವಸ್ಥಾಪಕ ಮಾರುತಿ ಹೊಸಕೋಟಿ, ಎಂಜಿನಿಯರ್ ಕೆ.ಎಲ್. ನಾಯಕ, ಆಹಾರ ನಿರೀಕ್ಷಕ ವಿನಾಯಕ ದೀಕ್ಷಿತ್, ಸಿಡಿಪಿಒ ಮಂಜುನಾಥ ಕುಂಬಾರ, ಬಸವಂತ ಮಾಹಿತಿ ನೀಡಿದರು. ಸಮಿತಿ ಸದಸ್ಯರಾದ ರಾಜು ಪನ್ನಾಳಕರ, ಫಕ್ಕೀರ ದಬಾಲಿ, ಮಲ್ಲಿಕ ಅಂಚಿ, ಕಲ್ಮೇಶ ಬಡಿಗೇರ, ಶಂಕರ ಕಲಾಜ, ಸತೀಶ ಬಡಸ್ಕರ್, ಎಂ.ಕೆ. ಬಾಗವಾನ, ಪುಷ್ಪಾ ಆನಂತಪುರ, ಸಲೀಂ ತಡಕೋಡ, ರಾಹುಲ್ ಶಿಂದೆ, ಮಾಹಾಂತೇಶ ಬೋರಿಮನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.