ADVERTISEMENT

ನಾಯಕರಿಗೆ ಸಂಕಷ್ಟ ಬಂದಾಗ ಬೀದಿಗಿಳಿದ ಕಾಂಗ್ರೆಸ್: ಜಗದೀಶ ಶೆಟ್ಟರ್

ಜನರ ಪರ ಹೋರಾಟ ಮಾಡದ ಪಕ್ಷ: ಜಗದೀಶ ಶೆಟ್ಟರ್ ಆರೋಪ

​ಪ್ರಜಾವಾಣಿ ವಾರ್ತೆ
Published 18 ಜೂನ್ 2022, 8:13 IST
Last Updated 18 ಜೂನ್ 2022, 8:13 IST
ಜಗದೀಶ ಶೆಟ್ಟರ್
ಜಗದೀಶ ಶೆಟ್ಟರ್   

ಹುಬ್ಬಳ್ಳಿ: ಜನರ ಪರವಾಗಿ ಹೋರಾಟ ಮಾಡದ ಕಾಂಗ್ರೆಸ್ ಕಾರ್ಯಕರ್ತರು, ತಮ್ಮ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ ಸಂಕಷ್ಟ ಎದುರಾದೊಡನೆ ಬೀದಿಗಿಳಿದಿದ್ದಾರೆ ಎಂದು ಶಾಸಕ ಜಗದೀಶ ಶೆಟ್ಟರ್ ವ್ಯಂಗ್ಯವಾಡಿದರು.

ಮಿಷನ್ ಮೋದಿ ಅಗೇನ್ ಪಿಎಂ ಹಾಗೂ ಎಸ್‌.ಎಸ್. ಶೆಟ್ಟರ್ ಫೌಂಡೇಷನ್ ಹುಬ್ಬಳ್ಳಿ ನಗರದಲ್ಲಿ ಆಯೋಜಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೊಳಿಸಿರುವ ಯೋಜನೆಗಳ ಕುರಿತು ಮಾಹಿತಿ ನೀಡುವ ಎರಡು ದಿನಗಳ ಕಾರ್ಯಾಗಾರ ‘ಮಿಷನ್ ಮೋದಿ‘ಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

ನ್ಯಾಷನಲ್ ಹೆರಾಲ್ಡ್ 2 ಸಾವಿರ ಕೋಟಿ ರೂಪಾಯಿ ಹಗರಣವಾಗಿದೆ. ಪ್ರಕರಣದ ವಿಚಾರಣೆಗೆ ಬರುವಂತೆ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿದೊಡನೆ ರಾಹುಲ್, ಸೋನಿಯಾ ಹಾಗೂ ಕಾಂಗ್ರೆಸ್ ನಾಯಕರುಗಳಿಗೆ ಎದೆನಡುಕ ಆರಂಭವಾಯಿತು. ಆರೋಪ ಹೊತ್ತಿರುವ ತಮ್ಮ ಪಕ್ಷದ ನಾಯಕರ ಪರವಾಗಿ ಬೀದಿಗಳಿದಿದ್ದಾರೆ. ಪ್ರಕರಣದಲ್ಲಿ ಅವರ ಪಾತ್ರ ಇಲ್ಲವಾದರೆ, ಕಾನೂನಾತ್ಮಕ ಹೋರಾಟ ನಡೆಸಲಿ. ಅದನ್ನು ಬಿಟ್ಟು ಬೀದಿ ಹೋರಾಟ ಮಾಡುವುದು ಸಲ್ಲದು ಎಂದು ಹೇಳಿದರು.

ADVERTISEMENT

ಮೋದಿ ಅವರು ಪ್ರಧಾನಿ ಆಗಿ 8 ವರ್ಷಗಳ ಕಾಲ ಅತ್ಯುತ್ತಮ ಆಡಳಿತ ನಡೆಸಿದ್ದಾರೆ. ಹತ್ತಾರು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಹಿಂದೆ ನೂರು ರೂಪಾಯಿ ಅನುದಾನ ನೀಡಿದರೆ ಅದು ಗ್ರಾಮ ತಲುಪುವಷ್ಟರಲ್ಲಿ ಹದಿನೈದು ರೂಪಾಯಿ ಆಗಿರುತ್ತಿತ್ತು. ಆದರೆ ಈಗ ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಲಾಗುತ್ತಿದೆ. ಭ್ರಷ್ಟಾಚಾರಕ್ಕೆ ಸಂಪೂರ್ಣ ಕಡಿವಾಣ ಬಿದ್ದಿದೆ. ಬಿಜೆಪಿ ಸರ್ಕಾರದ ಮೇಲೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ ಎಂದರು.

ದೇಶದಲ್ಲಿ ನರೇಂದ್ರ ಮೋದಿ ಅವರಿಗೆ ಸರಿಸಾಟಿಯಾಗಬಲ್ಲ ಇನ್ನೊಬ್ಬ ನಾಯಕ, ಬಿಜೆಪಿ ಮೀರಿಸಬಲ್ಲ ಇನ್ನೊಂದು ಪಕ್ಷ ಇಲ್ಲ. 2024 ಚುನಾವಣೆಯಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹೂಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಬಾಲಾಜಿ ಆಸ್ಪತ್ರೆ ಅಧ್ಯಕ್ಷ ಡಾ. ಕ್ರಾಂತಿಕಿರಣ, ಮಧುಮೇಹ ತಜ್ಞ ಡಾ. ಜಿ.ಬಿ. ಸತ್ತೂರ, ಹೃದ್ರೋಗ ತಜ್ಞ ಡಾ. ಅಮಿತ ಜಿ ಸತ್ತೂರ, ಮಿಷನ್ ಮೋದಿ ರಾಷ್ಟ್ರೀಯ ಅಧ್ಯಕ್ಷ ರಾಮ್‌ಗೋಪಾಲ್ ಕಾಕಾ, ರಾಜ್ಯ ಘಟಕದ ಅಧ್ಯಕ್ಷ ಗೋವಿಂದ ಕುಲಕರ್ಣಿ, ಕಾರ್ಯಾಧ್ಯಕ್ಷ ಗೋವಿಂದ ಕುಲಕರ್ಣಿ, ಹುಬ್ಬಳ್ಳಿ ಘಟಕದ ಅಧ್ಯಕ್ಷ ಸಂಜಯ ರಾಂಕಾ, ಎಸ್‌ಎಸ್‌ ಶೆಟ್ಟರ್ ಫೌಂಡೇಷನ್ ಅಧ್ಯಕ್ಷ ಸಂಕಲ್ಪ ಶೆಟ್ಟರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.