ADVERTISEMENT

ಬಿಜೆಪಿ ಸರ್ಕಾರದ ಅಭಿವೃದ್ಧಿ ಮರೆಮಾಚಲು ಭ್ರಷ್ಟಾಚಾರದ ಆರೋಪ: ಶಾಸಕ ಶೆಟ್ಟರ್

​ಪ್ರಜಾವಾಣಿ ವಾರ್ತೆ
Published 20 ಜನವರಿ 2023, 9:40 IST
Last Updated 20 ಜನವರಿ 2023, 9:40 IST
   

ಹುಬ್ಬಳ್ಳಿ: 'ಬಿಜೆಪಿ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮರೆಮಾಚಲು, ಕಾಂಗ್ರೆಸ್ ನಾಯಕರು ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ' ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು.

'ಬಿಜೆಪಿ ಬಿ ರಿಪೋರ್ಟ್ ಸರ್ಕಾರ' ಎನ್ನುವ ಡಿ.ಕೆ.‌ ಶಿವಕುಮಾರ್ ಹೇಳಿಕೆ ನಗರದಲ್ಲಿ ಶುಕ್ರವಾರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, 'ಈಗಾಗಲೇ ಕಾಂಗ್ರೆಸ್ ಐಸಿಯುನಲ್ಲಿದೆ. ಕೀಳುಮಟ್ಟದ ಪ್ರಚಾರದಿಂದ ಪಕ್ಷಕ್ಕೆ ಜೀವ ಬರುವುದಿಲ್ಲ. ಸದ್ಯದಲ್ಲಿಯೇ ಅದರ ಜೀವ ಹೋಗಲಿದೆ' ಎಂದರು.

'ನನ್ನ ಕಂಡರೆ ಬಿಜೆಪಿಗೆ ಭಯ' ಎನ್ನುವ ಸಿದ್ದರಾಮಯ್ಯರ ಹೇಳಿಕೆಗೆ, 'ಅವರನ್ನು ಕಂಡರೆ ಹುಡುಗರೇ ಹೆದರಲ್ಲ. ಹೀಗಿದ್ದಾಗ ಬಿಜೆಪಿ ಯಾಕೆ ಹೆದರುತ್ತದೆ. ಅವರು ಮಾಡಿರುವ ಭ್ರಷ್ಟಾಚಾರದ ಒಂದಾದರೂ ಆರೋಪವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿದ್ದಾರೆಯೇ? ಆರ್.ಎಸ್.ಎಸ್. ಬಗ್ಗೆ ಆರೋಪ ಮಾಡುವುದು ಸರಿಯಲ್ಲ. ದೇಶಕ್ಕಾಗಿ ಹೋರಾಡುವ ಸಂಘಟನೆ ಅದಾಗಿದ್ದು, ಅದರ ವಿರುದ್ಧ ಮಾತನಾಡುವವರ ವ್ಯಕ್ತಿತ್ವವೇ ಕಡಿಮೆಯಾಗಲಿದೆ' ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.