ಹುಬ್ಬಳ್ಳಿ: ‘ಗೃಹಲಕ್ಷ್ಮಿ ಯೋಜನೆ ಕುರಿತು ಇತ್ತೀಚೆಗೆ ವಿಧಾನಸಭೆ ಅಧಿವೇಶನದಲ್ಲಿ ನಡೆದ ಚರ್ಚೆ ಆಧರಿಸಿ, ಬಿಜೆಪಿಯವರು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುತ್ತಿರುವುದು ಖಂಡನೀಯ’ ಎಂದು ಕಾಂಗ್ರೆಸ್ ಮುಖಂಡ ಪ್ರಕಾಶ ಬುರಬುರೆ ತಿಳಿಸಿದ್ದಾರೆ.
‘ಯೋಜನೆಯಡಿ ಎರಡು ತಿಂಗಳ ಹಣ ಜಮೆ ಆಗಿಲ್ಲ ಎಂಬುದನ್ನು ಶಾಸಕ ಮಹೇಶ ಟೆಂಗಿನಕಾಯಿ ಬಹಿರಂಗಪಡಿಸಿ, ಸರ್ಕಾರದಿಂದ ಕ್ಷಮೆ ಕೇಳಿಸಿದರು ಎನ್ನುವುದು ಸತ್ಯಕ್ಕೆ ದೂರವಾದ ಮಾತು’ ಎಂದಿದ್ದಾರೆ.
‘ತಾಂತ್ರಿಕ ಕಾರಣಗಳಿಂದಾಗಿ ಹಣ ಜಮೆ ಮಾಡುವಲ್ಲಿ ಕೆಲವೊಮ್ಮೆ ವಿಳಂಬವಾಗಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಿದೆ. ಎಲ್ಲಾ ಅರ್ಹ ಫಲಾನುಭವಿಗಳಿಗೆ ಹಣ ಜಮೆಯಾಗುವುದೆಂದು ಖಚಿತವಾಗಿ ಹೇಳಿದೆ. ವಿಳಂಬವನ್ನು ‘ಹಗರಣ’ ಎಂಬುದಾಗಿ ಬಿಂಬಿಸುವುದು, ಯೋಜನೆಯನ್ನು ಅಪಮಾನಿಸುವುದು ಹಾಗೂ ಬಡ ಮಹಿಳೆಯರ ಮನೋಬಲ ಕುಗ್ಗಿಸುವುದು ಬಿಜೆಪಿ ನಾಯಕರ ಅಸಹಜ ರಾಜಕೀಯ ಮನಸ್ಥಿತಿಯನ್ನು ತೋರಿಸುತ್ತದೆ’ ಎಂದು ಪ್ರಕಟಣೆಯಲ್ಲಿ ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.